ಸಚಿವ ಸ್ಥಾನಕ್ಕೆ ಪಕ್ಷೇತರ ಶಾಸಕ ಎಚ್ ನಾಗೇಶ್ ರಾಜೀನಾಮೆ, ಬಿಜೆಪಿಗೆ ಬೆಂಬಲ ಘೋಷಣೆ
ಬೆಂಗಳೂರು, ಜುಲೈ 8: ಕಳೆದ ತಿಂಗಳಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮುಳಬಾಗಿಲು ಪಕ್ಷೇತರ ಶಾಸಕ ಎಚ್ ನಾಗೇಶ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.
ಸರ್ಕಾರದ ಬುಡ ಅಲುಗಾಡಲು ಆರಂಭಿಸಿರುವುದರಿಂದ ಮತ್ತು ಅತೃಪ್ತ ಶಾಸಕರ ಗುಂಪಿನಲ್ಲಿ ತಮಗೆ ಸಚಿವ ಸ್ಥಾನ ದೊರೆತಿರುವುದಕ್ಕೆ ಅಸಮಾಧಾನ ಹೆಚ್ಚಾಗಿದೆ ಎಂಬ ಕಾರಣಗಳಿಂದ ಅವರು ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದಿಂದ ಹೊರಬರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ನಾಗೇಶ್ ಅವರಿಗೆ ಸಣ್ಣ ಕೈಗಾರಿಕೆಗಳ ಸಚಿವ ಸ್ಥಾನವನ್ನು ನೀಡಲಾಗಿತ್ತು. ಆದರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸಮ್ಮಿಶ್ರ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದೆ. ನಾಗೇಶ್ ಅವರು ಅತೃಪ್ತ ಶಾಸಕರ ಬಣವನ್ನು ಸೇರಿಕೊಳ್ಳುವ ಸಲುವಾಗಿ ಮುಂಬೈನತ್ತ ತೆರಳಲಿದ್ದಾರೆ ಎನ್ನಲಾಗಿದೆ.
ಶಾಸಕರ ರಾಜೀನಾಮೆಗೆ ರಾಜ್ಯಪಾಲರ ಕುಮ್ಮಕ್ಕು: ಪರಮೇಶ್ವರ್
ಮಧ್ಯಾಹ್ನ 12.45 ರ ಬಳಿಕ ಅವರು ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಲಿದ್ದಾರೆ ಎನ್ನಲಾಗಿದೆ.
ಜೂನ್ 14ರಂದು ಪ್ರಮಾಣ ವಚನ
ಇಬ್ಬರು ಪಕ್ಷೇತರ ಶಾಸಕರಾದ ಮುಳಬಾಗಿಲಿನ ಎಚ್. ನಾಗೇಶ್ ಮತ್ತು ರಾಣೆಬೆನ್ನೂರಿನ ಆರ್. ಶಂಕರ್ ಅವರನ್ನು ಸರ್ಕಾರ ಉಳಿಸಿಕೊಳ್ಳುವ ಕಸರತ್ತಿಗಾಗಿ 21 ದಿನಗಳ ಹಿಂದಷ್ಟೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಜೆಡಿಎಸ್ ಕೋಟಾದಲ್ಲಿ ನಾಗೇಶ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗಿತ್ತು. ಜೂನ್ 14ರಂದು ನಡೆದ ಸಮಾರಂಭದಲ್ಲಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್
ಸಮ್ಮಿಶ್ರ ಸರ್ಕಾರ ನೀಡಿದ್ದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾಗೇಶ್ ಅವರು, ಶಾಸಕರಾಗಿಯೂ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಅವರು, ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ರಾಜ್ಯಪಾಲರಿಗೆ ಬರೆದಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ನನಗೆ ಯಾವ ಸಚಿವ ಸ್ಥಾನ, ಹುದ್ದೆಯೂ ಬೇಕಿಲ್ಲ: ರಾಮಲಿಂಗಾರೆಡ್ಡಿ
ಬೆಂಬಲ ವಾಪಸ್
'ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ನಾನು ಹಿಂದಕ್ಕೆ ಪಡೆದುಕೊಂಡಿದ್ದೇನೆ. ಸರ್ಕಾರ ರಚಿಸಲು ಬಿಜೆಪಿಗೆ ತಾವು ಆಹ್ವಾನ ನೀಡಿದರೆ ನಾನು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ ಎಂಬುದನ್ನು ಈ ಪತ್ರದ ಮೂಲಕ ತಿಳಿಸುತ್ತೇನೆ' ಎಂದು ನಾಗೇಶ್ ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪಕ್ಷೇತರರಾಗಿ ಗೆದ್ದಿದ್ದ ನಾಗೇಶ್
2018ರ ವಿಧಾನಸಭೆ ಚುನಾವಣೆಯಲ್ಲಿ ಎಚ್ ನಾಗೇಶ್ ಅವರು ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಮಂಜುನಾಥ್ ಅವರಿಗೆ ಟಿಕೆಟ್ ನೀಡಿತ್ತು. ಆದ್ದರಿಂದ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದ ಆರೋಪದಲ್ಲಿ ಮಂಜುನಾಥ್ ಅವರ ನಾಮಪತ್ರ ತಿರಸ್ಕಾರವಾಗಿದ್ದರಿಂದ ನಾಗೇಶ್ ಅವರ ಗೆಲುವು ಸುಲಭವಾಗಿತ್ತು.