ಬಾಹುಬಲಿ-2 ಬಿಡುಗಡೆ ದಿನ ಕನ್ನಡ ಸಂಘಟನೆಗಳಿಂದ ಕರ್ನಾಟಕ ಬಂದ್
ಏಪ್ರಿಲ್ 28ರಂದು ಬಾಹುಬಲಿ ಬಿಡುಗಡೆ ಆಗುವ ದಿನ ಕರ್ನಾಟಕ ಬಂದ್ ಗೆ ಕನ್ನಡಪರವಾದ ಎರಡು ಸಾವಿರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ತಮಿಳು ನಟ ಸತ್ಯರಾಜ್ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿವೆ
ಬೆಂಗಳೂರು, ಏಪ್ರಿಲ್ 19: ತಮಿಳುನಟ ಸತ್ಯರಾಜ್ ನಿರ್ವಹಿಸಿದ ಕಟ್ಟಪ್ಪ ಪಾತ್ರ ತೆಲುಗಿನ ಬಾಹುಬಲಿ ಸಿನಿಮಾದ ಪ್ರಮುಖ ಪಾತ್ರಗಳಲ್ಲೊಂದು. ಇದೀಗ 'ಕಟ್ಟಪ್ಪನ ನಂಬಿ ಕೆಟ್ನಪ್ಪೋ' ಎನ್ನುವಂತಾಗಿದೆ ಆ ಸಿನಿಮಾ ನಿರ್ಮಾಪಕ-ನಿರ್ದೇಶಕರ ಸ್ಥಿತಿ. ಸತ್ಯರಾಜ್ ಈ ಹಿಂದೆ ನೀಡಿದ ಹೇಳಿಕೆ ಕಾರಣಕ್ಕೆ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ನೀಡಲ್ಲ ಎಂದಿದ್ದ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿವೆ.
ಎರಡು ಸಾವಿರದಷ್ಟು ಕನ್ನಡಪರ ಸಂಘಟನೆಗಳು ಸಿನಿಮಾ ಬಿಡುಗಡೆ ದಿನ ಬಂದ್ ನಡೆಸಲು ಬೆಂಬಲ ಸೂಚಿಸಿವೆ. ಈ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧವಾಗಿ ಹೇಳಿಕೆ ನೀಡಿದ್ದ ನಟ ಸತ್ಯರಾಜ್ ಕ್ಷಮೆ ಕೇಳುವವರೆಗೆ ಬಾಹುಬಲಿ-2 ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.['ಏ.28ರಂದು 'ಬಾಹುಬಲಿ 2' ಬಿಡುಗಡೆ ದಿನ ಬೆಂಗ್ಳೂರು ಬಂದ್']

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಈ ಹಿಂದೆ ನಡೆದಿದ್ದ ಪ್ರತಿಭಟನೆ ವೇಳೆ ನಟ ಸತ್ಯರಾಜ್ ನೀಡಿದ್ದ ಹೇಳಿಕೆ ವಿಡಿಯೋ ವೈರಲ್ ಆಗಿದೆ. ಬಾಹುಬಲಿ-2 ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಇರುವ ವೇಳೆಯಲ್ಲಿ ಸತ್ಯರಾಜ್ ಬೇಷರತ್ತಾಗಿ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿದೆ.

"ನಾವು ಆ ಸಿನಿಮಾವನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ. ಕರ್ನಾಟಕ ಹಾಗೂ ಕನ್ನಡಿಗರನ್ನು ನಿಂದನೆ ಮಾಡಿರುವ ತಮಿಳು ನಟ ಸತ್ಯರಾಜ್ ಅಭಿನಯಿಸಿರುವ ಬಾಹುಬಲಿ-2 ಸಿನಿಮಾವನ್ನು ಕರ್ನಾಟಕದಲ್ಲಿ ಯಾರೂ ನೋಡಬಾರದು. ಒಂದು ಲಕ್ಷಕ್ಕಿಂತ ಹೆಚ್ಚು ಕನ್ನಡಿಗರು ಅಂದು ಟೌನ್ ಹಾಲ್ ಬಳಿ ಸೇರಿ ಬೆಂಬಲ ವ್ಯಕ್ತಪಡಿಸಲಿದ್ದಾರೆ" ಎಂದು ವಾಟಾಳ್ ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.[ಡಬ್ಬಿಂಗ್ ವಿರುದ್ಧ ದನಿಯೆತ್ತಿದ ಜಗ್ಗೇಶ್, ವಾಟಾಳ್ ನಾಗರಾಜ್]

ಬಾಹುಬಲಿ-2 ಸಿನಿಮಾ ಬಿಡುಗಡೆ ಆಗಲಿರುವ ಏಪ್ರಿಲ್ 28ರಂದು ರಾಜ್ಯದಾದ್ಯಂತ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. "ಸಿನಿಮಾ ಪ್ರದರ್ಶಿಸದಂತೆ ಚಿತ್ರಮಂದಿರಗಲ ಮಾಲೀಕರನ್ನು ಮನವಿ ಮಾಡಿದ್ದೇವೆ. ಕರ್ನಾಟಕದಲ್ಲಿ ಸಿನಿಮಾ ಖರೀದಿಸದಂತೆ ವಿತರಕರನ್ನು ಕೇಳಿಕೊಂಡಿದ್ದೇವೆ" ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

"ನಾವು ಸಿನಿಮಾದ ವಿರೋಧಿಗಳಲ್ಲ. ಆದರೆ ಸತ್ಯರಾಜ್ ಕಡ್ಡಾಯವಾಗಿ ಕ್ಷಮೆ ಯಾಚಿಸಲೇಬೇಕು" ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಸರಕಾರ ಮಧ್ಯಪ್ರವೇಶಿಸಬೇಕು ಮತ್ತು ಸಿನಿಮಾ ತೆರೆ ಕಾಣುವುದಕ್ಕೆ ತಡೆಯೊಡ್ಡಬೇಕು ಎಂದು ಕೂಡ ಅವರು ಒತ್ತಾಯಿಸಿದ್ದಾರೆ.












Click it and Unblock the Notifications