ಇದು ಅಮೃತ ಕಾಲದ ಬಜೆಟ್ ಅಲ್ಲ, ರಾಜ್ಯವನ್ನು ಸಾಲದ ಶೂಲಕ್ಕೆ ಸಿಕ್ಕಿಸಿರುವ ಕತ್ತಲ ಕಾಲದ ಬಜೆಟ್- ಸಿದ್ದರಾಮಯ್ಯ
'ಅವೈಜ್ಞಾನಿಕ ಜಿಎಸ್ಟಿ ಜಾರಿ ಮಾಡಿರುವುದು ರಾಜ್ಯದ ಸಾಲ ಹೆಚ್ಚಾಗಲು ಇರುವ ಕಾರಣಗಳಲ್ಲಿ ಒಂದು'
ಬೆಂಗಳೂರು, ಫೆಬ್ರವರಿ. 21: 'ಇದು ಅಮೃತ ಕಾಲದ ಬಜೆಟ್ ಅಲ್ಲ, ರಾಜ್ಯವನ್ನು ಸಾಲದ ಶೂಲಕ್ಕೆ ಸಿಕ್ಕಿಸಿರುವ ಕತ್ತಲ ಕಾಲದ ಬಜೆಟ್' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮುಂದಿನ ವರ್ಷದ ಬಜೆಟ್ ಗಾತ್ರ 3.09 ಲಕ್ಷ ಕೋಟಿ, ರಾಜ್ಯ ಮಾಡುವ ಸಾಲ 77,750 ಕೋಟಿ. ಬಡ್ಡಿ ಪಾವತಿ 34,023 ಕೋಟಿ, ಅಸಲು ಪಾವತಿ 22,470 ಕೋಟಿ ರೂ. ಒಟ್ಟು 56,463 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕು.
— Siddaramaiah (@siddaramaiah) February 21, 2023
3/7#Session2023
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, 'ರಾಜ್ಯ ಸರ್ಕಾರ ನಾಲ್ಕು ವರ್ಷಗಳಲ್ಲಿ 3.22 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ. ಸಿದ್ದರಾಮಯ್ಯನವರು ಸಾಲ ಮಾಡಿ ತುಪ್ಪ ತಿಂದಿದ್ದರು ಎಂದು ಆರೋಪಿಸಿದ್ದ ಬಿಜೆಪಿ ಮಾಡಿದ್ದೇನು..?' ಎಂದು ಪ್ರಶ್ನಿಸಿದ್ದಾರೆ.
"ಅಸಲು ಮತ್ತು ಬಡ್ಡಿ ರೂಪದಲ್ಲಿ ಸಾಲದ ಮರುಪಾವತಿ ಹೆಚ್ಚಾಗುತ್ತಿರುವುದರಿಂದ ಸಾಲವೂ ಹೆಚ್ಚಾಗುತ್ತಿದೆ. 2022-23ರಲ್ಲಿ ಬಜೆಟ್ ಗಾತ್ರ 2.65 ಲಕ್ಷ ಕೋಟಿ, ರಾಜ್ಯ ಮಾಡಿರುವ ಸಾಲ 67,180 ಕೋಟಿ. ಬಡ್ಡಿ ಪಾವತಿ 29,395, ಅಸಲು ಪಾವತಿ 14,178 ಕೋಟಿ ಒಟ್ಟು 43,573 ಕೋಟಿ ಅಸಲು ಬಡ್ಡಿ ಕಟ್ಟಬೇಕು. ಮುಂದಿನ ವರ್ಷದ ಬಜೆಟ್ ಗಾತ್ರ 3.09 ಲಕ್ಷ ಕೋಟಿ, ರಾಜ್ಯ ಮಾಡುವ ಸಾಲ 77,750 ಕೋಟಿ. ಬಡ್ಡಿ ಪಾವತಿ 34,023 ಕೋಟಿ, ಅಸಲು ಪಾವತಿ 22,470 ಕೋಟಿ ರೂ. ಒಟ್ಟು 56,463 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕು' ಎಂದು ಹೇಳಿದ್ದಾರೆ.

'ಈಗ ರಾಜಸ್ವ ಸಂಗ್ರಹ 2 ಲಕ್ಷದ 26 ಸಾವಿರ ಕೋಟಿ ಇದೆ. ಸಾಲದ ಅಸಲು ಮತ್ತು ಬಡ್ಡಿ ಪಾವತಿ 56,463 ಕೋಟಿ, ಇದರ ಪ್ರಮಾಣ 25% ಆಗುತ್ತದೆ. ಈ ರೀತಿ ರಾಜ್ಯ ಸರ್ಕಾರ ರಾಜ್ಯವನ್ನು ಸಾಲದ ಬಲೆಯಲ್ಲಿ ಕೆಡವಿಹಾಕಿದೆ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಕಾರ್ಪೊರೆಟ್ ತೆರಿಗೆ 30% ಇತ್ತು, ಈಗ ಅದನ್ನು 22% ಗೆ ಇಳಿಕೆ ಮಾಡಿದ್ದಾರೆ. ಕಳೆದ 7 ವರ್ಷಗಳಲ್ಲಿ 700 ಬಂಡವಾಳಶಾಹಿಗಳ 20 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ಗಮನ ಸೆಳೆದಿದ್ದಾರೆ.
'ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅವರ ಸರ್ಕಾರದ ಕೊನೆವರೆಗೆ ದೇಶದ ಮೇಲಿದ್ದ ಒಟ್ಟು ಸಾಲ 53 ಲಕ್ಷ ಕೋಟಿ. ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಹೇಳಿದಂತೆ ದೇಶದ ಮೇಲೆ ಇರುವ ಒಟ್ಟು ಸಾಲ 175 ಲಕ್ಷ ಕೋಟಿ. ಅಂದರೆ 122 ಲಕ್ಷ ಕೋಟಿ ಸಾಲ ಹೆಚ್ಚಾಗಿದೆ. ಅವೈಜ್ಞಾನಿಕ ಜಿಎಸ್ಟಿ ಜಾರಿ ಮಾಡಿರುವುದು ರಾಜ್ಯದ ಸಾಲ ಹೆಚ್ಚಾಗಲು ಇರುವ ಕಾರಣಗಳಲ್ಲಿ ಒಂದು' ಎಂದಿದ್ದಾರೆ.
ಜಿಎಸ್ಟಿ ಬರುವ ಮೊದಲು ನಮ್ಮ ತೆರಿಗೆ ಬೆಳವಣಿಗೆ 14% ಇತ್ತು. ಈಗ ಮುಖ್ಯಮಂತ್ರಿಗಳು 26% ತೆರಿಗೆ ಬೆಳವಣಿಗೆ ಇದೆ ಎಂದಿದ್ದಾರೆ. ಆದರೆ ಸಾಲ 77,750 ಕೋಟಿ ಮಾಡಿದ್ದಾರೆ. ಯಾಕೆ ಹೀಗೆ..? ಎಂದು ಪ್ರಶ್ನಿಸಿದ್ದಾರೆ.

ಇನ್ನು, ಎಸಿಬಿ ಸ್ಥಾಪಿಸಿ ಲೋಕಾಯುಕ್ತ ಸಂಸ್ಥೆಯನ್ನು ಸಿದ್ದರಾಮಯ್ಯ ದುರ್ಬಲಗೊಳಿಸಿದರು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಅರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
'ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಸ್ಥಾಪಿಸಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದೆ ಎಂದು ನನ್ನ ವಿರುದ್ಧದ ಆರೋಪ ನಿರಾಧಾರವಾದುದು. ಕರ್ನಾಟಕದಲ್ಲಿ ಮಾತ್ರವಲ್ಲ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಎಸಿಬಿ ಇದೆ. ರಾಜ್ಯ ಹೈಕೋರ್ಟ್ ನಲ್ಲಿ ಅಡ್ವೋಕೇಟ್ ಜನರಲ್ ಅವರು ಎಸಿಬಿ ರಚನೆಯನ್ನು ಸಮರ್ಥಿಸಿ ವಾದ ಮಾಡಿದ್ದರು. ಆದರೆ ರಾಜ್ಯ ಸರ್ಕಾರ ಸಿದ್ದರಾಮಯ್ಯನವರು ತಮ್ಮ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಎಸಿಬಿ ರಚನೆ ಮಾಡಿದ್ದರು ಎಂದು ಹೇಳಿಕೆ ನೀಡುತ್ತದೆ. ಇದು ದ್ವಿಮುಖ ನೀತಿ' ಎಂದಿದ್ದಾರೆ.












Click it and Unblock the Notifications