ಬೆಂಗಳೂರಿನಲ್ಲಿ ಮೋದಿ : ಕಾಂಗ್ರೆಸ್ ಬಿಜೆಪಿ ನಡುವೆ ಟ್ವೀಟ್ ವಾರ್
ಬೆಂಗಳೂರು, ಫೆಬ್ರವರಿ 04 : ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರು ಬರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮೋದಿಯವರನ್ನು ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಮಹದಾಯಿ ನೀರು ವ್ಯಾಜ್ಯ ಇತ್ಯರ್ಥ ಮಾಡಲು ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸದಿರುವದು ಕಾಂಗ್ರೆಸ್ ನಾಯಕರನ್ನು ಭಾರೀ ಕೆಣಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕರ್ನಾಟಕಕ್ಕೆ ಮೊದಲು ಆದ್ಯತೆ ನೀಡಿ, ರಾಜ್ಯದ ಜನತೆಗೆ ನೀರು ಕೊಡಿಸುವಲ್ಲಿ ಸ್ವಲ್ಪ ಸಮಯ ಮೀಸಲಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರ ಹಿಂದೆಯೇ, ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ಕುಮಾರಿ ದಿವ್ಯಾ ಸ್ಪಂದನಾ, ರಾಜ್ಯದ ಐಟಿ ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಖಂಡ್ರೆ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಕೋಆರ್ಡಿನೇಟರ್ ಹಸೀಬಾ, ಕಾಂಗ್ರೆಸ್ ಕಟ್ಟಾ ಬೆಂಬಲಿಗ ಶ್ರೀವತ್ಸ ಮುಂತಾದವರು ಪುಖಾಂನುಪುಂಖವಾಗಿ ಟ್ವೀಟ್ ಹರಿಯಬಿಡುತ್ತಿದ್ದಾರೆ.
#NammaKarnatakaFirst ಎಂಬ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿದ್ದು, ಕರ್ನಾಟಕದಲ್ಲಿ ಹೂಡಿಕೆಗಾಗಿ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ನಂಬರ್ 1 ಆಗಿದೆ, ಕಾನೂನು ಸುವ್ಯವಸ್ಥೆ ಕಾಪಾಡಿವಲ್ಲಿಯೂ ಕರ್ನಾಟಕ ನಂಬರ್ 1, ದೇಶದ ಪಕೋಡಾ ಮ್ಯಾನ್ ಗೆ ಸ್ವಾಗತ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲ ಪ್ರಶ್ನೆಗಳಿಗೆ ಮೋದಿಯವರು ತಕ್ಕ ಉತ್ತರ ನೀಡುತ್ತಾರಾ?
|
ಸ್ಟಾರ್ಟ್ ಅಪ್ ಹಬ್ ಗೆ ಸ್ವಾಗತ ಮೋದಿಯವರೆ
ನರೇಂದ್ರ ಮೋದಿಯವರೆ, ಭಾರತದ ಇನ್ನೋವೇಶನ್ ಹಬ್ ಮತ್ತು ಸ್ಟಾರ್ಟ್ ಅಪ್ ಹಬ್ ಆಗಿರುವ ನಮ್ಮ ಬೆಂಗಳೂರಿಗೆ ಬಿಡುವು ಮಾಡಿಕೊಂಡು ಬರುತ್ತಿರುವುದಕ್ಕೆ ನಿಮಗೆ ಸ್ವಾಗತ ಸುಸ್ವಾಗತ. ರಾಜ್ಯದ ಜನರೆಲ್ಲರ ಪರವಾಗಿ, ಕರ್ನಾಟಕದ ಜನರ ನೀರಿನ ಅಗತ್ಯವನ್ನು ಪೂರೈಸಬೇಕು ಮತ್ತು ಮಹದಾಯಿ ನೀರು ವ್ಯಾಜ್ಯವನ್ನು ಬಗೆಹರಿಸಬೇಕು ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
|
ದೇಶದ ಪಕೋಡಾ ಮ್ಯಾನ್ ಗೆ ಸ್ವಾಗತ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಸಂಯೋಜಕರಾಗಿರುವ ಎಎನ್ ನಟರಾಜ್ ಅವರು ಐಟಿ ರಫ್ತಿನಲ್ಲಿ ಕರ್ನಾಟಕ ನಂಬರ್ 1, ಹೂಡಿಕೆಗಾಗಿ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ನಂಬರ್ 1 ಎಂದು ಹೇಳಿದ್ದು, ದೇಶದ ಪಕೋಡಾ ಮ್ಯಾನ್ ಗೆ ಸ್ವಾಗತ ಎಂದು ಕಾಲು ಎಳೆದಿದ್ದಾರೆ.
|
ಕರ್ನಾಟಕ ಈ-ಪುರಸ್ಕಾರ ಪ್ರಶಸ್ತಿಗೆ ಭಾಜನ
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸಿ ಪಂಚಾಯತ್ ಗಳಿಗೆ ಅಧಿಕಾರಿ ನೀಡಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ಕೇಂದ್ರದ ಪಂಚಾಯತ್ ರಾಜ್ ಸಚಿವಾಲಯದಿಂದ ಕರ್ನಾಟಕ ಸತತ 4 ವರ್ಷಗಳ ಕಾಲ ಈ-ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿದೆ. ಇದನ್ನು ನಿಮ್ಮ ಪ್ರಧಾನಿಗೆ ಹೇಳಿ ಎಂದು ಬಿಜೆಪಿಗೆ ಐಟಿ ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆಯವರು ಹೇಳಿದ್ದಾರೆ.
|
ಕರ್ನಾಟಕದ ಸಾಧನೆಯನ್ನು ನಿರ್ಲಕ್ಷ್ಯಿಸುತ್ತಲೇ ಬಂದಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದ ಸಾಧನೆಯನ್ನು ನಿರ್ಲಕ್ಷ್ಯಿಸುತ್ತಲೇ ಬಂದಿದ್ದಾರೆ. ಆದರೆ, ಸ್ಟಾರ್ಟ್ ಅಪ್ ಕಂಪನಿಗಳಿಗೆ ನೀತಿ ರೂಪಿಸುವಲ್ಲಿ, ಐಟಿ ರಫ್ತಿನಲ್ಲಿ, ಔದ್ಯೋಗಿಕ ಹೂಡಿಕೆಯಲ್ಲಿ ನಂಬರ್ 1 ಆಗಿದ್ದು, ಭಾರತದ ಬಯೋಟೆಕ್ ಹಬ್ ಆಗಿದೆ ಎಂದಿದ್ದಾರೆ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಖಂಡ್ರೆ.
|
ಅಮಿತ್ ಶಾ ಮೊದಲ ಬಾರಿಗೆ ಸತ್ಯ ಹೇಳಿದ್ದಾರೆ
ಯಾವಾಗಲೂ ಸುಳ್ಳನ್ನೇ ನುಡಿಯುವ ಅಮಿತ್ ಶಾ ಅವರು, ಮೊದಲ ಬಾರಿಗೆ ನಿಜವನ್ನು ನುಡಿದಿದ್ದಾರೆ. ಕರ್ನಾಟಕಕ್ಕೆ ಹೆಚ್ಚು ಬಂಡವಾಳ ನೀಡದಿದ್ದಕ್ಕೆ ಯಡಿಯೂರಪ್ಪನವರು ಬಿಜೆಪಿಯನ್ನೇ ದೂರಿದ್ದಾರೆ ಎಂದು ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ವಿಡಿಯೋವೊಂದನ್ನು ಹಾಕಿದ್ದಾರೆ. ಅದರಲ್ಲೇನಿದೆ ನೀವೇ ನೋಡಿ.
|
ಹೌದು ಹಲವಾರು ಸಂಗತಿಗಳಲ್ಲಿ ಕಾಂಗ್ರೆಸ್ ನಂಬರ್ 1
ನರೇಂದ್ರ ಮೋದಿಯವರನ್ನು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಸಿದ್ದರಾಮಯ್ಯನವರೆ. ಕರ್ನಾಟಕ ಹಲವಾರು ಸಂಗತಿಗಳಲ್ಲಿ ನಂಬರ್ 1. ಭ್ರಷ್ಟಾಚಾರದಲ್ಲಿ, ರೈತರ ಆತ್ಮಹತ್ಯೆಯಲ್ಲಿ, ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ, ಅಧಿಕಾರಿಗಳ ನಿಗೂಢ ಸಾವು, ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ, ಕುಸಿದು ಬೀಳುತ್ತಿರುವ ಬೆಂಗಳೂರಿನ ಮೂಲಸೌಕರ್ಯ... ಎಲ್ಲದರಲ್ಲೂ ನಂಬರ್ 1 - ಯಡಿಯೂರಪ್ಪ.












Click it and Unblock the Notifications