ಕನಕಪುರದವರಿಂದ ಆರ್. ಆರ್. ನಗರದಲ್ಲಿ ಹಣ ಹಂಚಿಕೆ
ಬೆಂಗಳೂರು, ನವೆಂಬರ್ 01: "ಕನಕಪುರದವರು ಬಂದು ಶನಿವಾರ ರಾತ್ರಿ ರಾಜರಾಜೇಶ್ವರಿ ನಗರದಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಏಳು ಕಡೆ ಹಣ ಹಂಚಿ ಸಿಕ್ಕಿಬಿದ್ದಿದ್ದಾರೆ" ಎಂದು ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಆರೋಪಿಸಿದರು.
ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ನವರು ಅಷ್ಟು ಪ್ರಮಾಣಿಕರಾಗಿದ್ದರೆ ಹಣ ಹಂಚುವ ಕೆಲಸ ಏಕೆ ಮಾಡಬೇಕಿತ್ತು. ಹಣ ಹಂಚುವುದರಿಂದ ಏನೂ ಸಾಧನೆ ಆಗೋಲ್ಲ. ನಿಮ್ಮ ಹಣಕ್ಕಾಗಿ ಇಲ್ಲಿ ಯಾರೂ ಕಾಯುತ್ತಿಲ್ಲ" ಎಂದು ಹೇಳಿದರು.
"ಶನಿವಾರ ರಾತ್ರಿ ಹಣ ಹಂಚಿಕೆ ಮಾಡುತ್ತಿದ್ದವರ ವಿರುದ್ಧ 7 ಎಫ್ಐಆರ್ ದಾಖಲಾಗಿದೆ. ಕೆಲವರು ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಎಲ್ಲವೂ ತನಿಖೆಯಾಗುತ್ತಿದೆ. ಕ್ಷೇತ್ರದಲ್ಲಿ ಇರುವ ಜನರನ್ನು ಹಣದಿಂದ ಕೊಂಡುಕೊಳ್ಳಲು ಆಗುವುದಿಲ್ಲ" ಎಂದು ಮುನಿರತ್ನ ತಿಳಿಸಿದರು.

"ಒಂದು ಮತಕ್ಕೆ 2, 3, 5 ಸಾವಿರದ ತನಕ ಆಮಿಷ ವೊಡ್ಡಲಾಗುತ್ತಿದೆ. ಅವರಿಗೆ ದುಡ್ಡಿಗೇನೂ ಕಮ್ಮಿ ಇಲ್ಲ. ಕೊಡ್ತಿದ್ದಾರೆ. ಇಂದು ಸಂಜೆಯಾದ ಮೇಲೆ ಹೊರಗಡೆಯವರು ಯಾರೂ ಸಹ ಇರುವುದಿಲ್ಲ. ಜನರು ನೆಮ್ಮದಿಯಾಗಿ ಮತ ಚಲಾವಣೆ ಮಾಡಲಿ" ಎಂದರು.
"ನಿಮ್ಮ ಪರ ಕನಕಪುರದಿಂದ ಜನ ಬರ್ತಾರೆ ಅಂತ ಗೊತ್ತು. ಕನಕಪುರದಿಂದ ಜನರನ್ನು ಕರೆಸಿ ಬೆಂಗಳೂರು ಹಾಳು ಮಾಡುವ ಅಗತ್ಯವಿತ್ತೆ?. ಬೆಂಗಳೂರನ್ನು ಶಾಂತಿಯಿಂದ ಇರೋಕೆ ಬಿಡಿ" ಎಂದು ಮನಿರತ್ನ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದರು.
"2023ಕ್ಕೆ ಕಾಂಗ್ರೆಸ್ ಪಕ್ಷವನ್ನು ಡಿ. ಕೆ. ಶಿವಕುಮಾರ್ ಉಳಿಸಲ್ಲ. ಡಿಕೆಶಿ ಸಿಎಂ ಎಂದರೆ ಸಿದ್ದರಾಮಯ್ಯ ಹೋಗ್ತಾರೆ. ಸಿದ್ದರಾಮಯ್ಯ ಸಿಎಂ ಎಂದರೆ ಡಿಕೆಶಿ ಹೋಗ್ತಾರೆ. ನೀವು ಸಿದ್ದರಾಮಯ್ಯ ಒಟ್ಟಿಗೆ ಹೋಗುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿಲ್ಲ" ಎಂದು ಮುನಿರತ್ನ ಹೇಳಿದರು.
ನವೆಂಬರ್ 3ರಂದು ಆರ್. ಆರ್. ನಗರ ಉಪ ಚುನಾವಣೆ ನಡೆಯಲಿದೆ. ಬಹಿರಂಗ ಪ್ರಚಾರ ಭಾನುವಾರ ಸಂಜೆ ಅಂತ್ಯಗೊಳ್ಳಲಿದೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ನಿಂದ ಹೆಚ್. ಕುಸುಮಾ ಮತ್ತು ಜೆಡಿಎಸ್ನಿಂದ ಕೃಷ್ಣಮೂರ್ತಿ ಅಭ್ಯರ್ಥಿಗಳು.












Click it and Unblock the Notifications