Get Updates
Get notified of breaking news, exclusive insights, and must-see stories!

ಎಳೆಯ ವಯಸ್ಸಿನಲ್ಲಿ ಕೊನೆಯುಸಿರೆಳೆದು ಸುದ್ದಿಯಾದ ಪತ್ರಕರ್ತ

ಮೈಸೂರು, ಮೇ 20 : ಕನ್ನಡ ಪತ್ರಿಕೋದ್ಯಮದಲ್ಲಿ ಅತಿವೇಗವಾಗಿ ಬೆಳೆದು, ಅಷ್ಟೇ ವೇಗವಾಗಿ ಇಹಲೋಕ ತೊರೆದ ಯುವ ಪತ್ರಕರ್ತ ಶರತ್‌ ಕುಮಾರ್ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮೈಸೂರಿನ ಪತ್ರಕರ್ತರ ವಲಯದಲ್ಲಿ ಶೋಕ ಮನೆ ಮಾಡಿದೆ.

ಕೇವಲ ಮೂವತ್ತಮೂರು ಸಾಯುವ ವಯಸ್ಸಲ್ಲ. ಬದುಕು ಕಟ್ಟಿಕೊಳ್ಳುವ ವಯಸ್ಸು. ಆದರೆ ಅನಾರೋಗ್ಯ ಆತನನ್ನು ಬಿಡಲಿಲ್ಲ, ಇನ್ನಿಲ್ಲದಂತೆ ಕಾಡಿತು. ಕೊನೆಗೂ ಜವರಾಯ ತನ್ನತ್ತ ಸೆಳೆದುಕೊಂಡಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಶರತ್‌ ಕುಮಾರ್ ಪತ್ರಿಕೋದ್ಯಮದಲ್ಲಿ ಬಹುವೇಗವಾಗಿಯೇ ಬೆಳೆದಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ. [ಪತ್ರಕರ್ತ ನಾಗರಾಜ್ ಜಮಖಂಡಿ ಸಾವು]

ಕಾಲೇಜು ಓದುವಾಗಲೇ ಪ್ರೀತಿಸಿ ಮದುವೆಯಾಗಿದ್ದ. ಹೀಗಾಗಿ ಓದು ಅರ್ಧಕ್ಕೆ ನಿಲ್ಲಿಸಿ ಬದುಕು ಕಟ್ಟಿಕೊಳ್ಳಲು ದುಡಿಮೆಗೆ ಇಳಿದಿದ್ದ. ಅದು ಅನಿವಾರ್ಯವೂ ಆಗಿತ್ತು. ಮೊದಲಿಗೆ ಮೈಸೂರಿನ ಸ್ಥಳೀಯ ಚಾನಲ್‌ವೊಂದರಲ್ಲಿ ಕೆಲಸ ಆರಂಭಿಸಿದ ಆತ ಬಳಿಕ 2005ರಲ್ಲಿ ಮೈಸೂರುಮಿತ್ರ ಪತ್ರಿಕೆಗೆ ವರದಿಗಾರನಾಗಿ ಸೇರ್ಪಡೆಯಾಗಿದ್ದ. ಸುಮಾರು ಒಂದೂವರೆ ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ ಆತನಿಗೆ ದೃಶ್ಯಮಾಧ್ಯಮದತ್ತ ಒಲವಿತ್ತು. ಹೀಗಾಗಿ ಮೊದಲಿಗೆ ಜೀ ಕನ್ನಡಕ್ಕೆ ಸೇರಿದ್ದನು. ಅಲ್ಲಿಂದ ಸುವರ್ಣ ವಾಹಿನಿ ಆರಂಭವಾದಾಗ ಮೈಸೂರಿನ ವರದಿಗಾರನಾಗಿ ಕೆಲಸ ಆರಂಭಿಸಿದ್ದನು. [ಪಬ್ಲಿಕ್ ಟಿವಿಗೆ ಚಿನಿವಾರ್ ಗುಡ್ ಬೈ]

Kannada journalist Sharath Kumar dies at 33, RIP

ಬಳಿಕ ಅದೇ ಚಾನಲ್‌ನಿಂದ ಹುಬ್ಬಳ್ಳಿ ವರದಿಗಾರನಾಗಿ ಕೆಲಸ ಮಾಡಿದನಾದರೂ, ಅಲ್ಲಿಂದ ಬಿಟ್ಟು ಸಮಯ ನ್ಯೂಸ್ ಸೇರ್ಪಡೆಯಾದನು. ಸಮಯ ನ್ಯೂಸ್ ಸ್ಥಗಿತಗೊಂಡಾಗ ಹೊರ ಬಂದು ಕೆಲಕಾಲ ಬೆಂಗಳೂರಿನಿಂದ ಪ್ರಕಟವಾಗುವ ಸುವರ್ಣ ಟೈಮ್ಸ್ ಆಫ್ ಕರ್ನಾಟಕದಲ್ಲಿ ಉಪ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದನು. ಅಲ್ಲಿಂದ ಶಂಕರ ಟಿವಿ, ಅದಾದ ಬಳಿಕ ಇತ್ತೀಚೆಗೆ ಕಸ್ತೂರಿ ನ್ಯೂಸ್‌ನಲ್ಲಿ ಸುದ್ದಿವಾಚಕ, ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದನು.

ಹೇಗೋ ಒಂದು ನೆಲೆಯಾಗಿ ಬದುಕು ಕಂಡುಕೊಳ್ಳುವಾಗಲೇ ಆರೋಗ್ಯ ಹದಗೆಟ್ಟಿತ್ತು. ಹಾಗೆನೋಡಿದರೆ ಆತ 2006ರಲ್ಲೇ (ಮೈಸೂರುಮಿತ್ರದಲ್ಲಿ ಕೆಲಸ ನಿರ್ವಹಿಸುವಾಗ) ಆರೋಗ್ಯ ಕೈಕೊಟ್ಟು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಾಗಿದ್ದನು. ಅವತ್ತು ಅವನಿಗೆ ಮಧುಮೇಹದ ತಗಲುವ ಸೂಚನೆಯಿದ್ದು, ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಿಸಿದ್ದರು.

ಸಿಗರೇಟ್, ಒಂದಷ್ಟು ಕುಡಿತ ಅವನ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಆದರೂ ಅದಕ್ಕೆಲ್ಲ ಸೊಪ್ಪು ಹಾಕದ ಆತ ಕೆಲಸದಲ್ಲಿ ತೊಡಗಿಸಿಕೊಂಡಿದ್ದನು. ಒಂದಷ್ಟು ಹೆಸರು ಮಾಡುತ್ತಾ ಬೆಳೆಯತೊಡಗಿದ್ದನು. ದುರಂತ ಅಂದ್ರೆ ಮತ್ತೆ ಆರೋಗ್ಯ ಏರುಪೇರಾಗಿ ಆಸ್ಪತ್ರೆ ಸೇರುವಂತಾಯಿತು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನೇನು ಆರೋಗ್ಯ ಸುಧಾರಿಸಿ ಮನೆಗೆ ಬರುತ್ತಾನೆ ಎಂದು ಮನೆಯವರು ಕಾಯುತ್ತಿರುವಾಗಲೇ ಯಕೃತ್ತು ವಿಫಲವಾಗಿ ಮಂಗಳವಾರ ಮಧ್ಯಾಹ್ನ ಶರತ್‌ಕುಮಾರ್ ಬಾರದ ಲೋಕಕ್ಕೆ ಎದ್ದು ಹೋಗಿದ್ದಾನೆ.

ಮೈಸೂರಿನ ಅಗ್ರಹಾರದ ಸ್ವಗೃಹದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗಿದ್ದು, ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಸಲಾಗಿದೆ. ಮೃತ ಶರತ್‌ಕುಮಾರ್ ತಾಯಿ, ಅಕ್ಕ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. [ಕ್ರೈಂ ಸ್ಟೋರಿ ಖ್ಯಾತಿ ಬಾಲಕೃಷ್ಣ ಕಾಕತ್ಕರ್ ಇನ್ನಿಲ್ಲ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+