ವಿಮಾನ ಪ್ರಯಾಣಿಕರಿಗೆ ತಟ್ಟಿದ ಕರ್ನಾಟಕ ಬಂದ್ ಬಿಸಿ
ಬೆಂಗಳೂರು, ಸೆಪ್ಟೆಂಬರ್ 09 : ಕಾವೇರಿಗಾಗಿ ನಡೆಸಲಾಗುತ್ತಿರುವ ಕರ್ನಾಟಕ ಬಂದ್ ಬಿಸಿ ವಿಮಾನ ಪ್ರಯಾಣಿಕರಿಗೂ ತಟ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನೆಗೆ ತೆರಳಲು ಟ್ಯಾಕ್ಸಿ, ಆಟೋ ಸಿಗದೆ ಅಲ್ಲಿಯೇ ಇರುವಂತಾಗಿದೆ.
ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಇರಲಿದ್ದು, ಬೆಂಗಳೂರಿನಾದ್ಯಂತ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಈ ಆರು ತಿಂಗಳಲ್ಲಿ ನಾಲ್ಕಾರು ಬಂದ್ ಕರೆ ನೀಡಲಾಗಿತ್ತಾದರೂ, ಅಲ್ಪಸ್ವಲ್ಪ ಆಟೋಗಳು, ಟ್ಯಾಕ್ಸಿಗಳು ಓಡಾಡುತ್ತಿದ್ದವು. ಆದರೆ, ಈಬಾರಿ ಯಾವುದೇ ಆಟೋ ಆಗಲಿ, ಟ್ಯಾಕ್ಸಿಯಾಗಲಿ ರಸ್ತೆಗಿಳಿಯದಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಇಂದು ಬೆಳಿಗ್ಗೆ 6ರಿಂದಲೇ ಬಂದ್ ಇದ್ದದ್ದರಿಂದ, ವಿದೇಶಕ್ಕೆ ಅಥವಾ ಇತರ ಪ್ರದೇಶಗಳಿಗೆ ತೆರಳಬೇಕಿದ್ದ ಹಲವಾರು ಪ್ರಯಾಣಿಕರು ಬೆಳ್ಳಂಬೆಳಿಗ್ಗೆಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಆದರೆ, ವಿಮಾನದಿಂದ ಬಂದು ಇಳಿದವರು ಸಂಕಷ್ಟಕ್ಕೀಡಾಗಿದ್ದಾರೆ.
ಇಡೀ ನಗರದಲ್ಲಿ ಬಂದ್ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದರೂ, ಒಂದೆರಡು ಘಟನೆಗಳನ್ನು ಹೊರತುಪಡಿಸಿದರೆ ಹೆಚ್ಚೂಕಡಿಮೆ ಶಾಂತಿಯುತವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯೂ ಕನ್ನಡಪರ ಹೋರಾಟಗಾರರು ತಮಿಳುನಾಡು ಮತ್ತು ನೀರು ಬಿಟ್ಟಿರುವ ಕರ್ನಾಟಕ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಕಾವೇರಿ ಬೆಂಗಳೂರಿನ ಜೀವನಾಡಿಯಾಗಿದ್ದರಿಂದ ಎಲ್ಲ ಕಡೆಯಿಂದ ಬೆಂಬಲ ವ್ಯಕ್ತವಾಗಿದೆ. ಸುಮಾರು ಸಾವಿರದಿನ್ನೂರು ಸಂಘಟನೆಗಳು, ಆಟೋ ರಿಕ್ಷಾ, ಕ್ಯಾಬ್ ಚಾಲಕರು, ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸಂಸ್ಥೆ ಕೂಡ ಬೆಂಬಲಕ್ಕೆ ನಿಂತಿದೆ. ಹೀಗಾಗಿ, ಬಂದ್ ಶಾಂತಿಯುತವಾಗಿದ್ದರೂ, ಜನಜೀವನ ಅಸ್ತವ್ಯಸ್ತವಾಗಿದೆ.
ನಗರದೆಲ್ಲಿಯೂ ಬಸ್, ಆಟೋ, ಕ್ಯಾಬ್ ಸೇವೆ ಇಲ್ಲದಿದ್ದರೂ ರೈಲು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಕೆಲ ಕನ್ನಡಪರ ಹೋರಾಟಗಾರರು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ರೈಲು ಸಂಚಾರ ನಿರಾತಂಕವಾಗಿ ಸಾಗಿದೆ. ರೈಲಿನಿಂದ ಬಂದವರು ಕೂಡ ಬಸ್ಸು, ಆಟೋ ಸಿಗದೆ ಅಲ್ಲಿಯೇ ಕಾಲ ಕಳೆಯುವಂತಾಗಿದೆ.












Click it and Unblock the Notifications