ಏಪ್ರಿಲ್ 1ರಿಂದಲೇ ಮುಂಗಡ ಪಡಿತರ ವಿತರಿಸಿ: ಸಚಿವ ಗೋಪಾಲಯ್ಯ ಸೂಚನೆ
ಬೆಂಗಳೂರು, ಮಾರ್ಚ್ 27: ಕೇಂದ್ರ ಸರ್ಕಾರ ಘೋಷಿಸಿರುವ ಪಡಿತರ ಪ್ಯಾಕೇಜ್ ಹಾಗೂ ರಾಜ್ಯ ಸರ್ಕಾರದ ಎರಡು ತಿಂಗಳ ಮುಂಗಡ ಪಡಿತರ ವಿತರಣೆಯ ಅನುಷ್ಠಾನದ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಇಂದು ವಿಕಾಸಸೌಧದಲ್ಲಿ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ರಾಜ್ಯ ಸರ್ಕಾರ ಕೊಡುವ ಎರಡು ತಿಂಗಳ ಮುಂಗಡ ಪಡಿತರವನ್ನು ಏಪ್ರಿಲ್ 1ನೇ ತಾರೀಕಿನಿಂದ ಪ್ರಾರಂಭಿಸಿ ಏಪ್ರಿಲ್ 10ಕ್ಕೆ ಮುಕ್ತಾಯಗೊಳಿಸಬೇಕು. ಕಡ್ಡಾಯವಾಗಿ 1ನೇ ತಾರೀಕಿನಿಂದ ಎರಡು ತಿಂಗಳ ಮುಂಗಡ ಪಡಿತರ ವಿತರಣೆ ಕಾರ್ಯ ಪ್ರಾರಂಭವಾಗಬೇಕು. ಇದನ್ನು ನೀವು ಸವಾಲಾಗಿ ಸ್ವೀಕರಿಸಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಯಾವುದೇ ದೂರುಗಳು ಬರದ ರೀತಿಯಲ್ಲಿ ಕಾರ್ಯನಿರ್ವಹಿಸಿ. ಗ್ಯಾಸ್ ಸಿಲಿಂಡರುಗಳನ್ನು ಸಮರ್ಪಕವಾಗಿ ವಿತರಿಸಿ. ಈಗಾಗಲೇ ಕೇಂದ್ರ ಸರ್ಕಾರ ಮೂರು ತಿಂಗಳ ಎಲ್ಪಿಜಿ ಗ್ಯಾಸ್ ವಿತರಣೆಯನ್ನು ಘೋಷಿಸಿದೆ. ಈ ಸಂಬಂಧ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸಚಿವ ಕೆ ಗೋಪಾಲಯ್ಯ ಆದೇಶಿಸಿದ್ದಾರೆ.

ಪಡಿತರ ಅಂಗಡಿಗಳಲ್ಲಿ ಸ್ಥಳಾವಕಾಶದ ಕೊರತೆ ಇದ್ದರೆ ಪಕ್ಕದ ಶಾಲೆ, ಕಾಲೇಜುಗಳಲ್ಲಿ ಪಡಿತರ ವಿತರಿಸಿ. ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಪಡಿತರಗಳನ್ನು ಸರಬರಾಜು ಮಾಡಿ. ಏಪ್ರಿಲ್ 10ರ ಬಳಿಕ ಕೇಂದ್ರ ಸರ್ಕಾರ ಘೋಷಿಸಿರುವ ಪಡಿತರ ಪ್ಯಾಕೇಜ್ ವಿತರಿಸುವ ಕೆಲಸ ಆರಂಭವಾಗಲಿದೆ. ರಾಜ್ಯದ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಸಮರ್ಪಕವಾಗಿ ಪಡಿತರ ಆಹಾರ ಪೂರೈಸಿ ಎಂದು ಸಚಿವರು ಆದೇಶಿಸಿದ್ದಾರೆ.












Click it and Unblock the Notifications