ಆರ್ಆರ್ ನಗರ ಚುನಾವಣೆ: ಮೈತ್ರಿಗೆ ಜೆಡಿಎಸ್ನಲ್ಲಿ ಮೂಡದ ಸಹಮತ?
ಬೆಂಗಳೂರು, ಮೇ 25: ಈಗಾಗಲೇ ಸರ್ಕಾರ ರಚನೆಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್, ರಾಜರಾಜೇಶ್ವರಿ ನಗರ ಮತ್ತು ಜಯನಗರ ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಆರ್ಆರ್ ನಗರದಲ್ಲಿ ಕಾಂಗ್ರೆಸ್ನ ಮುನಿರತ್ನ ನಾಯ್ಡು ಸ್ಪರ್ಧಿಸಲಿದ್ದಾರೆ. ಅವರಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಗುರುವಾರ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದರು.
ಆದರೆ, ಮುನಿರತ್ನ ಅವರಿಗೆ ಬೆಂಬಲ ನೀಡುವ ವಿಚಾರವಾಗಿ ಜೆಡಿಎಸ್ ಇನ್ನೂ ಸಹಮತ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.
ಮುನಿರತ್ನ ಅವರನ್ನು ಬೆಂಬಲಿಸಿ ಅವರ ಪರ ಪ್ರಚಾರ ಮಾಡಲು ಜೆಡಿಎಸ್ ಹಿಂದೇಟು ಹಾಕುತ್ತಿದೆ. ಇದರಿಂದ ಚುನಾವಣೆಗೆ ಸ್ಪರ್ಧಿಸಬೇಕಾದ ಸನ್ನಿವೇಶ ಎದುರಾಗಬಹುದು. ಯಾವುದಕ್ಕೂ ಸಿದ್ಧರಾಗಿರಿ ಎಂದು ಜೆಡಿಎಸ್ ತನ್ನ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರಿಗೆ ಸೂಚನೆ ನೀಡಿದೆ.

ರಾಜರಾಜೇಶ್ವರಿ ನಗರದಲ್ಲಿ ಕೊಳೆಗೇರಿಯ ಜನರಿಗೆ ಸೇರಿದ ಸುಮಾರು ಹತ್ತು ಸಾವಿರ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಇದು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರದೇ ಕೃತ್ಯ ಎಂದು ಬಿಜೆಪಿ ಆರೋಪಿಸಿತ್ತು.
ಆರೋಪಗಳನ್ನು ಎದುರಿಸುತ್ತಿರುವ ಮುನಿರತ್ನ ಅವರಿಗೆ ಬೆಂಬಲ ನೀಡಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ಸಂಬಂಧ ಗುರುವಾರ ತಡರಾತ್ರಿಯವರೆಗೂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ
ಚರ್ಚೆ ನಡೆದಿದೆ.
ಮುನಿರತ್ನ ಅವರನ್ನು ಬೆಂಬಲಿಸಲು ಕುಮಾರಸ್ವಾಮಿ ಮತ್ತು ಕೆಲವು ಮುಖಂಡರಲ್ಲಿ ಒಮ್ಮತ ಮೂಡಿಲ್ಲ. ಸನ್ನಿವೇಶ ಎದುರಾದರೆ ಕಣಕ್ಕೆ ಇಳಿಯಬೇಕಾಗಬಹುದು. ಹೀಗಾಗಿ ಎಲ್ಲ ರೀತಿಯಲ್ಲಿ ಸಿದ್ಧರಾಗಿರುವಂತೆ ಎಸ್.ವಿ. ರಾಮಚಂದ್ರ ಅವರಿಗೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಗೂ ಜಯನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಪರಸ್ಪರ ಬೆಂಬಲಿಸುವುದಾಗಿ ಉಭಯ ಪಕ್ಷಗಳು ತೀರ್ಮಾನಿಸಿದ್ದವು. ಆದರೆ, ಮೈತ್ರಿ ವಿಚಾರವಾಗಿ ಇರುವ ಗೊಂದಲ ಇನ್ನೂ ಬಗೆಹರಿದಿಲ್ಲ ಎಂದು ಮೂಲಗಳು ತಿಳಿಸಿವೆ.












Click it and Unblock the Notifications