ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಪಲಾಯನವಾದಿ : ಅನಂತ್ ವ್ಯಂಗ್ಯ
ಬೆಂಗಳೂರು, ಏಪ್ರಿಲ್ 29 : ಕಳೆದ 30 ವರ್ಷಗಳಿಂದ ಕೈಹಿಡಿದು ಗೆಲ್ಲಿಸಿದ್ದ ಕ್ಷೇತ್ರವನ್ನು ಬಿಟ್ಟು ಬಾದಾಮಿಗೆ ತೆರಳಿರುವ ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಪಲಾಯನವಾದಿ ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ವ್ಯಂಗ್ಯಾಡಿದ್ದಾರೆ.
ಬೆಂಗಳೂರು ನಗರದ ಬೊಮ್ಮನಹಳ್ಳಿ (ಸತೀಶ್ ರೆಡ್ಡಿ) ಕ್ಷೇತ್ರದಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಅನಂತ್ ಕುಮಾರ್, ಚಿಕ್ಕಪೇಟೆ (ಉದಯ್ ಗರುಡಾಚಾರ್) ಮತ್ತು ದೊಡ್ಡಬಳ್ಳಾಪುರ(ಜೆ. ನರಸಿಂಹಸ್ವಾಮಿ)ದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡರು.
ನಿದ್ದೆ, ಸೋಮಾರಿತನ ಹಾಗೂ ದುರಹಂಕಾರ ಮತ್ತು ಭ್ರಷ್ಟಾಚಾರದ ದುರಾಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಇಂತಹ ದುರಾಡಳಿತವನ್ನು ಕಿತ್ತೊಗೆಯಲು ರಾಜ್ಯದ ಜನರು ಸಿದ್ದವಾಗಿದ್ದಾರೆ ಎಂದು ಹೇಳಿದರು.
ರೈತರು ಹಾಗೂ ನೇಕಾರರ ಅಭಿವೃದ್ದಿಗೆ ಭಾರತೀಯ ಜನತಾ ಪಕ್ಷ ಕಟಿಬದ್ದವಾಗಿದೆ. ಅಧಿಕಾರಕ್ಕೆ ಬಂದ ಕೂಡಲೇ ನೇಕಾರರ ಸಾಲ ಮನ್ನಾ ಮಾಡುವುದಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸ್ಪಷ್ಟಪಡಿಸಿದ್ದಾರೆ ಎಂದು ಬಿಎಸ್ವೈ ನೀಡಿರುವ ಭರವಸೆಯನ್ನು ಅನಂತ್ ನೆನಪಿಸಿದರು.
ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ತಪ್ಪಿಸುವ ದೃಷ್ಟಿಯಿಂದ ಕೇಂದ್ರ ಸರಕಾರ 17 ಸಾವಿರ ಕೋಟಿ ರೂಪಾಯಿಗಳ ಸಬ್ ಅರ್ಬನ್ ರೈಲು ಯೋಜನೆಯನ್ನು ಪ್ರಕಟಿಸಿದೆ. ಇದು ಇನ್ನು ಕೆಲವೇ ವರ್ಷಗಳಲ್ಲಿ ಅನುಷ್ಠಾನಗೊಳ್ಳಲಿದೆ. ಇದರಿಂದಾಗಿ ದೊಡ್ಡಬಳ್ಳಾಪುರ, ನೆಲಮಂಗಲ, ಕೆಂಗೇರಿ, ಬಂಗಾರಪೇಟೆ ಹಾಗೂ ಬಿಡದಿಯ ನಾಗರಿಕರಿಗೆ ಅನುಕೂಲವಾಗಲಿದೆ. ಈ ಯೋಜನೆ ಸಂಪೂರ್ಣ ಅನುಷ್ಠಾನಗೊಂಡ ನಂತರ ಮುಂಬಯಿ ಮಾದರಿ ಲೋಕಲ್ ಟ್ರೈನ್ಗಳು ಸಂಚರಿಸಲಿವೆ ಎಂದು ವಿವರಿಸಿದರು.
ಕೇಂದ್ರ ಸರಕಾರದ ಸಹಾಯದೊಂದಿಗೆ ನಮ್ಮ ಮೆಟ್ರೋ ರೈಲು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಬರಲಿದೆ. ಅಲ್ಲದೆ ಸ್ಯಾಟಲೈಟ್ ನಗರಗಳು ಎಂದು ಕರೆಸಿಕೊಳ್ಳುವ ಪಟ್ಟಣಗಳಿಗೂ ಸಂಪರ್ಕ ದೊರೆಯಲಿದೆ ಎಂದರು.
ಬಿಜೆಪಿಯ 150 ಸ್ಥಾನಗಳ ಗುರಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೊಂದಲ ಉಂಟುಮಾಡಲು ಪ್ರಯತ್ನಿಸುತ್ತಿವೆ. ಆದರೆ, ದೇಶದಾದ್ಯಂತ ಮೋದಿ ಅಲೆ ಇದ್ದು ಅಭಿವೃದ್ದಿ ಪರವಾದ ಒಲವು ಕಂಡಬರುತ್ತಿದೆ. ಉತ್ತರ ಪ್ರದೇಶ, ತ್ರಿಪುರ ಹಾಗೂ ಅಸ್ಸಾಂ ರಾಜ್ಯದಲ್ಲಿ ದೊರಕಿದ ಗೆಲುವು ಕರ್ನಾಟದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.