ಕನ್ನಡ ಕಿರುತೆರೆ ನಟಿ ರಚನಾ, ನಟ ಜೀವನ್ ದುರ್ಮರಣ
Recommended Video
ಬೆಂಗಳೂರು, ಆಗಸ್ಟ್ 24: ಕನ್ನಡ ಕಿರುತೆರೆ ನಟಿ ರಚನಾ, ನಟ ಜೀವನ್ ದುರಂತ ಅಂತ್ಯಕಂಡಿದ್ದಾರೆ. ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಬೆಂಗಳೂರಿಗೆ ವಾಪಸ್ ಬರುವಾಗ ಅವರಿದ್ದ ವಾಹನ ಅಪಘಾತಕ್ಕೀಡಾಗಿದೆ.
ಈ ದುರ್ಘಟನೆಯಲ್ಲಿ ಮಹಾನದಿ ಸೀರಿಯಲ್ ಖ್ಯಾತಿಯ ರಚನಾ(23) ಹಾಗೂ ಸಹನಟ ಜೀವನ್(25) ಮೃತಪಟ್ಟಿದ್ದಾರೆ.
ಮಾಗಡಿ ತಾಲೂಕು ಸೋಲೂರು ಬಳಿ ರಚನಾ ಹಾಗೂ ಜೀವನ್ ಅವರಿದ್ದ ಸಫಾರಿ ಕಾರು ಅಪಘಾತವಾಗಿದೆ. ನಿಂತಿದ್ದ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಟಿ ರಚನಾ ಹಾಗೂ ಜೀವನ್ ಅವರ ದುರಂತ ಅಂತ್ಯಕ್ಕೆ ಕಿರುತೆರೆ ಹಾಗೂ ಹಿರಿತೆರೆ ಕ್ಷೇತ್ರ ಕಂಬನಿ ಮಿಡಿದಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಬಿಗ್ ಬಾಸ್' ರಿಯಾಲಿಟಿ ಶೋ ನ 5ನೇ ಆವೃತ್ತಿಯಲ್ಲಿ ಕಾಮನ್ ಮ್ಯಾನ್ ವಿಭಾಗದಲ್ಲಿ ಸ್ಪರ್ಧೆ ಮಾಡಲು ಜೀವನ್ ಆಸೆ ಹೊಂದಿದ್ದರು. ನೂರಕ್ಕೂ ಹೆಚ್ಚು ಸಿನಿಮಾ, 40 ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಹೊಂದಿದ್ದ ಜೀವನ್ ಅವರಿಗೆ ಹಾಸ್ಯನಟನಾಗಿ ಬೆಳೆಯುವ ಕನಸಿತ್ತು.
ಮಹಾನದಿ ನಟಿ ರಚನಾ
23 ವರ್ಷ ವಯಸ್ಸಿನ ರಚನಾ ಹಾಗೂ 25 ವರ್ಷ ವಯಸ್ಸಿನ ಜೀವನ್ ಅವರು ಅಪಘಾತ ನಡೆದ ಸಂದರ್ಭದಲ್ಲೇ ಮೃತಪಟ್ಟಿದ್ದಾರೆ. ವಾಹನದಲ್ಲಿದ್ದ ಬಿಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತ್ತು ಎರಿಕ್ ಎಂಬುವರು ಗಾಯಗೊಂಡಿದ್ದಾರೆ. ನೆಲಮಂಗಲ ಬಳಿಯ ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಚನಾ ಸ್ಥಳದಲ್ಲೇ ಸಾವು
ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಹೋಗಿದ್ದ ರಚನಾ(23) ಹಾಗೂ ಇತರರು ಗೆಳೆಯ ಕಾರ್ತಿಕ್ ಅವರ ಹುಟ್ಟುಹಬ್ಬ ಆಚರಿಸಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಗುರುವಾರ ಮುಂಜಾನೆ ನಿದ್ದೆ ಮಂಪರಿನಲ್ಲಿ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ.
ಸಫಾರಿ ವಾಹನ ನುಜ್ಜು ಗುಜ್ಜು
ಮಹಾನದಿ, ತ್ರಿವೇಣಿ ಸಂಗಮ, ಮಧು ಬಾಲಾ ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದ ರಚನಾ ಅವರಿಗೆ ತ್ರಿವೇಣಿ ಸಂಗಮದಲ್ಲಿ ಲೀಡ್ ರೋಲ್ ಮಾಡುವ ಅವಕಾಶ ಲಭಿಸಿತ್ತು. ಕಥಾ ವಿಸ್ತರಣೆಗೊಂಡಿದ್ದು, ರಚನಾ(ಅನು ಪ್ರಭಾಕರ್ ಮಗಳ ಪಾತ್ರ)ಗೆ ಮುಖ್ಯ ಪಾತ್ರ ಸಿಕ್ಕಿತ್ತು. ಆದರೆ, ಇಂದು ಅವರ ಅಭಿಮಾನಿಗಳಿಗೆ ದುಃಖದ ವಾರ್ತೆ ಸಿಕ್ಕಿದೆ.
ಬೆಂಗಳೂರಿನ ನಿವಾಸಿ ರಚನಾ
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ರಚನಾ ಎಂ.ಜಿ ಅವರ ಮೃತದೇಹವನ್ನು ಬುಧವಾರ(ಆಗಸ್ಟ್ 24) ದಂದು ಮನೆ ಪಕ್ಕದ ಪಾರ್ಕಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ.