ಮಾಹಿತಿ ಸಂಗ್ರಹಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಸಂಪುಟದಲ್ಲಿ ತೀರ್ಮಾನ
ಬೆಂಗಳೂರು, ಜ. 17: ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ಪ್ರಕ್ರಿಯೆಗೆ ರಾಜ್ಯ ಬಿಜೆಪಿ ಸರ್ಕಾರ ಚಾಲನೆ ಕೊಟ್ಟಿದೆ. ಇಂದು ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿಷೇಧ ಪ್ರಕ್ರಿಯೆ ಆರಂಭಿಸುವ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವರ ಜತೆ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರ
ಅಧಿಕೃತ ತೀರ್ಮಾನ ತೆಗೆದುಕೊಳ್ಳಲಿದ್ದು, ನಂತರ ಎರಡೂ ಸಂಘಟನೆಗಳನ್ನು ನಿಷೇಧ ಮಾಡುವ ಶಿಫಾರಸ್ಸನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿ ಕೊಡಲಿದೆ ಎಂಬ ಮಾಹಿತಿಯಿದೆ.
ಹಿಂದೆ ನಿಷೇಧಕ್ಕೆ ಒಳಗಾಗಿರುವ ಸಿಮಿ ಸಂಘಟನೆಯೇ ಹೆಸರು ಬದಲಿಸಿಕೊಂಡು ಈಗ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳಾಗಿವೆ ಎಂಬ ಸ್ಫೋಟಕ ಮಾಹಿತಿಯನ್ನು ಗೃಹಸಚಿವ ಬಸವರಾಜ್ ಬೊಮ್ಮಾಯಿ ಕೊಟ್ಟಿದ್ದಾರೆ.

ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳ ನಿಷೇಧಕ್ಕೆ ಕ್ರಮ ಕೈಗೊಳ್ಳುತ್ತೇವೆ. ಆ ಸಂಘಟನೆಗಳ ಲಿಂಕ್ ಬಗ್ಗೆ, ಹಿಂದಿನ ಘಟನೆಗಳು, ಆರೋಪಿಗಳ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆ ಚಟುವಟಿಕೆಗಳನ್ನು ನಿಲ್ಲಿಸೋದಕ್ಕೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಸಿಎಎ ಪರವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರುಣ್ ಕೊಲೆ ಯತ್ನ ಪ್ರಕರಣದ ತನಿಖೆ ನಡೆಸಿದಾಗ ಸಂಸದ ತೇಜಸ್ವಿ ಸೂರ್ಯ ಕೊಲೆ ಯತ್ನ ಸಂಗತಿ ಬೆಳಕಿಗೆ ಬಂದಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿದ್ದೇವೆ. ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ನಾಯಕ ತನ್ವೀರ್ ಸೇಠ್ ಹಲ್ಲೆ ಪ್ರಕರಣ, ತಮಿಳುನಾಡಿನಲ್ಲಿ ನಾಲ್ವರು ಉಗ್ರರ ಸೆರೆಯಾಗಿದ್ದು, ಟೌನ್ ಹಾಲ್ ಮುಂದೆ ನಡೆದ ಕೊಲೆ ಯತ್ನ ಈ ಪ್ರಕರಣಗಳಲ್ಲಿ ತನಿಖೆಯಲ್ಲಿ ಈ ಸಂಘಟನೆಗಳ ಸಂಪರ್ಕ ಇರುವುದು ಗೊತ್ತಾಗಿದೆ.

ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ಕೊಲೆಗಳು ಆಗುತ್ತಿವೆ. ಸಂಚುಗಳನ್ನ ಕಳೆದ ಏಳೆಂಟು ವರ್ಷಗಳಿಂದ ಮಾಡಿಕೊಂಡು ಬಂದಿರುವ ಜಾಲವನ್ನು ನಮ್ಮ ಪೊಲೀಸರು ಭೇದಿಸಿದ್ದಾರೆ. ಇಂತಹ ದುಷ್ಕೃತ್ಯಗಳು ನಮ್ಮೆಲ್ಲರನ್ನೂ ಆತಂಕಕ್ಕೀಡು ಮಾಡಿವೆ. ಈ ಹಿಂದೆ ಸರ್ಕಾರ ಎಸ್ಡಿಪಿಐ, ಪಿಎಫ್ಐ ಸೇರಿದಂತೆ ಹಲವು ಸಂಘಟನೆಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿತ್ತು. ಈಗ ಇರುವ ಜಾಲಗಳಿಗೆ ಉಗ್ರ ಚಟುವಟಿಕೆಗಳ ಲಿಂಕ್ ಇದೆ. ಸಿಮಿ ಅಂತಾ ಸಂಘಟನೆ ಇತ್ತು, ಆದನ್ನ ನಿಷೇಧಿಸಿದ ಮೇಲೆ ಈಗ ಎಸ್ಡಿಪಿಐ, ಪಿಎಫ್ಐ ಎಂದು ಹೆಸರು ಬದಲಾಯಿಸಿಕೊಂಡಿವೆ. ಈ ಸಂಘಟನೆಗಳನ್ನು ನಿಷೇಧ ಮಾಡುವ ಬಗ್ಗೆ ತಯಾರಿ ನಡೆಸುತ್ತಿದ್ದೇವೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.











Click it and Unblock the Notifications