ಮತದಾನ ಮಾಡಿ ಕರ್ತವ್ಯ ಮೆರೆದ ಒನ್ ಇಂಡಿಯಾ ಕನ್ನಡ ಸಿಬ್ಬಂದಿ
ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ಇವತ್ತು. ಭಾರತದ ಪ್ರಜೆಗಳಿಗಾಗಿ ನಮ್ಮ ಹಕ್ಕು ಚಲಾಯಿಸಲು ಇಂದು ಸರಿಯಾದ ಸಮಯ. ಇಂದು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಬಿರುಸಿನಿಂದ ಸಾಗುತ್ತಿದೆ. ಮುಂಜಾನೆ ಆರು ಗಂಟೆಯಿಂದಲೂ ಪ್ರಜೆಗಳು ಮತ ಹಾಕುವಲ್ಲಿ ತಲ್ಲೀನರಾಗಿದ್ದಾರೆ.
ಹೇಳಿ ಕೇಳಿ ಇವತ್ತು ಶನಿವಾರ. ತಿಂಗಳ ಎರಡನೇ ಶನಿವಾರ ಬೇರೆ. ಸರ್ಕಾರಿ ಹಾಗೂ ಬ್ಯಾಂಕ್ ನೌಕರರಿಗೆ ಇವತ್ತು ರಜೆ. ಮತದಾನ ಮಾಡಲು ಅನೇಕ ಖಾಸಗಿ ಕಂಪನಿಗಳು ಕೂಡ ಇವತ್ತು ತಮ್ಮ ಉದ್ಯೋಗಿಗಳಿಗೆ ರಜೆ ನೀಡಿದೆ. ಹೀಗಾಗಿ, ಮತಗಟ್ಟೆಗಳ ಮುಂದೆ ಜನರ ಜಾತ್ರೆ ಶುರುವಾಗಿದೆ.
LIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.37 ರಷ್ಟು ಮತದಾನ ದಾಖಲು
ಆದ್ರೆ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತ ಕರೆಯಿಸಿಕೊಳ್ಳುವ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಇಂದು ರಜೆ ಇಲ್ಲ. ರಜೆಯನ್ನ ನಿರೀಕ್ಷಿಸುವ ಹಾಗೂ ಇಲ್ಲ. ಯಾಕಂದ್ರೆ, ಚುನಾವಣೆ ದಿನವಾದ ಇಂದು ರಾಜ್ಯದ ಮೂಲೆ ಮೂಲೆಯಿಂದಲೂ ಸುದ್ದಿ ಸಂಗ್ರಹಿಸಿ, ಜನರ ಮುಂದೆ ತಲುಪಿಸಬೇಕು ಅಂದ್ರೆ, ಪತ್ರಕರ್ತರು ಇಂದು ಎಂದಿಗಿಂತಲೂ ಹೆಚ್ಚಿನ ಹೊತ್ತು ಕೆಲಸ ಮಾಡಬೇಕು.
In Pics: ಕರ್ನಾಟಕದ ಭವ್ಯ ಭವಿತವ್ಯಕ್ಕಾಗಿ ಮತದಾನದ ಯಜ್ಞ
ಕೆಲಸದ ಒತ್ತಡದ ನಡುವೆ ಇಂದು ಪತ್ರಕರ್ತರು ಕೂಡ ಮತದಾನ ಮಾಡಿ ಕರ್ತವ್ಯ ಮೆರೆದಿದ್ದಾರೆ. ಚುನಾವಣೆಯ ಇಂಚಿಂಚೂ ಸುದ್ದಿಯನ್ನ ಕನ್ನಡಿಗರಿಗೆ ತಲುಪಿಸುತ್ತಿರುವ 'ಒನ್ ಇಂಡಿಯಾ' ಸಿಬ್ಬಂದಿ ಕೂಡ ವೋಟ್ ಮಾಡಿ ಜವಾಬ್ದಾರಿ ಮೆರೆದಿದ್ದಾರೆ. ಮುಂದೆ ಓದಿರಿ...
ಕರ್ತವ್ಯ ನಿರ್ವಹಿಸಿದ ಒನ್ ಇಂಡಿಯಾ ಸಂಪಾದಕ ಪ್ರಸಾದ್ ನಾಯಿಕ
'ಒನ್ ಇಂಡಿಯಾ ಕನ್ನಡ' ಸಂಪಾದಕ ಪ್ರಸಾದ್ ನಾಯಿಕ ಯಶವಂತಪುರ ವಿಧಾನಸಭೆ ವ್ಯಾಪ್ತಿಗೆ ಬರುವ ಕೆಂಗೇರಿ ಉಪನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಮತಚಲಾವಣೆ ಮಾಡಿದರು. ''ಮತ ಚಲಾವಣೆಯ ಹಕ್ಕು ಇದ್ದೂ ಮತ ಚಲಾಯಿಸದಿದ್ದರೆ ಅಥವಾ ಅನರ್ಹ ವ್ಯಕ್ತಿಗೆ ಮತ ಹಾಕಿದರೆ ನಮ್ಮಿಡೀ 5 ವರ್ಷಗಳ ಭವಿಷ್ಯವನ್ನು ನೇರವಾಗಿ ಕಾರ್ಪೊರೇಷನ್ ಕಸದ ತೊಟ್ಟಿಗೆ ಬಿಸಾಕಿದ ಹಾಗೆ. ಮತ ಚಲಾವಣೆಯ ನಂತರವೂ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಯನ್ನು ಕೆಲಸ ಆಗುವವರೆಗೆ ಬೆನ್ನತ್ತುತ್ತಿರಬೇಕು. ನಾವು ಮತವನ್ನೇ ಹಾಕದಿದ್ದರೆ, ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿಗೆ ಪ್ರಶ್ನೆ ಕೇಳುವ, ಆತನನ್ನು ತೆಗಳುವ ಹಕ್ಕನ್ನೂ ನಾವು ಕಳೆದುಕೊಳ್ಳುತ್ತೇವೆ. ಈ ಕಾರಣಕ್ಕಾಗಿಯಾದರೂ ಮತ ಹಾಕಲೇಬೇಕು'' ಎನ್ನುತ್ತಾರೆ ಪ್ರಸಾದ್ ನಾಯಿಕ.
ನಿಮ್ಮ ಹಕ್ಕು ಚಲಾಯಿಸಿ, ಜವಾಬ್ದಾರಿ ನಿರ್ವಹಿಸಿ - ಇದು ಕಿರುತೆರೆ ಕಲಾವಿದರ ಅಭಿಯಾನ
ಮತದಾನ ಮಾಡಿದ ಸಹ ಸಂಪಾದಕ ಮಹೇಶ್ ಮಲ್ನಾಡ್
'ಒನ್ ಇಂಡಿಯಾ ಕನ್ನಡ'ದ ಸುದ್ದಿ ಸಂಪಾದಕ ಮಹೇಶ್ ಮಲ್ನಾಡ್ ಪದ್ಮನಾಭನಗರ ಕ್ಷೇತ್ರ, ಹೊಸಕೆರೆಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ನಂಬರ್ 171 ರಲ್ಲಿ ಇಂದು ಬೆಳಗ್ಗೆ 9.25 ರಂದು ಮತದಾನ ಮಾಡಿ ಜವಾಬ್ದಾರಿ ನಿರ್ವಹಿಸಿದರು. ''ಮತದಾನ ಮಾಡುವುದು ಮೂಲಭೂತ ಹಕ್ಕು ಅಲ್ಲ. ಆದರೆ, ನೋಟಾಗೆ ಬೆಲೆ ಇಲ್ಲದ ಕಾರಣ ಮತ ಹಾಕಿ ಕೆಲಸಕ್ಕೆ ಬಂದಿರುವೆ'' ಎನ್ನುತ್ತಾರೆ ಮಹೇಶ್ ಮಲ್ನಾಡ್.
ವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರು
ವೋಟ್ ಹಾಕಿದ ಮಂಜುನಾಥ್.ಸಿ
'ಒನ್ ಇಂಡಿಯಾ ಕನ್ನಡ' ಸುದ್ದಿ ಸಂಪಾದಕ ಮಂಜುನಾಥ್.ಸಿ ದೇವನಹಳ್ಳಿ ಕ್ಷೇತ್ರ, ವಿಜಯಪುರ ಬೂತ್ ನಂಬರ್ 176 ಮಾರ್ಕೆಟ್ ಸ್ಕೂಲ್ ನಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಮಾಡಿ ಕರ್ತವ್ಯ ನಿರ್ವಹಿಸಿದರು. ''ಉತ್ತಮ ಕರ್ನಾಟಕ ನಿರ್ಮಾಣ ಮಾಡಲು ನನ್ನ ಒಂದು ಮತ ಮುಖ್ಯ. ಹೀಗಾಗಿ ಮತದಾನ ಮಾಡಿರುವೆ'' ಅಂತಾರೆ ಮಂಜುನಾಥ್.ಸಿ.
ವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರು
ಜವಾಬ್ದಾರಿ ನಿಭಾಯಿಸಿದ ಭರತ್ ಕುಮಾರ್
'ಫಿಲ್ಮಿಬೀಟ್ ಕನ್ನಡ'ದ ರಿಪೋರ್ಟರ್ ಆಗಿರುವ ಭರತ್ ಕುಮಾರ್ ಇಂದು ಬೆಳಗ್ಗೆ ಏಳು ಗಂಟೆಗೆ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರ, ಗಾರೆಬಾವಿ ಪಾಳ್ಯದ ಶಾರದ ವಿಕಾಸ್ ಕಾಲೇಜ್ ನಲ್ಲಿ ಮತದಾನ ಮಾಡಿ ಕೆಲಸಕ್ಕೆ ಹಾಜರ್ ಆಗಿದ್ದಾರೆ. ''ಕ್ಷೇತ್ರಕ್ಕೆ ಒಳ್ಳೆಯ ಶಾಸಕರು, ರಾಜ್ಯಕ್ಕೆ ಒಳ್ಳೆಯ ಮುಖ್ಯಮಂತ್ರಿಗಳು ಬೇಕು. ಇವರನ್ನ ಆಯ್ಕೆ ಮಾಡುವುದರಲ್ಲಿ ನನ್ನ ಜವಾಬ್ದಾರಿಯೂ ಇದೆ. ಅದನ್ನ ನಿಭಾಯಿಸಿದ್ದೇನೆ ಅಷ್ಟೇ'' ಎನ್ನುವುದು ಭರತ್ ಕುಮಾರ್ ಮಾತು.
ಹಕ್ಕು ಚಲಾಯಿಸಿದ ಪವಿತ್ರ.ಬಿ.ಗೌಡ
'ಫಿಲ್ಮಿಬೀಟ್ ಕನ್ನಡ'ದ ರಿಪೋರ್ಟರ್ ಆಗಿರುವ ಪವಿತ್ರ.ಬಿ.ಗೌಡ ಯಶವಂತಪುರ ವಿಧಾನಸಭೆ ಕ್ಷೇತ್ರ, ಮಹದೇಶ್ವರ ನಗರದ ಲೋಹಿತ್ ಹೈಸ್ಕೂಲ್ ನಲ್ಲಿ ಇಂದು ಬೆಳಗ್ಗೆ ಒಂಬತ್ತು ಗಂಟೆಗೆ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ''ಒಳ್ಳೆ ಅಭ್ಯರ್ಥಿಯನ್ನ ಆಯ್ಕೆ ಮಾಡಲು ವೋಟ್ ಮಾಡಿರುವೆ'' ಅಂತಾರೆ ಪವಿತ್ರ.ಬಿ.ಗೌಡ
ಜವಾಬ್ದಾರಿ ಮೆರೆದ ಹರ್ಷಿತಾ ರಾಕೇಶ್
'ಫಿಲ್ಮಿಬೀಟ್ ಕನ್ನಡ' ರಿಪೋರ್ಟರ್ ಆಗಿರುವ ಹರ್ಷಿತಾ ರಾಕೇಶ್ ಗೋವಿಂದರಾಜನಗರ ಕ್ಷೇತ್ರ, ಶಿವಾನಂದ ನಗರದ ಫ್ಲೋರೆನ್ಸ್ ಹೈಸ್ಕೂಲ್ ನಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಮತದಾನ ಮಾಡಿ ಜವಾಬ್ದಾರಿ ನಿರ್ವಹಿಸಿ, ಕಛೇರಿಗೆ ಮರಳಿದರು. ''ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ವೋಟು ಕೂಡ ಮುಖ್ಯ. ಅಭಿವೃದ್ಧಿ ಪಥದಲ್ಲಿ ಕರ್ನಾಟಕ ಸಾಗಬೇಕು ಅಂದ್ರೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಭಾರತೀಯ ಪ್ರಜೆಯಾಗಿ ಇಂದು ನನ್ನ ಕರ್ತವ್ಯ ನಿರ್ವಹಿಸಿರುವೆ'' ಎನ್ನುವುದು ಹರ್ಷಿತಾ ರಾಕೇಶ್ ಮನದಾಳ.
ಒನ್ ಇಂಡಿಯಾ ಮೈಸೂರು ವರದಿಗಾರ್ತಿ
ಇನ್ನು ಒನ್ಇಂಡಿಯಾ ಮೈಸೂರು ವರದಿಗಾರ್ತಿಯಾಗಿರುವ ಯಶಸ್ವಿನಿ ಕೂಡ ಸಿಎಂ ಸ್ಫರ್ಧಿಸುತ್ತಿರುವ ಚಾಮುಂಡೇಶ್ವರಿಯಲ್ಲಿ ಮತ ಚಲಾಯಿಸಿದರು. ಮತಗಟ್ಟೆ ಸಂಖ್ಯೆ 215 ರ ವಿಶ್ವಪ್ರಜ್ಞಾ ಶಾಲೆಯಲ್ಲಿ ಮತ ಚಲಾಯಿಸಿ ಕರ್ತವ್ಯ ನಿರ್ವಹಿಸಿದರು. ''ಕರ್ತವ್ಯದ ನಡುವೆಯೂ ಮೈಸೂರಿನಲ್ಲಿ ಮೊದಲ ಬಾರಿಗೆ ಮತ ಚಲಾವಣೆ ಮಾಡಿದ್ದೇನೆ. ಮತದಾನ ನನ್ನ ಕರ್ತವ್ಯ ಎನ್ನುವುದಕ್ಕಿಂತ ಅದು ನನ್ನ ಮೊದಲ ಆದ್ಯತೆ. ನನ್ನಿಂದ ನಾಯಕರೊಬ್ಬರ ಆಯ್ಕೆಯಾಗುತ್ತಾರೆ ಎಂಬುದೇ ನನಗೆ ಹೆಮ್ಮೆ. ಪ್ರಜಾಪ್ರಭುತ್ವದ ಕೊಡುಗೆಗೆ ನಾನು ಚಿರಋಣಿ'' ಎಂದು ಸಂತಸ ವ್ಯಕ್ತಪಡಿಸಿದರು.
ನೀವೂ ವೋಟ್ ಮಾಡಿ...
''ಸಿಕ್ಕಾಪಟ್ಟೆ ಕೆಲಸ ಇದೆ... ಬಿಜಿ ಶೆಡ್ಯೂಲ್ ನಲ್ಲಿ ವೋಟ್ ಮಾಡಲು ಸಾಧ್ಯವಿಲ್ಲ'' ಅಂತ ಸುಮ್ಮನಾಗಬೇಡಿ. ತಪ್ಪದೇ ಮತ ಚಲಾವಣೆ ಮಾಡಿ. ಯಾರಿಗೊತ್ತು ನಿಮ್ಮ ಒಂದು ವೋಟ್ ನಾಳಿನ ಕರ್ನಾಟಕದ ಭವಿಷ್ಯ ಬದಲಿಸಬಹುದು.