ಬಸವನಗುಡಿ ಕಡ್ಲೇಕಾಯಿ ಪರಿಷೆ, ಹಳ್ಳಿಯ ಚಿತ್ರ, ಹರೆಯದ ಸಂತಸ
ನವೆಂಬರ್ 28 ಬಸವನಗುಡಿಯಲ್ಲಿ ಕಡ್ಲೇಕಾಯಿ ಪರಿಷೆ ಸಂಭ್ರಮ. ಎಲ್ಲ ವಯಸ್ಸಿನವರು ಸಂಭ್ರಮ ಪಡಬಹುದಾದ ಜಾತ್ರೆ ವಾತಾವರಣ, ಆಧ್ಯಾತ್ಮಿಕ ಕಾರಣ ಇಲ್ಲಿದೆ. ಇದು ಕಾರ್ತೀಕ ಕಡೇ ಸೋಮವಾರದ ವಿಶೇಷ
ಬೆಂಗಳೂರು, ನವೆಂಬರ್ 28: ಬಸವನಗುಡಿಯಲ್ಲಿ ಸೋಮವಾರ ಕಡ್ಲೇಕಾಯಿ ಪರಿಷೆ ಸಂಭ್ರಮ. ಕಾರ್ತೀಕ ಮಾಸದ ಕಡೇ ಸೋಮವಾರ ಪ್ರತಿ ವರ್ಷ ನಡೆಯುವ ಅದ್ಧೂರಿ ಜಾತ್ರೆ ಇದು. ಪ್ರತಿ ಸಲ ಎರಡ್ಮೂರು ದಿನದ ಹಿಂದೆಯೇ ಸಂಭ್ರಮಕ್ಕೆ ಚಾಲನೆ ಸಿಕ್ಕಿ ಬಿಡುತ್ತದೆ. ಈ ಬಾರಿಯೂ ಅಷ್ಟೇ. ಶನಿವಾರದಿಂದಲೇ ರಸ್ತೆ ಬದಿಯಲ್ಲಿ ವಿವಿಧ ವಸ್ತು, ಪದಾರ್ಥಗಳನ್ನು ಮಾರುವವರು ಜಮೆಯಾಗಿದ್ದಾರೆ.
ಭಾನುವಾರವಂತೂ ವಿಪರೀತ ಜನಜಂಗುಳಿಯಿತ್ತು. ಅದರಲ್ಲೂ ಹದಿಹರೆಯದ ಗಂಡು-ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚಿತ್ತು. ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡವರು, ಕಡ್ಲೇಪುರಿ, ಕಡ್ಲೇಕಾಯಿಗೆ ಚೌಕಾಶಿ ಮಾಡುತ್ತಿದ್ದವರು. ಹ್ಯಾಂಡಿ ಕ್ಯಾಮ್, ಕ್ಯಾಮೆರಾ, ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದವರು ಅಲ್ಲಲ್ಲಿ ಕಂಡುಬಂದರು.[ಸೋಮವಾರ ಬೆಂಗಳೂರು ಕಡಲೆಕಾಯಿ ಪರಿಷೆ ಉದ್ಘಾಟನೆ]

ಬೆಂಗಳೂರಿಗರಿಗೆ ಹಳ್ಳಿಯ ಜಾತ್ರೆ ಅನುಭವವನ್ನು ಕೊಡಮಾಡುವ ಈ ಪರಿಷೆಗೆ ಎಲ್ಲೆಲ್ಲಿಂದಲೋ ಜನ ಬರುತ್ತಾರೆ. ಬಸವನಗುಡಿಯ ಅಕ್ಕಪಕ್ಕದಲ್ಲಿ ಶಾಲೆ-ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಗೆಳೆಯ-ಗೆಳತಿಯರ ಗುಂಪು ಸರ್ವೇ ಸಾಮಾನ್ಯ. ಪ್ರೇಮಿಗಳು, ನವವಿವಿವಾಹಿತರು ಸಹ ಇಲ್ಲಿನ ಜಾತ್ರೆಯಲ್ಲಿ ಖುಷಿಯಿಂದ ಸುತ್ತಾಡುವುದನ್ನು ಕಾಣಬಹುದು.
ಪಾನಿಪೂರಿ, ತಿಂಡಿಗಳು, ತಂಪು ಪಾನೀಯ, ಜೋಳ, ಕಬ್ಬಿನಹಾಲು, ಗೊಂಬೆ, ಅಲಂಕಾರಿಕ ವಸ್ತುಗಳು, ಬಟ್ಟೆ ಇತ್ಯಾದಿಗಳ ಮಾರಾಟದ ಭರಾಟೆ ಕೂಡ ಈ ಬಾರಿ ಜೋರಾಗಿದೆ. ಈ ಮಧ್ಯೆ ಜೈಂಟ್ ವ್ಹೀಲ್, ಮಕ್ಕಳ ಆಟದ ರೈಲು ಮತ್ತಿತರ ಆಟಿಕೆಗಳಲ್ಲಿ ಸುತ್ತಾಡುತ್ತಾ ಸಂಭ್ರಮಪಡುವುದು ಕೂಡ ಕಂಡುಬರುತ್ತಿದೆ.[ಬಡವರ ಬಾದಾಮಿ ಹಬ್ಬಕ್ಕೆ, ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ]

ಅಂದಹಾಗೆ, ಈ ಪರಿಷೆಯಲ್ಲಿನ ಮಾರಾಟ, ವಾತಾವರಣ ಸೋಮವಾರ ತುಂಬ ಹೆಚ್ಚಾಗಿರುತ್ತದೆ. ಆದರೆ ಮಂಗಳವಾರ ಜಾತ್ರೆ ಇರುತ್ತದೆಯಾದರೂ ಸಂಭ್ರಮ ಹಿಂದಿನ ದಿನದಷ್ಟಿರುವುದಿಲ್ಲ. ಈ ಎರಡು ದಿನದ ಪೈಕಿ ಒಂದು ದಿನ ಆರಾಮವಾಗಿ ಹೋಗಬಹುದು. ಪೊಲೀಸರು ಭದ್ರತೆಗೆ ಇರುತ್ತಾರಾದರೂ ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರ ಇರಲಿ.

ಜೊತೆಗೆ ಪಾರ್ಕಿಂಗ್ ಬಗ್ಗೆ ನಿಗಾ ಇರಲಿ. ರಾಮಕೃಷ್ಣಾಶ್ರಮದಿಂದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಬಳಿಯ ಕಾಮತ್ ಹೋಟೆಲ್ ವರೆಗೆ ಜನರು, ಮಾರಾಟ ಎಲ್ಲದರಿಂದ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ಎನ್.ಆರ್.ಕಾಲೋನಿ, ಹನುಮಂತನಗರ, ವಿದ್ಯಾಪೀಠ ಸುತ್ತಮುತ್ತ ವಾಹನ ದಟ್ಟಣೆ ಇರುತ್ತದೆ. ಆದ್ದರಿಂದ ಈ ಬಗ್ಗೆ ಕೂಡ ತಿಳಿದಿರಲಿ.












Click it and Unblock the Notifications