ಉಪಚುನಾವಣೆ: ಬಿಜೆಪಿ ವಿರುದ್ಧ ದೂರು ನೀಡಿದ ರಾಜ್ಯ ಕಾಂಗ್ರೆಸ್
ಬೆಂಗಳೂರು, ಸೆಪ್ಟೆಂಬರ್ 23: ಉಪಚುನಾವಣೆ ಘೋಷಣೆ ಆಗಿ ದಿನ ಕಳೆಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್, ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಉಪಚುನಾವಣೆ ಘೊಷಣೆ ಆದ ಬಳಿಕ ರಾಜ್ಯ ಸರ್ಕಾರವು ಸಂಚಾರಿ ನಿಯಮ ಉಲ್ಲಂಘನೆ ದಂಡವನ್ನು ಕಡಿತಗೊಳಿಸಿದೆ, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿ ಆಯೋಗಕ್ಕೆ ದೂರು ದಾಖಲಿಸಿದೆ.
ಶನಿವಾರ ಬೆಳಿಗ್ಗೆ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿ, 'ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ' ಎಂದಿತು. ಅದೇ ದಿನ ಸಂಜೆ ವೇಳೆಗೆ ರಾಜ್ಯ ಸರ್ಕಾರವು ಸಂಚಾರಿ ನಿಯಮ ಉಲ್ಲಂಘನೆಯ ದುಬಾರಿ ದಂಡವನ್ನು ಕಡಿತಗೊಳಿಸಿ ಆದೇಶ ಹೊರಡಿಸಿತು. ಇದು ಕಾಂಗ್ರೆಸ್ನ ಕೆಂಗಣ್ಣಿಗೆ ಕಾರಣವಾಗಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಉಪಚುನಾವಣೆ ಘೋಷಣೆಯಾದ ನಂತರ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ ಇದು ಸಹ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಶನಿವಾರ ಸಂಜೆ ಅರಣ್ಯ ಭವನದಲ್ಲಿ ಸಿಎಂ ಯಡಿಯೂರಪ್ಪ ಅವರು ಅನರ್ಹ ಶಾಸಕರ ಜೊತೆ ಸಭೆ ನಡೆಸಿದ್ದರ ಬಗ್ಗೆಯೂ ತಕರಾರು ಎತ್ತಿರುವ ಕಾಂಗ್ರೆಸ್, ಸರ್ಕಾರಿ ಸ್ಥಳಗಳನ್ನು ರಾಜಕೀಯ ಮಾಡಲು ಸಿಎಂ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದೆ.
ರಾಜ್ಯದಲ್ಲಿ ಶನಿವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಸರ್ಕಾರವು ಯಾವುದೇ ಹೊಸ ಘೋಷಣೆಗಳನ್ನು ಮಾಡುವಂತಿಲ್ಲ. ಚುನಾವಣೆ ಘೋಷಣೆಯಾದ ಕಾರಣ ಚಳಿಗಾಲದ ಅಧಿವೇಶನವನ್ನೂ ಮುಂದೂಡಲಾಗಿದೆ.












Click it and Unblock the Notifications