ಕಾಕೋಳಿನಲ್ಲಿ ಶ್ರೀಪಾದರಾಜರ ಆರಾಧನಾ ಮಹೋತ್ಸವ
ದೊಡ್ಡಬಳ್ಳಾಪುರ, ಜೂನ್ 26: ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಿಂದ ಕಾಕೋಳಿನಲ್ಲಿ ಶ್ರೀಪಾದರಾಜ ಆರಾಧನಾ ಮಹೋತ್ಸವವು ಜೂನ್ 27ರಂದು ನಿಗದಿಯಾಗಿದೆ.
ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಚಾರಿತ್ರಿಕ ಪ್ರೇಕ್ಷಣೀಯ ತಾಣ ಕಾಕೋಳಿನಲ್ಲಿ ಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಕೃಷ್ಣನ ಜಾಗೃತ ಸನ್ನಿಧಾನದ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಕಾಣ ಬನ್ನಿ ಕಣ್ಮನ ತಣಿಸುವ ಕಾಕೋಳು ಕ್ಷೇತ್ರವ
ಮಹಿಮಾನ್ವಿತ ಮಾಧ್ವ ತಪಸ್ವಿ, ವ್ಯಾಸ-ದಾಸ ಸಾಹಿತ್ಯಗಳ ಸವ್ಯಸಾಚಿ, ಸಾಧನದ ಸತ್ಪಥ ತೋರುವ ಭಕ್ತಾನುಕಂಪಿ ಯತಿಪುಂಗವ , ಪರಮ ಭಾಗವತ ಶಿರೋಮಣಿ ಧೃವಾಂಶ ಸಂಭೂತರಾದ ಶ್ರೀಪಾದರಾಜರ-ಆರಾಧನಾ ಮಹೋತ್ಸವವನ್ನು ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದೊಂದಿಗೆ ವಿಶೇಷವಾಗಿ ಗಾನ - ಜ್ಞಾನ ಯಜ್ಞವನ್ನಾಗಿ ಆಚರಿಸಲಾಗುವುದು.
ಕೀರ್ತಿಶೇಷ ಶ್ರೀ ಹೊಳವನಹಳ್ಳಿ ನಾಗರಾಜಮೂರ್ತಿ ಸ್ಮರಣಾರ್ಥ ಅವರ ಕುಟುಂಬವರ್ಗದವರು ಪ್ರಧಾನ ಸೇವಾಕರ್ತರಾಗಿ ಆಯೋಜಿಸಿರುವ ಗುರುಭಕ್ತಿ ಉತ್ಸವದಲ್ಲಿ ಜೂನ್ 27 ರಂದು ಬೆಳಿಗ್ಗೆ 9.00ಕ್ಕೆ ಕ್ಯಾ. ಕೆ.ವಿ ಮಣಿ (ನಿ) ನೇತೃತ್ವದಲ್ಲಿ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್ ನವರಿಂದ ವಿಷ್ಣುಸಹಸ್ರನಾಮ ಪಾರಾಯಣ ನಡೆಯಲಿದೆ.
ನಂತರ ಶ್ರೀಪಾದರಾಜರ ಮಹಿಮಾ ಕುರಿತು ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯರು ಮತ್ತು ವಿದ್ವಾನ್ ಆಯನೂರು ಮಧುಸೂಧನಾರ್ಯರು ಪ್ರವಚನ ನೆರವೇರಿಸಕೊಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ವಿದ್ವಾಂಸ ಭಕ್ತಿ ಪೀಠಪ್ರಶಸ್ತಿ ಪುರಸ್ಕøತ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ .
ಬೆಂಗಳೂರಿನಿಂದ 30 ಕಿ.ಮೀ. ದೂರದ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಐತಿಹಾಸಿಕ ನೆಲೆಯ ಕಾಕೋಳಿನಲ್ಲಿ ಮೈದಳೆದಿರುವ ಅಪರೂಪದ ಶ್ರೀ ವೇಣುಗೋಪಾಲ ಕೃಷ್ಣ ದೇವಾಲಯ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇದೊಂದು ಪೌರಾಣಿಕ ಹಿನ್ನೆಲೆಯಿರುವ ಜಾಗೃತ ಸನ್ನಿಧಾನ. ಆಧುನಿಕತೆಯಲ್ಲೇ ಮಿಂಚಿದ್ದರೂ, ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ.
ಕಾಕೋಳು ಕ್ಷೇತ್ರಕ್ಕೆ ತಲುಪುವುದು ಹೇಗೆ? ಬೆಂಗಳೂರು ಸಿಟಿ ಮಾರ್ಕೆಟ್ (ಮಸೀದಿ ಮುಂಭಾಗದಿಂದ) ಬಿಎಂಟಿಸಿ 285ಇ, 251ಎ, 266ಸಿ. ಶಿವಾಜಿನಗರದಿಂದ : 285ಕ್ಯೂ, ಎಲ್/ವಿ. ಮೆಜೆಸ್ಟಿಕ್ನಿಂದ : 406 (ನೆಲಮಂಗಲ ಮಾರ್ಗ), ಬಾಪೂಜಿನಗರದಿಂದ : 248ಕ್ಯೂ (ಪೀಣ್ಯ-ಜಾಲಹಳ್ಳಿ ಕ್ರಾಸ್ ಮಾರ್ಗ) ಬಸ್ಸುಗಳು ನೇರವಾಗಿ ಕಾಕೋಳು ತಲುಪುತ್ತದೆ.