ಸಿಎಂ-ವೇಣುಗೋಪಾಲ್ ಭೇಟಿ; ಸಂಜೆಯ ಸಮನ್ವಯ ಸಭೆಯತ್ತ ಎಲ್ಲರ ಚಿತ್ತ
ನಿನ್ನೆ ಸಿಎಂ ವೇಣುಗೋಪಾಲ್ ರನ್ನು ಪಕ್ಷದ ಕಚೇರಿಯಲ್ಲಿ ಭೇಟಿಯಾಗಿದ್ದರಾದರೂ ಸಮಾಲೋಚನೆ ನಡೆಸಲು ಸಾಧ್ಯವಾಗಿರಲಿಲ್ಲ. ಇಂದು ಸಿದ್ದರಾಮಯ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜತೆ ಸುದೀರ್ಘ ಮಾತುಕತೆ ನಡೆಸಿದರು.
ಬೆಂಗಳೂರು, ಮೇ 10: ಸಿದ್ದರಾಮಯ್ಯ ಜತೆ ಸಮಾಲೋಚನೆ ನಡೆಸಲು ಇಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದರು.
ಕಳೆದ ಮೂರು ದಿನಗಳಿಂದ ಸತತ ಸುತ್ತಾಟ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಳಲ್ಲಿನ ಗೊಂದಲ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ದೂರುಗಳ ಸುರಿಮಳೆ, ಹಿರಿಯ ನಾಯಕ ಅಡಗೂರು ವಿಶ್ವನಾಥ್ ಭೇಟಿ, ಸಂಸದರು ಹಾಗೂ ಶಾಸಕರು, ಪಕ್ಷದ ಘಟಕಗಳ ಅಧ್ಯಕ್ಷರ ಜತೆ ಸಮಾಲೋಚನೆ... ಹೀಗೆ ನಿರಂತರ ಭೇಟಿಗಳಲ್ಲೇ ಕಳೆದು ಹೋದ ವೇಣುಗೋಪಾಲ್ ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.[ಕರ್ನಾಟಕ ಕಾಂಗ್ರೆಸಿನ ಹೊಸ ಉಸ್ತುವಾರಿ, ಇವರೇ ಕೆ.ಸಿ ವೇಣುಗೋಪಾಲ್!]
ನಿನ್ನೆ ಮುಖ್ಯಮಂತ್ರಿ ವೇಣುಗೋಪಾಲ್ ರನ್ನು ಪಕ್ಷದ ಕಚೇರಿಯಲ್ಲಿ ಭೇಟಿಯಾಗಿದ್ದರಾದರೂ ಸಮಾಲೋಚನೆ ನಡೆಸಲು ಸಾಧ್ಯವಾಗಿರಲಿಲ್ಲ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ಕಾರ್ಯದರ್ಶಿಗಳಾದ ಪಿ.ಸಿ.ವಿಷ್ಣುನಾದ್, ಮಧು ಯಕ್ಷಿಗೌಡ, ಮಾಣಿಕಂ ಟಾಗೋರ್ ಜತೆ ಸುದೀರ್ಘ ಮಾತುಕತೆ ನಡೆಸಿದರು.
ನಾನೇ ಅಧ್ಯಕ್ಷನಾಗಿರುತ್ತೇನೆ - ಪರಮೇಶ್ವರ್
ಕೆಸಿ ವೇಣುಗೋಪಾಲ್ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮುಂದಿನ ಅವಧಿಗೆ ನಾನೇ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂಬ ಅಹವಾಲು ಮಂಡಿಸಿದರು.
"ಕಳೆದ ಆರುವರೆ ವರ್ಷಗಳಿಂದ ಪಕ್ಷಾಧ್ಯಕ್ಷನಾಗಿ ಹುದ್ದೆ ನಿಭಾಯಿಸಿದ್ದೇನೆ. ಇನ್ನೇನು ಸದ್ಯದಲ್ಲೇ ಚುನಾವಣೆ ಬರಲಿದೆ. ಇದರಿಂದ ಹೊಸದಾಗಿ ಪಕ್ಷಾಧ್ಯರಾಗುವವರಿಗೆ ಕಷ್ಟವಾಗಲಿದೆ. ನಾನೇ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ," ಎಂದು ಅಭಿಪ್ರಾಯ ಮಂಡಿಸಿದರು.
ಶಾಸಕರ ಭೇಟಿ ನಿಷಿದ್ಧ
ಇಂದು ಕೆ.ಸಿ ವೇಣುಗೋಪಾಲ್ ಭೇಟಿಯಾಗಲು ಕಾವೇರಿ ಅಧಿಕೃತ ನಿವಾಸಕ್ಕೆ ಬಂದಿದ್ದ ಶಾಸಕರಿಗೆ ಭೇಟಿಯಾಗಲು ಅವಕಾಶ ನೀಡಿಲ್ಲ. ಸಿಎಂ ಕಟ್ಟಪ್ಪಣೆ ಮೇರೆಗೆ ಭದ್ರತಾ ಸಿಬ್ಬಂದಿಗಳು ಯಾರನ್ನೂ ಮನೆಯೊಳಕ್ಕೆ ಬಿಡದ ಹಿನ್ನಲೆಯಲ್ಲಿ ಮನೆ ಬಾಗಿಲವರೆಗೆ ಬಂದ ಶಾಸಕರು ಹಾಗೇ ಹಿಂದುರುಗಿದರು.[ಬೆಂಗ್ಳೂರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಆಗಮನ]
ತಲೆ ಸುತ್ತಿ ಬಿದ್ದ ವಿಷ್ಣುನಾದ್
ಕಳೆದ ಮೂರು ದಿನಗಳಿಂದ ಬಿಡುವಿಲ್ಲದ ಸುತ್ತಾಡದಲ್ಲಿ ತೊಡಗಿದ್ದ ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ್ ಮುಖ್ಯಮಂತ್ರಿ ನಿವಾಸದಲ್ಲಿ ಕುಸಿದು ಬಿದ್ದ ಘಟನೆಯೂ ನಡೆಯಿತು. ಲೋ ಬಿಪಿಯಿಂದ ಬಳಲುತ್ತಿದ್ದ ಅವರಿಗೆ ತಕ್ಷಣ ವೈದ್ಯರನ್ನು ಕರೆಸಿ ಕಾವೇರಿಯಲ್ಲೇ ಚಿಕಿತ್ಸೆ ಕೊಡಿಸಲಾಯಿತು. ನಂತರ ಚೇರಿಸಿಕೊಂಡ ವಿಷ್ಣುನಾದ್ ಮತ್ತೆ ಪಕ್ಷದ ಕೆಲಸಗಳಿಗೆ ಹೊರಟು ನಿಂತರು.
ಸಂಜೆ ಸಮನ್ವಯ ಸಮಿತಿ ಸಭೆ
ಕರ್ನಾಟಕ ಉಸ್ತುವಾರಿಯಾಗಿ ನೇಮಕವಾದ ನಂತರ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ಕೆಸಿ ವೇಣುಗೋಪಾಲ್ ಇಂದು ತಮ್ಮ ಪ್ರವಾಸ ಕೊನೆಗೊಳಿಸುವ ಸಾಧ್ಯತೆ ಇದೆ.
ಇದೇ ವೇಳೆ ಇಂದು ಸಂಜೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಜರುಗಲಿದ್ದು 2018 ಚುನಾವಣೆ ಸೇರಿದಂತೆ ಕಾಂಗ್ರೆಸ್ ಆಂತರಿಕೆ ಬೆಳವಣಿಗೆಗಳ ಬಗ್ಗೆ ಪ್ರಮುಖ ನಿರ್ಧಾರಗಳು ಹೊರ ಬೀಳುವ ಸಾಧ್ಯತೆ ಇದೆ.[ಕೆಪಿಸಿಸಿ ಅಧ್ಯಕ್ಷರಾಗಲು ಡಿಕೆ ಶಿವಕುಮಾರ್ ಸೂಕ್ತ: ನಮ್ಮ ಓದುಗರು]
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸ್ಪಷ್ಟ ರೂಪ
ಕೆಪಿಸಿಸಿ ಅಧ್ಯಕ್ಷ ಗಾದಿ ಕುರಿತಂತೆ ಉಸ್ತುವಾರಿ ನಾಯಕರಿಂದ ಅಭಿಪ್ರಾಯ ಸಂಗ್ರಹಣೆ ಬಹುತೇಕ ಅಂತ್ಯಗೊಂಡಿದೆ. ಹಲವು ಮುಖಂಡರ ಜತೆ 'ಒನ್ ಟು ಒನ್' ಮಾತುಕತೆ ನಡೆಸಿದ್ದಾರೆ. ಇಂದು ಸಂಜೆ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಗಾದಿಯ ಸ್ಪಷ್ಟ ಚಿತ್ರಣ ಸಿಗಲಿದೆ.
ಇದೇ ವೇಳೆ ಸರ್ಕಾರ ಹಾಗೂ ಪಕ್ಷದ ನಡುವಿನ ಸಮನ್ವಯದ ಬಗ್ಗೆಯೂ ಸಮಿತಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.