Karnataka Budget 25: ರಾಜ್ಯ ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್, ಸಿಎಂ ಬಜೆಟ್ ಮಂಡನೆ ಯಾವತ್ತು?
ಹುಬ್ಬಳ್ಳಿ, ಫೆಬ್ರವರಿ 21: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಸದ್ಯ Karnataka Budget 2025 ಬಜೆಟ್ ಮಂಡನೆಗೆ ತಯಾರಿ ನಡೆಸಿದೆ. ಬಜೆಟ್ ಅಧಿವೇಶನಕ್ಕೆ ದಿನಾಂಕ ಫಿಕ್ಸ್ ಆಗಿದೆ. ಮುಖ್ಯಮಂತ್ರಿಗಳು ಐತಿಹಾಸಿ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಅಧಿವೇಶನದ ಸಮಯ ವಿಸ್ತರಣೆ ಮಾಡುವ ಉದ್ದೇಶ ಇದೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಜೆಟ್ ಮಂಡನೆಗೆ ಮತ್ತು ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಮುಂದಿನ ತಿಂಗಳ ಮಾರ್ಚ್ 3ರಿಂದ 21ರವರೆಗೆ ರಾಜ್ಯ ಬಜೆಟ್ ಅಧಿವೇಶನ ನಡೆಯಲಿದೆ. ಆರಂಭದಲ್ಲಿ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ ಗೆಹಲೋತ್ ಮಾತನಾಡಲಿದ್ದಾರೆ. ನಂತರ ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹು ನಿರೀಕ್ಷೆಯ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಹದಿನೆಂಟು ದಿನಗಳ ಈ ಅಧಿವೇಶನವನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಸಭೆ ನಡೆಸಲಾಗುವುದು. ಅಧಿವೇಶನದ ಮೊದಲ ದಿನ ಆಡಳಿತ ಪ್ರತಿಪಕ್ಷ ಸೇರಿ ಬಿಜಿನೆಸ್ ಅಡ್ವೈಸರಿ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಸಚಿವರು, ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಬಹಳಷ್ಟು ಚರ್ಚಿಸಿದ್ದಾರೆ. ಅವುಗಳ ಅನುಷ್ಠಾನ ಕುರಿತು ಪರಾಮರ್ಶೆ ನಡೆಸಲಾಗುತ್ತದೆ. ಗದ್ದಲವೇ ಪ್ರಜಾಪ್ರಭುತ್ವದ ಸೌಂದರ್ಯ. ಸದನದಲ್ಲಿ ಗದ್ದಲ ಇಲ್ಲವೆಂದರೆ ಏನೂ ಪ್ರಯೋಜನವಿಲ್ಲ ಎಂದರ್ಥ. ನಾನು ಪ್ರತಿಪಕ್ಷದ ಮಿತ್ರ. ಅಧಿವೇಶನ ಚೆನ್ನಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನನ್ನದು ಎಂದು ಅವರು ಅಧಿವೇಶನ ವಿಸ್ತರಣೆ ಬಗ್ಗೆ ಸಭೆ ಬಳಿಕ ತಿಳಿಸಲಾಗುವುದು ಎಂದರು.

ಕರ್ನಾಟಕ ಬಜೆಟ್ ಅಧಿವೇಶನಕ್ಕೂ ಪೂರ್ವದಲ್ಲಿ ಬೆಂಗಳೂರು ವಿಧಾನಸೌಧ ಆವರಣದಲ್ಲಿ ಫೆಬ್ರವರಿ 27ರಿಂದ ಮಾರ್ಚ್ 3ರ ವರೆಗೆ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮಹಾಕುಂಭಮೇಳ: ಯು.ಟಿ.ಖಾದರ್ ಸಂತುಷ್ಟ
ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025 ಕುರಿತು ಕಾಂಗ್ರೆಸ್ ಟೀಕೆ ಮಾಡಿದ್ದನ್ನು ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್ ಅವರು, ಮಹಾ ಕುಂಭಮೇಳಕ್ಕೆ ನಾನು ಹೋಗಿದ್ದೆ. ನಮ್ಮ ಧರ್ಮ, ದೇಶದ ಸಂಸ್ಕೃತಿ ನೋಡಲು ಅವಕಾಶ ಸಿಕ್ಕಿತು. 144 ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳದಲ್ಲಿ ಭಾಗವಹಿಸಿ ಸಂತುಷ್ಟನಾಗಿದ್ದೇನೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಪುಣ್ಯಸ್ನಾನದ ಬಗ್ಗೆ ಟೀಕೆ: ತಿರುಗೇಟು
ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಟೀಕೆ ಮಾಡುವ ಬರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಬರುವಂತೆ ಮಾತನಾಡಿದ್ದಾರೆ ಎನ್ನಲಾಗಿದೆ. ಗಂಗೆಯಲ್ಲಿ ಮಿಂದ ಮಾತ್ರಕ್ಕೆ ಪಾಪವೆಲ್ಲ ಕಳೆದು ಹೋಗುವುದೆ ಎಂದು ಬಿಜೆಪಿ ನಾಯಕರ ತ್ರಿವೇಣಿ ಸಂಗಮದ ಪುಣ್ಯಸ್ನಾನ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಟೀಕಿಸಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಯುಟಿ ಖಾದರ್ ಅವರು ಮಾತ್ರವಲ್ಲದೇ, ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಪುಣ್ಯಸ್ನಾನ ಮಾಡಿದ್ದಾರೆ. ಇವರದ್ದು ದ್ವಂಧ್ವ ನೀತಿ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.












Click it and Unblock the Notifications