ಸೀನಿಯಾರಿಟಿ ಮೇಲೆ ಗುತ್ತಿಗೆದಾರರ ಹಣ ಬಿಡುಗಡೆ: ಸಿಎಂ ಭರವಸೆ
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ಸರ್ಕಾರದಲ್ಲಿ ಶೇ40 ದಂಧೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಪ್ರಧಾನಿಗೂ ಪತ್ರವನ್ನು ಬರೆದಿದ್ದರು. ಕಂಟ್ರಾಕ್ಟರ್ ಸಂಘದವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ 40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪವನ್ನೇ ಮಾಡಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದ ನಿಯೋಗ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ತಮ್ಮ ತೊಂದರೆಗಳನ್ನು ತೆರೆದಿಟ್ಟಿದ್ದಾರೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಗುತ್ತಿಗೆದಾರರು ಇತ್ತೀಚೆಗೆ ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಕೆಂಪಣ್ಣ ಅವರು ಮುಖ್ಯಮಂತ್ರಿಯವರಿಗೆ ಸವಿವರವಾಗಿ ತಿಳಿಸಿದರು. ಆ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಇದರ ಜೊತೆಗೆ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ರನ್ನು ಕರೆದು ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಿ ಸೀನಿಯಾರಿಟಿ ಆಧಾರದಲ್ಲಿ ಬಿಲ್ ಬಿಡುಗಡೆ ಮಾಡಿಸುವಂತೆ ಹೇಳಿದ್ದಾರೆ.
ಕೆಂಪಣ್ಣ ಹೇಳಿದ್ದೇನು..?
""ಗುತ್ತಿಗೆದಾರರು ಸಿಎಂರನ್ನು ಭೇಟಿಯಾಗಿ ತಮಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಭ್ರಷ್ಟಾಚಾರ ಕಡಿಮೆ ಮಾಡಲು ಸಿಎಂ ಗೆ ಮನವಿ ಮಾಡಿದ್ದೇವೆ. ಪತ್ರದ ಮೂಲಕ ಕೆಲ ಅಂಶಗಳ ಬಗ್ಗೆ ಬರೆದು ಕೊಟ್ಟಿದ್ದೇವೆ, ಅದಕ್ಕೆ ತಕ್ಕಂತೆ ಅವ್ರು ಏನಾದರೂ ದಾಖಲೆ ಕೇಳಿದ್ರೆ, ನಾವು ಕೊಡಲು ಸಿದ್ದರಿದ್ದೇವೆ, ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ,'' ಎಂದು ಸಭೆಯ ಬಳಿಕ ಕೆಂಪಣ್ಣ ವಿವರಿಸಿದರು.

ಇನ್ನು ಸೀನಿಯಾರಿಟಿ ಮೇಲೆ ಬಿಲ್ ಬಿಡುಗಡೆ ಮಾಡುವುದಾಗಿ ಕೇಳಿದ್ದೇವೆ. ನಿಮ್ಮ ಬೇಡಿಕೆಗೆ ಸ್ಪಂದನೆ ನೀಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ. ಭ್ರಷ್ಟಚಾರಕ್ಕೆ ಕಡಿವಾಣ ಹಾಕಲು ಮನವಿ ಕೂಡ ಮಾಡಲಾಗಿದೆ ಎಂದು ಕೆಂಪಣ್ಣ ತಿಳಿಸಿದರು.
ಗುತ್ತಿಗೆದಾರರ ಸಂಘದವರು ಬರುವ ವೇಳೆಗೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರನ್ನು ಸಹ ಮುಖ್ಯಮಂತ್ರಿಗಳು ಕರೆಸಿಕೊಂಡಿದ್ದರು. ಇದೇ ಸಮಯದಲ್ಲಿ ಸಿಸಿ ಪಾಟೀಲ್ ರವರು ಸಹ ಗುತ್ತಿಗೆದಾರರ ಸಂಘದ ಬೇಡಿಕೆ ಇಡೇರಿಸುವ ಭರವಸೆಯನ್ನು ನೀಡಿದ್ದಾರೆ.

ಒಂದು ತಿಂಗಳು ಕಾಮಾಗಾರಿ ನಿಲ್ಲಿಸೋದಾಗಿ ಹೇಳಿದ್ದರ ಬಗ್ಗೆ ಪ್ರತಿಕ್ರಿಯೆ
ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿರುವ ಕೆಂಪಣ್ಣನವರು ಒಂದು ತಿಂಗಳು ಕೆಲಸ ನಿಲ್ಲಿಸೋದಾಗಿ ಹೇಳಿದ್ದರು. ಇವತ್ತು ಸಿಎಂ ಭೇಟಿ ಬಳಿಕ ""ನಮ್ಮ ಪದಾಧಿಕಾರಿ ಸಭೆ ಮೇ 11 ರಂದು ನಡೆಯಲಿದೆ. ಆ ಬಳಿಕ ನಮ್ಮ ತೀರ್ಮಾನ ತಿಳಿಸುತ್ತೇವೆ'' ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಚರ್ಚೆಯಾಗಿತ್ತಾ..?
ಸಿಎಂ ಭೇಟಿಯ ವೇಳೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ವಿಚಾರ ಚರ್ಚೆಯಾಗಿತ್ತ ಎಂದು ಮಾಧ್ಯಮದವರ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆಯನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನೀಡಲಿಲ್ಲ.

ಟಂಡರ್ ತನಿಖೆಗೆ ಮುಖ್ಯಮಂತ್ರಿಗಳ ಒಪ್ಪಿಗೆ
ಐದು ಕೋಟಿ ಮೇಲ್ಪಟ್ಟ ಟೆಂಡರ್ ತನಿಖೆ ನಡೆಸಲು ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಗುತ್ತಿಗೆದಾರರ ಸಂಘವು ಎರಡು ಕೋಟಿ ಮೇಲಿನ ಟೆಂಡರ್ ಗಳ ಬಗ್ಗೆಯು ತನಿಖೆ ನಡೆಸುವಂತೆ ಕೋರಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನ ಬಳಕೆಗೆ ಕೋರಿಕೆ.
ಭ್ರಷ್ಟಾಚಾರವನ್ನು ತಡೆಯಲೇ ಬೇಕಾಗಿದೆ. ಕಮಗಾರಿಗಳ ಗುತ್ತಿಗೆಯಲ್ಲಿ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮತ್ತು ಬಲ್ ಪಾವತಿಗೆ ಹೊಸ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆಯನ್ನು ರೂಪಿಸಿದರೆ ಭ್ರಷ್ಟಾಚಾರ ತಡೆಯಬಹುದು ಎಂದು ಗುತ್ತಿಗೆದಾರರ ಸಂಘವು ಕೋರಿಕೆಯನ್ನು ಸಲ್ಲಿಸಿದೆ.












Click it and Unblock the Notifications