ಪತ್ರಕರ್ತ ರವಿಬೆಳಗೆರೆಗೆ ಒಂದು ವರ್ಷ ಜೈಲು: ಕೋಳಿವಾಡ ಆದೇಶ
ಬೆಂಗಳೂರು, ಜೂನ್ 22: ಶಾಸಕಾಂಗ ಮತ್ತು ಹಾಲಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಕುರಿತು ಮಾನಹಾನಿಯಾಗುವಂಥ ಲೇಖನ ಬರೆದಿದ್ದ ಕಾರಣಕ್ಕೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಸೇರಿದಂತೆ ಇಬ್ಬರು ಪತ್ರಕರ್ತರಿಗೆ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸುವಂತೆ ವಿಧಾನ ಸಭಾ ಸ್ಪೀಕರ್ ಕೋಳಿವಾಡ ಆದೇಶಿಸಿದ್ದಾರೆ.
'ಶಾಸಕಾಂಗದ ಕುರಿತು ಮಾನಹಾನಿಯಾಗುವಂಥ ಲೇಖನ ಪ್ರಕಟಿಸಿದ ಕಾರಣಕ್ಕೆ ಟ್ಯಾಬ್ಲಾಯ್ಡ್ ಪತ್ರಿಕೆಯ ಇಬ್ಬರು ಪತ್ರಕರ್ತರಿಗೆ ಶಿಕ್ಷೆ ನೀಡಲು ರಾಜ್ಯ ವಿಧಾನ ಸಭೆ ನಿರ್ಧರಿಸಿದೆ' ಎಂದು ಕೋಳಿವಾಡ ಹೇಳಿದರು. ಪ್ರಿವಿಲೇಜ್ ಸಮಿತಿ ನೀಡಿದ ಶಿಫಾರಸ್ಸಿನನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇಬ್ಬರು ಪತ್ರಕರ್ತರಿಗೂ ತಲಾ 10,000 ರೂ.ದಂಡ ವಿಧಿಸಲಾಗಿದೆ.
'ಹಾಯ್ ಬೆಂಗಳೂರು' ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಮತ್ತು 'ಯಲಹಂಕ ವಾಯ್ಸ್' ಪತ್ರಿಕೆಯ ಸಂಪಾದಕ ಅನಿಲ್ ರಾಜು ಅವರನ್ನು ಬಂಧಿಸುವಂತೆ ಕೋಳಿವಾಡ ಆದೇಶಿಸಿದ್ದಾರೆ.

'ಹಾಯ್ ಬೆಂಗಳೂರು' ಪತ್ರಿಕೆಯ 2014 ರ ಸೆಪ್ಟೆಂಬರ್ ಸಂಚಿಕೆಯಲ್ಲಿ ಶಾಸಕಾಂಗದ ಕುರಿತು ಮತ್ತು ಕಾಂಗ್ರೆಸ್ ಮುಖಂಡ ಕೋಳಿವಾಡ ಕುರಿತು ಮಾನಹಾನಿಯಾಗುವಂಥ ಲೇಖನವನ್ನು ರವಿಬೆಳಗೆರೆಯವರು ಬರೆದಿದ್ದರು. ಹಾಗೆಯೇ ಅನಿಲ್ ರಾಜು ಅವರು ಸಹ ತಮ್ಮ ಪತ್ರಿಕೆಯಲ್ಲಿ ಅಂಥದೇ ಲೇಖನವನ್ನು ಬರೆದಿದ್ದರು.
ಇಬ್ಬರಿಗೂ ಒಂದು ವರ್ಷ ಜೈಲು ಶಿಕ್ಷೆ, ಜೊತೆಗೆ 10,000 ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲರಾದರೆ ಇನ್ನೂ ಆರು ತಿಂಗಳು ಹೆಚ್ಚುವರಿ ಶಿಕ್ಷೆ ನೀಡಲಾಗುವುದು ಎಂದು ಕೋಳಿವಾಡ ತಿಳಿಸಿದರು.












Click it and Unblock the Notifications