ಪಾಪ ಪರಿಹಾರಕ್ಕಾಗಿ ಪರಿವರ್ತನಾ ಯಾತ್ರೆ - ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 02: ಕರ್ನಾಟಕ ಬಿಜೆಪಿ ಇಂದಿನಿಂದ(ನ.2 ರಿಂದ) ಜನವರಿ 28ರವರೆಗೆ ನಡೆಸಲಿರುವ 'ನವಕರ್ನಾಟಕ ಪರಿವರ್ತನಾ ಯಾತ್ರೆ'ಗೆ ಇಂದು ಅಧಿಕೃತ ಚಾಲನೆ ದೊರಕಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದರಿಂದ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಪರದಾಡುವ ಪರಿಸ್ಥಿತಿ ಏರ್ಪಟ್ಟಿತ್ತು.
75 ದಿನಗಳ ಬೃಹತ್ ಯಾತ್ರೆ ಬೆಂಗಳೂರಿನಿಂದ ಈಗಾಗಲೇ ಆರಂಭವಾಗಿದೆ. ಕರ್ನಾಟಕದ 224 ವಿಧದಾನಸಭಾ ಕ್ಷೇತ್ರಗಳಲ್ಲೂ ಯಾತ್ರೆ ನಡೆಯಲಿದ್ದು, 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಯಾತ್ರೆ ಅತ್ಯಂತ ಮಹತ್ವದ್ದು ಎನ್ನಿಸಿದೆ.
ಆದರೆ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಸಾಲು ಸಾಲು ಟ್ವೀಟ್ ಗಳ ಮೂಲಕ ಪರಿವರ್ತನಾ ಯಾತ್ರೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಹೇಳಿಕೆಯಲ್ಲೇನಿತ್ತು ಎಂಬುದನ್ನು ನೀವೇ ನೋಡಿ.
|
ಪಾಪ ಪರಿಹಾರಕ್ಕಾಗಿ ಯಾತ್ರೆ!
ಬಿಜೆಪಿಯು ಪರಿವರ್ತನಾ ಯಾತ್ರೆಗೆ ಹೊರಟಿರುವುದು ಒಳ್ಳೆಯ ಕೆಲಸ. ಅವರು ಹಿಂದೆ ಮಾಡಿದ ಪಾಪಕ್ಕೆ ಈಗ ಪ್ರಾಯಶ್ಚಿತ್ತ ಪಡುತ್ತಿರುವ ಸಂಕೇತವೇ ಈ ಪರಿವರ್ತನಾ ಯಾತ್ರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಜೈಲಿಗೆ ಹೋಗಿದ್ದವರಿಂದ ಯಾತ್ರೆ!
ಅಚ್ಚರಿಯ ವಿಷಯವೆಂದರೆ ಇಂದು ಬಿಜೆಪಿಯ ಪರಿವರ್ತನಾ ಯಾತ್ರೆಗೆ ಚಾಲನೆ ನೀಡುತ್ತಿರುವ ಅಮಿತ್ ಶಾ ಮತ್ತು ಯಾತ್ರೆಯನ್ನು ಮುನ್ನಡೆಸಲಿರುವ ಬಿ.ಎಸ್.ಯಡಿಯೂರಪ್ಪ ಇಬ್ಬರೂ ಅಪರಾಧ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದವರು! ಎಂದೂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಪರಿವರ್ತನಾ ಯಾತ್ರೆ ಮೂಲಕ ಕ್ಷಮೆ ಕೇಳುತ್ತಿದೆ ಬಿಜೆಪಿ
ರೈತರ ಸಾಲಮನ್ನಾ ಮಾಡಲಾಗದೆ ಇದ್ದಿದ್ದಕ್ಕೆ ಮತ್ತು ಮಹಾದಾಯಿ ವಿವಾದವನ್ನು ಪರಿಹರಿಸಲಾಗದೆ ಇದ್ದುದಕ್ಕಾಗಿ ಪರಿವರ್ತನಾ ಯಾತ್ರೆಯ ಮೂಲಕ ಬಿಜೆಪಿ ಜನರ ಕ್ಷಮೆ ಕೇಳುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕರ್ನಾಟಕದಲ್ಲೇ ಬೃಹತ್ ಯಾತ್ರೆ
ಕರ್ನಾಟಕದ ಇತಿಹಾಸದಲ್ಲೇ ಬೃಹತ್ ಯಾತ್ರೆ ಎಂದು ಬಿಜೆಪಿ ನಾಯಕರಿಂದ ಬಣ್ಣನೆಗೊಳಗಾಗುತ್ತಿರುವ ಈ ಯಾತ್ರೆ 75 ದಿನಗಳ ಕಾಲ ನಡೆಯಲಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನೂ ಸಂಧಿಸಲಿದೆ. 7500 ಕಿ.ಮೀ.ದೂರ ಕ್ರಮಿಸಲಿರುವ ಈ ಯಾತ್ರೆಗೆ ಬಿಜೆಪಿಯ ಎಲ್ಲ ನಾಯಕರೂ ಭಿನ್ನಾಭಿಪ್ರಾಯ ಮರೆತು ಕೈಜೋಡಿಸುವ ನಿರೀಕ್ಷೆಯಿದೆ.












Click it and Unblock the Notifications