ಗುಲಾಬ್ ಜಾಮೂನ್ ಜಮಾಯಿಸಿ ರಾಜ್ ಜನ್ಮದಿನ ಆಚರಣೆ!
ಒಂದು ದಿನವಾದರೂ ರಾಜಣ್ಣನನ್ನು, ಅವರು ಹಾಡಿರುವ ಹಾಡನ್ನು, ಅವರ ಭಾವಾಭಿನಯವನ್ನು ನೆನೆಸದೆ ಹೋದರೆ, ಅವರ ಡೈಲಾಗುಗಳನ್ನು ಹೊಡೆಯದೆ ಹೋದರೆ ಅವರು ಕನ್ನಡ ಪ್ರೇಮಿಯೇ ಅಲ್ಲ!
ಬೆಂಗಳೂರು, ಏಪ್ರಿಲ್ 24 : ಕರುನಾಡ ಕನ್ನಡಿಗರು ಸ್ವತಃ ತಮ್ಮ ಹುಟ್ಟುಹಬ್ಬವನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾರೋ ಇಲ್ವೊ, ಆದರೆ, ಕರುನಾಡ ಕಣ್ಮಣಿ ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಜನುಮದಿನ ಆಚರಿಸುವುದರಲ್ಲಿ ಏನೋ ವಿಶಿಷ್ಟ ಸಂಭ್ರಮ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇರುವ ರಾಜ್ ಪುತ್ಥಳಿಗೆಗೆ ಹೂವಿನ ಹಾರದ ಅಲಂಕಾರ, ಅವರ ಸಮಾಧಿಯ ಬಳಿ ಪೂಜೆ, ಭಕ್ತರಿಗೆ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ.... ಎಲ್ಲೆಲ್ಲೂ ಡಾ. ರಾಜ್ ಅವರು ಸುಶ್ರಾವ್ಯವಾಗಿ ಹಾಡಿರುವ ಹಾಡುಗಳೇ ಎಲ್ಲೆಡೆ ಮೊಳಗುತ್ತಿವೆ.
ಅವರ ಅಭಿಮಾನಿಯೊಬ್ಬರು ದುಂಡದುಂಡಗೆ ಕೆಂಪುಕೆಂಪಾದ ರುಚಿರುಚಿಯಾದ ಕಂಡೊಡನೆ ಬಾಯಲ್ಲಿ ನೀರೂರಿಸುವ ಗುಲಾಬ್ ಜಾಮೂನನ್ನು ತಯಾರಿಸಿ, ತಾವೇ ಮೆದ್ದು ಅಣ್ಣಾವ್ರ ಹುಟ್ಟುಹಬ್ಬ ಆಚರಿಸಿದ್ದಲ್ಲದೆ, ಆ ಚಿತ್ರವನ್ನು ಟ್ವಿಟ್ಟರಿನಲ್ಲಿ ಹಾಕಿ ಎಲ್ಲ ಹೊಟ್ಟೆ ಉರಿಸಿದ್ದಾರೆ. [ನನ್ನ ಹಣೆಗೆ ಗಲ್ಲಕೆ ಮುತ್ತನ್ನು ರಾಜಣ್ಣ ಕೊಟ್ಟಾಗ!]
ರಾಜ್ ಹುಟ್ಟುಹಬ್ಬ ಆಚರಣೆಗೆ ನಾನಾ ಸ್ವರೂಪಗಳು. ಕಟ್ಟಾ ಆರಾಧಕರು ಈ ದಿನ ಕಚೇರಿಗೆ ರಜಾ ಹಾಕಿ, ಶೇ.50ರಷ್ಟು ರಿಯಾಯಿತಿ ನೀಡುತ್ತಿರುವ, ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಚಿತ್ರವನ್ನು ಎಂಟನೇ ಬಾರಿ ನೋಡಲು ಸಾಲು ನಿಂತಿರುತ್ತಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲೆಲ್ಲ ರಾಜ್ ಹುಟ್ಟುಹಬ್ಬದ ಸಂಭ್ರಮ ಮೇರೆಮೀರಿದೆ. ಒಂದು ದಿನವಾದರೂ ರಾಜಣ್ಣನನ್ನು, ಅವರು ಹಾಡಿರುವ ಹಾಡನ್ನು, ಅವರ ಭಾವಾಭಿನಯವನ್ನು ನೆನೆಸದೆ ಹೋದರೆ, ಅವರ ಡೈಲಾಗುಗಳನ್ನು ಹೊಡೆಯದೆ ಹೋದರೆ ಅವರು ಕನ್ನಡ ಪ್ರೇಮಿಯೇ ಅಲ್ಲ ಎನ್ನುವಷ್ಟು ರಾಜ್ ಆವರಿಸಿಕೊಂಡಿದ್ದಾರೆ. [ಲೀಲಾವತಿ ಆತ್ಮಕಥನ 'ರಾಜ್ ಲೀಲಾ ವಿನೋದ'ದಲ್ಲಿ ಅಂಥಾದ್ದೇನಿದೆ?]
|
ಚಪ್ಪರಿಸಿಕೊಂಡು ಜಮಾಯಿಸುವುದೆಂದರೆ...
ರಾಜ್ ಸ್ವತಃ ತಿನಿಸಿನ ಆಸ್ವಾದಕರಾಗಿದ್ದರು. ಸಿಹಿತಿನಿಸು ಮತ್ತು ಮಾಂಸದ ಖಾದ್ಯಗಳನ್ನು ಚಪ್ಪರಿಸಿಕೊಂಡು ಜಮಾಯಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಭಿಮಾನಿಗಳು ಕೂಡ ಹಾಗೆ ಮಾಡದಿದ್ದರೆ ಹೇಗೆ?
|
ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
ಕಸ್ತೂರಿ ನಿವಾಸ ಚಿತ್ರದ ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ ಸೋತೆ ನಾನಾಗ ಎಂಬ ಅಜರಾಮರ ಹಾಡಿಗೆ ಕಟ್ಟಾ ಅಭಿಮಾನಿಯೊಬ್ಬಳು ಅಭಿನಯಿಸಿ ಅಣ್ಣಾವ್ರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
|
ರಾಜ್ ಗೆ ತೆಲುಗಿನ ಪವರ್ ಸ್ಟಾರ್ ನಮನ
ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಟ್ವಿಟ್ಟರಿನಲ್ಲಿ ರಾಜ್ ಕುಮಾರ್ ಅವರ ಭಾವಚಿತ್ರ ಅಂಟಿಸಿ, ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.
|
ಪುಟಾಣಿ ಅಭಿಮಾನಿಯ ಅಭಿಮಾನದ ಮಹಾಪೂರ
ಅಣ್ಣಾವ್ರೇನಾದರೂ ಈಗ ಇದ್ದಿದ್ರೆ ಈ ಮುದ್ದು ಪೋರಿಯ ಮುದ್ದಾದ ಗಲ್ಲಕ್ಕೆ ಲೊಚಲೊಚನೆ ಮುತ್ತಿನ ಮಳೆಗರೆದುಬಿಡುತ್ತಿದ್ದರೇನೋ. ಹಾಗೆಯೆ, ಸಿಹಿ ಮುತ್ತು ಸಿಹಿ ಮುತ್ತು ನಂಗೊಂದು ಎಂದು ಹಾಡೇಬಿಡುತ್ತಿದ್ದರೇನೋ... ಪುಟಾಣಿ ಅಭಿಮಾನಿಯ ಅಭಿಮಾನದ ಮಹಾಪೂರ
|
ಅಣ್ಣಾವ್ರಿಗೆ ರಮ್ಯಾ ಅಭಿಮಾನಿಗಳು ಶುಭಾಶಯ
ಬಂಗಾರದ ಮನುಷ್ಯ, ಅಭಿಮಾನಿಗಳ ದೇವರು, ಮುತ್ತುರಾಜ, ನಮ್ಮ ಪ್ರೀತಿಯ ಡಾ. ರಾಜ್ಕುಮಾರ್ ರವರಿಗೆ ಜನುಮದಿನದ ಶುಭಾಶಯಗಳು ಎಂದು ಲಕ್ಕಿ ಸ್ಟಾರ್ ರಮ್ಯಾ ಅಭಿಮಾನಿಗಳು ಕೋರಿದ್ದಾರೆ.
|
ಗೂಗಲ್ ಡೂಡಲ್ ನಿಂದ ರಾಜ್ ಗೆ ನಮನ
ಗೂಗಲ್ ಡೂಡಲ್ ನಿಂದ ಕರುನಾಡ ಕಣ್ಮಣಿ ಡಾ. ರಾಜ್ ಕುಮಾರ್ ಅವರಿಗೆ ಗೌರವ ಅರ್ಪಣೆ. ಎಲ್ಲೆಲ್ಲೂ ಈ ಗೂಗಲ್ ಡೂಡಲ್ ಸುದ್ದಿಯಾಗುತ್ತಿದೆ.