ಸೆ.27ತನಕ ಸಿಬಿಐ ವಶದಲ್ಲಿ ಕಂಪ್ಲಿ ಶಾಸಕ ಸುರೇಶ್

ಬಿಎಸ್ ಆರ್ ಕಾಂಗ್ರೆಸ್ ಶಾಸಕ ಸುರೇಶ್ ಬಾಬು ಅವರನ್ನು ಬಂಧಿಸಿದ್ದ ಸಿಬಿಐ ಅಧಿಕಾರಿಗಳು ಶುಕ್ರವಾರ ಸಿಬಿಐ ವಿಶೇಷ ಕೋರ್ಟಿಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಸೆ.27ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ.
ಕಳೆದ ಎರಡು ದಿನಗಳಿಂದ ಸುರೇಶ್ ಬಾಬು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದ ಸಿಬಿಐ, ಗುರುವಾರ ಮಧ್ಯಾಹ್ನ ಅವರನ್ನು ಬಂಧಿಸಿತ್ತು. ನಂತರ ಸುರೇಶ್ ಬಾಬು ಅವರನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ನಡೆಯುತ್ತಿರುವ ತನಿಖೆಯ ಭಾಗವಾಗಿ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಸಾಯಂಕಾಲ 5 ಗಂಟೆ ಸುಮಾರಿಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಕಚೇರಿ ಹಾಗೂ ಸಾಗರದಲ್ಲಿರುವ ಅವರ ನಿವಾಸಕ್ಕೆ ಫ್ಯಾಕ್ಸ್ ಮೂಲಕ ಮಾಹಿತಿ ನೀಡಿದ್ದರು.
ಸಿಬಿಐ ಡಿಐಜಿ ಹಿತೇಂದ್ರ, ಎಸ್ ಪಿ ಸುಬ್ರಮಣ್ಯೇಶ್ವರ ರಾವ್ ಅವರ ನೇತೃತ್ವದ ತಂಡ ಸುರೇಶ್ ಬಾಬು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬೆಲೇಕೇರಿ ಬಂದರು ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ (ಬಿಜೆಪಿ), ಕಾರವಾರದ ಶಾಸಕ ಸತೀಶ್ ಸೈಲ್ (ಪಕ್ಷೇತರ) ಮತ್ತು ಕೂಡ್ಲಗಿ ಶಾಸಕ ನಾಗೇಂದ್ರ (ಪಕ್ಷೇತರ) ಕೂಡಾ ಬಂಧನ ಭೀತಿಯಲ್ಲಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪಾಲುದಾರಿಕೆ ಸಂಸ್ಥೆಯಾದ ದೇವಿ ಎಂಟರ್ ಪ್ರೈಸಸ್ ಕಂಪನಿಗೆ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಣೆ ಮಾಡಿರುವ ಅರೋಪದ ವಿಚಾರಣೆಗಾಗಿ ಸುರೇಶ್ ಬಾಬು ಅವರನ್ನು ಬಂಧಿಸಲಾಗಿದೆ. 5000 ಕೋಟಿ ರು ಗೂ ಅಧಿಕ ಅಕ್ರಮ ಮೌಲ್ಯದ ಹಗರಣ ಇದಾಗಿದೆ. 8 ಲಕ್ಷ ಟನ್ ಗೂ ಅಧಿಕ ಕಬ್ಬಿಣದ ಅದಿರು ನಾಪತ್ತೆಯಾಗಿತ್ತು.
ಸುರೇಶ್ ಬಾಬು ಮೇಲೆ ಅಕ್ರಮ ಆಸ್ತಿ, ಬೇಲ್ ಗಾಗಿ ಡೀಲ್ ಪ್ರಕರಣ ಕೂಡಾ ಇದೆ. ಜನಾರ್ದನ ರೆಡ್ಡಿಗೆ ಜಾಮೀನು ಕೊಡಿಸಲು ಲಂಚ ಕೊಟ್ಟು ಡೀಲ್ ಕುದುರಿಸಿದ ಆರೋಪದಲ್ಲಿ ಒಮ್ಮೆ ಬಂಧನ ಕೂಡಾ ಆಗಿದ್ದರು.
ಎಸ್ ಆರ್ ಹಿರೇಮಠ್ ಪ್ರತಿಕ್ರಿಯೆ: ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ್ ಅವರು ಸುರೇಶ್ ಬಾಬು ಬಂಧನದ ಬಗ್ಗೆ ಪ್ರತಿಕ್ರಿಯಿಸಿ, ನ್ಯಾಯಾಂಗದ ಜತೆಗೆ ಕಾರ್ಯಾಂಗ ಕೂಡಾ ಬಲಗೊಳ್ಳಬೇಕು. ಸಿದ್ದರಾಮಯ್ಯ ಅವರು ಒಳ್ಳೆ ರಾಜಕಾರಣಿ ಅವರು ಸಮಾಜ ಸುಧಾರಣೆಗೆ ಒತ್ತು ನೀಡುತ್ತಿದ್ದಾರೆ ರೆಡ್ಡಿ ಅಂಡ್ ಗ್ಯಾಂಗ್ ಮೇಲೆ 29ಕ್ಕೂ ಅಧಿಕ ಪ್ರಕರಣಗಳಿವೆ. ಬೆಲೇಕೇರಿ ಪ್ರಕರಣದಲ್ಲಿ ಐದು ಎಫ್ ಐಆರ್ ಹಾಕಲಾಗಿದೆ. ಇನ್ನೂ 22ಕ್ಕೂ ಅಧಿಕ ಎಫ್ ಐಆರ್ ದಾಖಲಾಗುವ ಸಾಧ್ಯತೆಯಿದೆ. ಲೋಕಾಯುಕ್ತ ಕೋರ್ಟ್ ನಲ್ಲಿ ವಿಚಾರಣೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.












Click it and Unblock the Notifications