ಭಾವಗೀತೆಗಳ ಕವಿ ವ್ಯಾಸರಾವ್ ವಿಧಿವಶ
ಬೆಂಗಳೂರು, ಜುಲೈ 15: ಕನ್ನಡ ಸಾಹಿತ್ಯ ಲೋಕದಲ್ಲಿ 'ಭಾವಗೀತೆಗಳ ಕವಿ' ಎಂದೆನಿಸಿಕೊಂಡಿದ್ದ ಎಂಎಸ್ ವ್ಯಾಸರಾವ್ ಅವರು ಭಾನುವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರಿ, ಪುತ್ರ ಸೇರಿದಂತೆ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.
ವೃತ್ತಿಯಿಂದ ಬ್ಯಾಂಕ್ ಉದ್ಯೋಗಿಯಾಗಿದ್ದ ವ್ಯಾಸರಾವ್ ಅವರು ಕವಿತೆ, ಕಥಾಸಂಕಲನ, ನಾಟಕ, ಕಾದಂಬರಿರಾಗಿ, ಚಲನಚಿತ್ರ ಅಕಾಡೆಮಿ ಸದಸ್ಯರಾಗಿ, ಸಾಹಿತ್ಯ, ಸಂಸ್ಕೃತಿ ಹರಿಕಾರರಾಗಿದ್ದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ, ಸ್ವರಮಂದಾರ, ಆರ್ಯಭಟ ಪ್ರಶಸ್ತಿಗಳಲ್ಲದೆ, ಯುವ ಕವಿ, ಸಾಹಿತಿಗಳ ನೆಚ್ಚಿನ ಕವಿಗಳಲ್ಲಿ ಒಬ್ಬರೆನಿಸಿಕೊಂಡಿದ್ದರು.
'ಶುಭಮಂಗಳ' ಚಿತ್ರದಲ್ಲಿ ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು ಹಾಗೂ ನಾಕ್ಲೊಂದ ನಾಕು, ನಾಕೆರಡ್ಲ ಎಂಟು ಗೀತೆಗಳನ್ನು ರಚಿಸಿದ್ದು, ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ.
ನಾಕ್ಲೊಂದ ನಾಕು ಹಾಡು ಹುಟ್ಟಿದ ಬಗ್ಗೆ : 'ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ (1974) ಪುಟ್ಟಣ್ಣ ಕಣಗಾಲ್ರವರು 'ಲೆಕ್ಕದ ಮೇಲೆ' ಹಾಡು ಬರೆಯಲು ಕೇಳಿದರು. ಸನ್ನಿವೇಶ - ಇಷ್ಟವಿಲ್ಲದೆಯೂ ಇರಬೇಕಾದ ಮನೆಯಲ್ಲಿ ಎಲ್ಲಕ್ಕೂ ಲೆಕ್ಕವಿಟ್ಟು ಹಣ ಕೊಡುವೆನೆಂಬ ಮಹಿಳೆಗೆ ಆ ಮನೆಯಾತ ದ್ವಂದ್ವ ನಿವಾರಿಸುವುದು.
ಪುಟ್ಟಣ್ಣ, ರವಿಯವರ ಜತೆ ಪ್ರಯಾಣದಲ್ಲಿ ಎಳನೀರು ಕುಡಿವಾಗ ನಡೆದ ಸಂಭಾಷಣೆ, ಪ್ರಕೃತಿ ಏನ್ ಲೆಕ್ಕ ಇಡತ್ತೆ ಸಾರ್? ಎಂದ ನನಗೆ 'ಬಿಡಿ ಬಂತು ಹಾಡು' ಎಂದರು ಪುಟ್ಟಣ್ಣ. ಆಗ ಮೂಡಿದ ಹಾಡೇ 'ನಾಕೊಂದ್ಲ ನಾಕು... ಇಷ್ಟೇ ಲೆಕ್ಕದ ನಂಟು'. ತಾಳ್ಮೆಯಿಂದ ಪ್ರೋತ್ಸಾಹಿಸಿ ರಾಗದ ಲೆಕ್ಕಾಚಾರ ತಿಳಿಸಿ ಮುನ್ನಡೆಸಿದರು. ಎಂದು ವಿಕ್ರಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕವಿ ಎಂಎನ್ ವ್ಯಾಸರಾವ್ ಅವರು ಹಾಡು ಹುಟ್ಟಿದ ಕಥೆ ಹೇಳಿಕೊಂಡಿದ್ದರು.'
ಬರೆದ ವ್ಯಾಸರಾವ್ ಅವರ ನೀ ಇಲ್ಲದೆ, ನನಗೇನಿದೆ.. ಭಾವಗೀತೆ ಜನಪ್ರಿಯ. ಮಳೆಯಲ್ಲಿ ನೆನೆದ ಮರಗಳು ಸಣ್ಣ ಕಥೆಗಳ ಸಂಕಲನ ಹೊರತಂದಿದ್ದರು. ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಕವಿಗೆ ಅಭಿಮಾನಿಗಳು ಅಶ್ರುತರ್ಪಣ ಸಲ್ಲಿಸಿದ್ದಾರೆ.