ಕಡಲೆಕಾಯಿ ಪರಿಷೆ, ಬಿಡ್ ಕೂಗಿದ್ದ ವ್ಯಕ್ತಿ ನಾಪತ್ತೆ!
ಬೆಂಗಳೂರು, ನವೆಂಬರ್10 : ಕಡಲೆಕಾಯಿ ಪರಿಷೆಯಲ್ಲಿ ಸುಂಕ ವಸೂಲಿ ಮಾಡಲು ಟೆಂಡರ್ ಪಡೆದಿದ್ದ ವ್ಯಕ್ತಿ ನಾಪತ್ತೆಯಾಗಿದ್ದು ಮುಜರಾಯಿ ಇಲಾಖೆ ಅಧಿಕಾರಿಗಳು ಗೊಂದಲಗೊಂಡಿದ್ದಾರೆ. ನ.13ರಂದು ಐತಿಹಾಸಿಕ ಕಡಲೆಯಾಯಿ ಪರಿಷೆಗೆ ಚಾಲನೆ ಸಿಗಲಿದೆ.
ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಸುಂಕ ವಸೂಲಿ ಮಾಡಲು ವಿನಯ್ ಎಂಬುವವರು 9 ಲಕ್ಷ ರೂ. ಹರಾಜು ಕೂಗಿದ್ದರು. ಆದರೆ, ಹಣ ಪಾವತಿ ಮಾಡದೇ ಅವರು ನಾಪತ್ತೆಯಾಗಿದ್ದು, ಮರು ಹರಾಜು ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ವಿನಯ್ 2.5 ರಿಂದ 3.50 ಲಕ್ಷ ರೂ. ಮೌಲ್ಯದ ಹರಾಜನ್ನು ಬರೋಬ್ಬರಿ 9 ಲಕ್ಷ ರೂ.ಗೆ ಕೂಗಿದ್ದ. ಆದರೆ, ಬಳಿಕ ಯಾರೋ ನಷ್ಟವಾಗಲಿದೆ ಎಂದು ಹೇಳಿರುವುದರಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸುಂಕ ವಸೂಲಿಗಾಗಿ 2 ಬಾರಿ ಕರೆದಿದ್ದ ಹರಾಜಿನಲ್ಲಿ 2 ಲಕ್ಷ ರೂ.ಗೆ ಬಿಡ್ ಕೂಗಲಾಗಿದೆ. ಕಳೆದ ವರ್ಷ 2.76 ಲಕ್ಷ ರೂ.ಗೆ ಹರಾಜಾಗಿತ್ತು. ಈ ವರ್ಷ 76 ಸಾವಿರ ಕಡಿಮೆಯಾಗಿದೆ.
ವಾರ್ಷಿಕ ಗುತ್ತಿಗೆ : ದೊಡ್ಡಗಣಪತಿ ದೇವಾಲಯ ಹಾಗೂ ದೊಡ್ಡ ಬಸವಣ್ಣ ದೇವಾಲಯಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಹೀಗಾಗಿ ದೇವಾಲಯದ ಹೊರಭಾಗದಲ್ಲಿ ಚಪ್ಪಲಿ ಬಿಡಲು ಅವಕಾಶ ಕಲ್ಪಿಸಲಾಗಿದ್ದು, ವರ್ಷಕ್ಕೊಮ್ಮೆ ಹರಾಜು ಮೂಲಕ ಚಪ್ಪಲಿ ಸ್ಟ್ಯಾಂಡ್ ಗುತ್ತಿಗೆ ನೀಡಲಾಗುತ್ತದೆ.
ಈ ಬಾರಿ ದೊಡ್ಡ ಬಸವಣ್ಣ ದೇವಾಲಯದಲ್ಲಿ ಚಪ್ಪಲಿ ಸ್ಟ್ಯಾಂಡ್ ಗೆ 60 ಸಾವಿರ ರೂಗೆ ಗುತ್ತಿಗೆ ನೀಡಲಾಗಿದೆ. ಇನ್ನು ದೇವಾಲಯದ ಮುಖ್ಯ ದ್ವಾರದ ಬಳಿ ಎಳನೀರು ಮಾರಾಟಕ್ಕೆಂದು 2.25 ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿದೆ.
ಸಿದ್ಧತಾ ಸಭೆ : ಪರಿಷೆಗೆ ಲಕ್ಷಾಂತರ ಮಂದಿ ಆಗಮಿಸುವ ಕಾರಣ ಸೂಕ್ತ ಭದ್ರತೆ ಒದಗಿಸಲು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು, ತುರ್ತು ಆರೋಗ್ಯ ಸೇವೆ ನೀಡಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಹಾಗೂ ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸುವ ಕಾರಣ ಇಂದು ಸಭೆ ನಡೆಯಲಿದೆ.












Click it and Unblock the Notifications