ಬ್ಯಾಂಕ್ ಹಗರಣ, ಪ್ರಹ್ಲಾದ್ ಜೋಶಿ ರಾಜೀನಾಮೆಗೆ ಆಗ್ರಹ
ಬೆಂಗಳೂರು, ನ. 20 : ಕೆನರಾ ಬ್ಯಾಂಕ್ ಠೇವಣಿ ಹಗರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ ಜೋಶಿ ಅವರ ಹೆಸರು ಕೇಳಿ ಬಂದಿದೆ, ಗೋಪಾಲ ಜೋಶಿ ಬಿಜೆಪಿ ಅಧ್ಯಕ್ಷರ ಮನೆ ಮತ್ತು ಕಚೇರಿಯನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ. ಆದ್ದರಿಂದ ಪ್ರಹ್ಲಾದ್ ಜೋಶಿ ರಾಜೀನಾಮೆ ನೀಡಬೇಕು ಎಂದು ಸಚಿವ ಟಿ.ಬಿ.ಜಯಚಂದ್ರ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಕೆನರಾ ಬ್ಯಾಂಕ್ನ ಮಾಜಿ ಅಧಿಕಾರಿಯಾದ ಗೋಪಾಲ ಜೋಶಿ ಅವರು ತಮ್ಮ ಸಹೋದರರಾದ ಬಿಜೆಪಿ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಅವರ ಕಚೇರಿಯ ದೂರವಾಣಿ, ಫ್ಯಾಕ್ಸ್ ಮತ್ತು ಮನೆ ಬಳಸಿಕೊಂಡಿದ್ದಾರೆ.

ಗೋಪಾಲ ಜೋಶಿ ಅವರು ಪ್ರಹ್ಲಾದ ಜೋಶಿ ಜತೆಯಲ್ಲೇ ವಾಸವಿದ್ದಾರೆ ಎಂಬ ಮಾಹಿತಿಯೂ ಇದೆ. ಆದ್ದರಿಂದ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಸ್ವಾಮ್ಯದ ಎಂಎಂಎಲ್, ಕರ್ನಾಟಕ ಬ್ರಿವೆರೀಸ್, ಹಟ್ಟಿ ಗೋಲ್ಡ್ ಮೈನ್, ರಾಜೀವ್ಗಾಂಧಿ ವಿ.ವಿ.ಯ ಹಣವನ್ನು ಠೇವಣಿ ಇಟ್ಟು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಿಂದಲೂ ವರದಿ ಕೇಳಿದ್ದೇನೆ, ತನಿಖೆಗೆ ಸಹಕರಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.
ಜಾಮೀನು ಅರ್ಜಿ ಮುಂದಕ್ಕೆ : ಹಣ ದುರ್ಬಳಕೆ ಪ್ರಕರಣದಲ್ಲಿ ಬಿ. ಗೋಪಾಲ ಜೋಶಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಅವರು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ ನ್ಯಾಯಾಲಯದಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಡಿಸೆಂಬರ್ 11ಕ್ಕೆ ನಡೆಯಲಿದೆ.
ಆರೋಪವೇನು : 1981 ರಿಂದ ಕೆನರಾ ಬ್ಯಾಂಕ್ನಲ್ಲಿ ಉದ್ಯೋಗದಲ್ಲಿರುವ ಗೋಪಾಲ ಜೋಶಿ ಅವರನ್ನು ಹಣ ದುರ್ಬಳಕೆ ಆರೋಪದ ಮೇಲೆ 2013ರ ಜನವರಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಬ್ಯಾಂಕಿನಲ್ಲಿ ಇರಿಸಿದ್ದ ಠೇವಣಿಯನ್ನು ಮೂರನೇ ವ್ಯಕ್ತಿಯ ಹೆಸರಿಗೆ ವರ್ಗಾಯಿಸಿಕೊಂಡು ಅದರ ನಿರ್ಹವಣೆ ಹಾಗೂ ಬಡ್ಡಿ ದರದಿಂದ ವೈಯಕ್ತಿಕ ಲಾಭ ಪಡೆದು ಬ್ಯಾಂಕಿಗೆ ಸುಮಾರು ರೂ. 1.08 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications