Namma Metro: ತಮಿಳುನಾಡುವರೆಗೆ ಮೆಟ್ರೋ ವಿಸ್ತರಣೆಗೆ ಕನ್ನಡಿಗರ ವಿರೋಧ ಏಕೆ!
ಬೆಂಗಳೂರು, ಸೆಪ್ಟಂಬರ್ 12: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ 'ಆರ್ವಿ ರಸ್ತೆ- ಬೊಮ್ಮಸಂದ್ರ' ಮಾರ್ಗವನ್ನು ತಮಿಳುನಾಡಿಗೆ ವಿಸ್ತರಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಚೆನ್ನೈ ಮೆಟ್ರೋ ರೈಲ್ ನಿಗಮ (CMRL) ಯೋಜನೆ ಕಾರ್ಯಸಾಧ್ಯತೆಯ ವರದಿಯನ್ನು ಬೆಂಗಳೂರಿನ ಬಿಎಂಆರ್ಸಿಎಲ್ಗೆ ಸಲ್ಲಿಕೆಯಾದ ಬಳಿಕ ಈ ಬಗ್ಗೆ ಚರ್ಚಿಯಾಗುತ್ತಿದ್ದು, ಇದೀಗ ಕನ್ನಡಿಗರು ಈ ನಮ್ಮ ಮೆಟ್ರೋ ವಿಸ್ತರಣೆ ಯೋಜನೆಯನ್ನು ವಿರೋಧಿಸುತ್ತಿವೆ.
ಬೆಂಗಳೂರು ಮೆಟ್ರೋ ಮಾರ್ಗವನ್ನು ತಮಿಳುನಾಡಿನ ಹೊಸೂರಿಗೆ ವಿಸ್ತರಣೆ ಮಾಡಬಾರದು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ. ನಮ್ಮ ಮೆಟ್ರೋ ಅಂತಾರಾಜ್ಯ ಸಂಪರ್ಕ ಹೊಂದಿದ್ದೇ ಆದಲ್ಲಿ ನೆರೆಯ ರಾಜ್ಯದಿಂದ ಬೆಂಗಳೂರು, ಕರ್ನಾಟಕಕ್ಕೆ ವಲಸೆ ಬರುವವರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಈಗಾಗಲೇ ನೆರೆಯ ತಮಿಳುನಾಡಿನಿಂದ ಲಕ್ಷಾಂತರ ಮಂದಿ ಬೆಂಗಳೂರಿಗೆ ಬಂದು ಬುದಕು ಕಟ್ಟಿಕೊಂಡಿದ್ದಾರೆ. ನಗರದ ಅತ್ತಿಬೆಲೆ, ಇಲೆಕ್ಟ್ರಾನಿಕ್ ಸಿಟಿ ಗಡಿಭಾಗದಲ್ಲಿ ತಮಿಳುನಾಡಿಗೆ ಸೇರಿದ ಕೈಗಾರಿಕೆಗಳು ತಲೆ ಎತ್ತಿವೆ. ಈ ಮಧ್ಯೆ ನಮ್ಮ ಮೆಟ್ರೋ ತಮಿಳುನಾಡಿಗೆ ಜೋಡಣೆ ಆದರೆ ಇಲ್ಲಿಂದ ವಲಸೆ ಹೋಗಬಹುದು. ಇಲ್ಲ ಅಲ್ಲಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ವಲಸೆ ಬರಬಹುದು. ಇದರಿಂದ ಕನ್ನಡಿಗರಿಗೆ ತೊಂದರೆ ಆಗಬಹುದು ಎಂದು ಕನ್ನಡಪರ ಹೋರಾಟಗಾರರ ಗುಂಪುಗಳು ಆಗ್ರಹಿಸಿವೆ.
ಹೊಸೂರು ಅವಲಂಬನೆಯಿಂದ ರಾಜ್ಯಕ್ಕಿಲ್ಲ ಲಾಭ
ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಬಳಿ ಈ ಕುರಿತು ಮನವಿ ಮಾಡಿದ್ದೇವೆ. ಆದರೆ ಅವರು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದಷ್ಟು ತ್ವರಿತವಾಗಿ ನಾವು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಕನ್ನಡ ಪರ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ತಿಳಿಸಿದರು.

ತಮಿಳುನಾಡು ಮೆಟ್ರೋ ಸಂಪರ್ಕ ಯೋಜನೆ ಅನುಮೋದಿಸಿದ ನಂತರ ಆ ರಾಜ್ಯ ಯೋಜನೆಗೆ ಬದ್ಧವಾಗಿಲ್ಲ. ಈಗಾಗಲೇ ಹೊಸೂರು ವ್ಯಾಪ್ತಿಯಲ್ಲಿನ ಹೂಡಿಕೆ ತಮಿಳನಾಡು ಉತ್ಸುಕವಾಗಿಲ್ಲ. ಇನ್ನೂ ಹೊಸೂರಿನಲ್ಲಿರುವ ಓಲಾ ದಂತಹ ಕಂಪನಿಗಳಿಗೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಇದೆ. ಹೀಗಾಗಿ ಇದರಿಂದ ರಾಜ್ಯಕ್ಕೆ ಅಷ್ಟೇನು ಲಾಭವಾಗದು.
ಕನ್ನಡಿಗರ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು
ಅನೇಕ ಕೈಗಾರಿಕೆ ಉತ್ಪಾದನಾ ಘಟಕಗಳು ಬೆಂಗಳೂರಿನ ಬದಲಾಗಿ ಹೊಸೂರು-ಕೃಷ್ಣಗಿರಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಮನಸ್ಸು ಮಾಡಿವೆ. ಹೆಚ್ಚಿನ ಹೂಡಿಕೆ ನಮ್ಮ ರಾಜ್ಯದಲ್ಲಿ ಆಗುವಂತೆ ನೋಡಿಕೊಳ್ಳಬೇಕು. ಐಟಿ ರಾಜಧಾನಿಯನ್ನು ತಮಿಳುನಾಡಿಗೆ ಸಂಪರ್ಕಿಸಲು ಸ್ಥಳೀಯ ಸಂಪನ್ಮೂಲ ನಾಶಮಾಡಬಾರದು ಎಂದು ಕನ್ನಡಿಗರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಕನ್ನಡಿಗರ ರಕ್ಷಣೆಗೆ ಆದ್ಯತೆ ನೀಡಬೇಕು. ಬೆಂಗಳೂರಿನಿಂದ ರಾಮನಗರ ಅಥವಾ ಬಿಡದಿ ಸಂಪರ್ಕ ಸಾಧಿಸುವ ಬದಲಾಗಿ ಹೊಸೂರಿಗೆ ಮೆಟ್ರೋವನ್ನು ವಿಸ್ತರಣೆ ಏಕೆ ಮುಖ್ಯವಾಗಿದೆ ಅಂತಲೂ ನಾವು ತಿಳಿದುಕೊಳ್ಳಬೇಕು.
ಗಮನಿಸಬೇಕಾದ ವಿಷಯವೆಂದರೆ ತಮಿಳುನಾಡು ತನ್ನ ಜನರ ಬಗ್ಗೆ ಹೆಚ್ಚು ಸ್ಪಷ್ಟವಾಗಿದೆ. ಆದರೆ ನಮ್ಮ ರಾಜ್ಯದಲ್ಲಿನ ನೀತಿಗಳು, ಕಾರ್ಯಕ್ರಮಗಳ ಬಗ್ಗೆ, ನಾವು ಅರ್ಥ ಮಾಡಿಕೊಳ್ಳಬೇಕಿದೆ.
ಯೋಜನೆ ಜಾರಿಯಾದರೆ ಬೆಂಗಳೂರಿಗೆ ಸಂಕಷ್ಟ
ಐಟಿ ಕೇಂದ್ರದಿಂದ ಕೆಲವೇ ಕಿಮೀ ದೂರದಲ್ಲಿ ಹೊಸೂರಿನಲ್ಲಿ ತಮಿಳುನಾಡು ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ತಿಳಿಸಿದೆ. ಇದು ಸಾಕಷ್ಟು ಪ್ರಯಾಣಿಕರನ್ನು ಆಕರ್ಷಿಸಲಿದೆ. ಹಾಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ ಮೇಲಿನ ಅವಲಂಬನೆ ತಪ್ಪಲಿದೆ. ಆರ್ಥಿಕವಾಗಿಯು ಮೆಟ್ರೋ ಸಂಪರ್ಕ ಸಾಧಿಸುವುದು ಒಳಿತಲ್ಲ ಎಂಬುದು ಸೇರಿದಂತೆ ಅನೇಕ ಅಂಶಗಳನ್ನು ಕರ್ನಾಟಕ ಸರ್ಕಾರಕ್ಕೆ ಕನ್ನಡಪರ ಹೋರಾಟಗಾರರು ತಿಳಿಸಿದ್ದಾರೆ.
CMRL ಅಧಿಕಾರಿಗಳು ಬೆಂಗಳೂರಿಗೆ ಬಂದು BMRCL ಗೆ ಬೊಮ್ಮಸಂದ್ರದಿಂದ ಹೊಸೂರುವರೆಗೆ ಮೆಟ್ರೋ ವಿಸ್ತರಣೆ ವರದಿ ಸಲ್ಲಿಸಿದ್ದರು. ಯೋಜನೆ ಪ್ರಕಾರ, ಒಟ್ಟು 23 ಕಿಲೋಮೀಟರ್ ಮಾರ್ಗ ನಿರ್ಮಿಸಬೇಕಿದೆ. ಇದರಲ್ಲಿ ತಮಿಳುನಾಡಿನಲ್ಲಿ ಸುಮಾರು 11 ಕಿಮೀ ಮತ್ತು ಕರ್ನಾಟಕದಲ್ಲಿ 12 ಕಿಮೀ ಮಾರ್ಗ ತಲೆಎತ್ತಲಿದೆ. ಇದರಲ್ಲಿ 12 ಮೆಟ್ರೋ ನಿಲ್ದಾಣಗಳು ಬರಲಿವೆ. ಈ ಬಗ್ಗೆ ಬಿಎಂಆರ್ಸಿಎಲ್ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಇದಾಗುತ್ತಿದ್ದಂತೆ ಈ ವಿಚಾರ ಸಾಕಷ್ಟು ಚರ್ಚೆಗೆ, ಮುನ್ನೆಲೆಗೆ ಬಂದಿದೆ.












Click it and Unblock the Notifications