ಬಿಎಸ್ವೈ ಸರ್ಕಾರ ಬಹುಮತ ಪಡೆದರೆ, ಅಕಾಡೆಮಿ ಅಧ್ಯಕ್ಷರ ನಿರ್ಗಮನ
ಬೆಂಗಳೂರು, ಜುಲೈ 26: "ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ದೇಶ ತೊರೆಯುವೆ, ಪ್ರಶಸ್ತಿ ಹಿಂತಿರುಗಿಸುವೆ...", ಮುಂತಾದ ಅಸಹಿಷ್ಣುತೆಗಳ ಗಾಳಿ ಈಗ ಕರ್ನಾಟಕವನ್ನು ತಲುಪಿದೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಕಳೆದುಕೊಂಡ ಬಳಿಕ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೇರಲು ಮುಂದಾಗಿದೆ. ಈ ನಡುವೆ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ನಿರ್ಗಮನದ ಸುಳಿವು ನೀಡಿದ್ದಾರೆ.
"ಹೊಸ ಸರ್ಕಾರ ತನ್ನ ಬಹುಮತ ಮಾಡಿದ ತಕ್ಷಣವೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತೇನೆ" ಎಂದು 'ಅವಧಿ' ವೆಬ್ ಸೈಟ್ ನ ವಿಡಿಯೋ ಸಂವಾದದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಘೋಷಿಸಿದ್ದಾರೆ.
'ಅವಧಿ' ಸಾಹಿತ್ಯ ಪತ್ರಿಕೆ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ನಡೆಸಿಕೊಟ್ಟ ವಿಡಿಯೋ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅರವಿಂದ ಮಾಲಗತ್ತಿ, "ಹೊಸ ಸರ್ಕಾರ ಬಂದ ತಕ್ಷಣ ರಾಜೀನಾಮೆ ನೀಡಬೇಕು ಎನ್ನುವ ನಿರ್ಬಂಧವೇನೂ ಇಲ್ಲ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿ ನೀಡಿದ ಶಿಫಾರಸು ಕೂಡ ಯಾವುದೇ ಅಧ್ಯಕ್ಷರು 3 ವರ್ಷದ ತಮ್ಮ ಅವಧಿ ಸಂಪೂರ್ಣಗೊಳಿಸುವ ಬಗ್ಗೆ ಒತ್ತು ನೀಡಿದೆ. ಆದರೆ, ನಾನು ನೈತಿಕತೆಯ ಪ್ರಶ್ನೆಯನ್ನಿಟ್ಟಿಕೊಂಡು ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದರು. ವಿಡಿಯೋ ತುಣುಕು ಈ ಸುದ್ದಿಯೊಂದಕ್ಕೆ ಲಗತ್ತಿಸಲಾಗಿದೆ, ಆಸಕ್ತರು ವೀಕ್ಷಿಸಬಹುದು.
2017ರಿಂದ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮುದ್ದೇಬಿಹಾಳ ಮೂಲದ ಮಾಲಗತ್ತಿ, ಕಥೆ, ಕವನ, ಕಾದಂಬರಿ, ನಾಟಕ, ಸಂಶೋಧನೆ, ಸಂಪಾದನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ 65ಕ್ಕೂ ಅಧಿಕ ಕೃತಿಗಳನ್ನು ಹೊರ ತಂದಿದ್ದಾರೆ. ಜಾನಪದ ಗಾಯಕ, ನಟರಾಗಿ ಕೂಡಾ ಕಾಣಿಸಿಕೊಂಡಿದ್ದಾರೆ.