Breaking: ಸದನದಲ್ಲಿ ಜೆಡಿಎಸ್ ಧರಣಿ: ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಬೆಂಗಳೂರು, ಸೆಪ್ಟಂಬರ್ 23: ಬಿಎಂಎಸ್ ಟ್ರಸ್ಟ್, ಜಮೀನು ಅಕ್ರಮ ತನಿಖೆ ನಡೆಸಲು ಆಗ್ರಹಿಸಿ ಸದನದಲ್ಲಿ ಜೆಡಿಎಸ್ ಧರಣಿ ಮುಂದುವರಿದ ಹಿನ್ನೆಲ್ಲೆ ಗದ್ದಲ, ಗಲಾಟೆ ವಾತಾವರಣ ನಿರ್ಮಾಣವಾಯಿತು. ಇದರ ಬೆನ್ನಲ್ಲೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಶುಕ್ರವಾರ ಎಂದಿನಂತೆ ವಿಧಾನಸಭೆ ಕಲಾಪಗಳು ಆರಂಭವಾಯಿತು. ಆರಂಭವಾಗುತ್ತಿದ್ದಂತೆ, ಬಿಎಂಎಸ್ ಟ್ರಸ್ಟ್ ಅಕ್ರಮ ಕುರಿತು ಗುರುವಾರ ಪ್ರಸ್ತಾಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ತನಿಖೆ ನಡೆಸುವಂತೆ ಪಟ್ಟು ಹಿಡಿದರು. ಜೆಡಿಎಸ್ ನಡೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ಸದಸ್ಯರು ಸಹ ಬೆಂಬಲಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಸದನದಲ್ಲಿ ಕೆಲ ಕಾಲ ಗದ್ದಲ, ಗಲಾಟೆ ಆರಂಭವಾಯಿತು. ಇದರಿಂದ ಪ್ರಶ್ನೋತ್ತರ ಅವಧಿಯ ಕಲಾಪ ಸಹ ನಡೆಯಲಿಲ್ಲ. ಇದು ಭ್ರಷ್ಟಾಚಾರ ಸರ್ಕಾರ ಎಂದು ವಿಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಅಲ್ಲದೇ ಉತ್ತನ್ನ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ವಿರುದ್ಧ 'ಪ್ರೈವೇಟ್ ಅಶ್ವತ್ಥ, ಪಬ್ಲಿಕ್ ನಾರಾಯಣ್' ಪೊಸ್ಟ್ರ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಸಂಧಾನ ಸಭೆ ವಿಫಲ
ಕಲಾಪ ನಡೆಯದೇ ಸದನದಲ್ಲಿ ಗಲಾಟೆ ಆರಂಭವಾದ ಹಿನ್ನೆಲೆಯಲ್ಲಿ ಸದನವನ್ನು ಕೆಲಕಾಲ ಮುಂದೂಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಜೆಡಿಎಸ್ ಸಂಧಾನ ಸಭೆ ನಡೆಯಿತು. ಅದರಲ್ಲಿ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಆದರೆ ಸಂಧಾನ ಸಭೆ ವಿಫಲವಾಯಿತು. ಈ ವೇಳೆ ಜೆಡಿಎಸ್ ನಾಯಕರು ಪುನಃ ಸದನದಲ್ಲಿ ಧರಣಿ ಮುಂದುವರಿಸಲು ನಿರ್ಧರಿಸಿದರು. ಅದರಂತೆ ವಿಧಾನಸಭೆಯು ಗದ್ದಲ, ಗಲಾಟೆಯು ಗೂಡಾಯಿತು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ
ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದಕ್ಕು ಮುನ್ನ ಪ್ರಸ್ತಾಪವಾದ ಮೀಸಲಾತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸರ್ಕಾರಕ್ಕೆ ನ್ಯಾ.ನಾಗಮೋಹನ್ ದಾಸ್ ಸಮಿತಿ ಮತ್ತು ಸುಭಾಷ್ ಅಡಿ ನೇತೃತ್ವದ ಸಮಿತಿ ವರದಿಗಳು ಸಲ್ಲಿಕೆ ಆಗಿವೆ. ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳುವ ಸಲುವಾಗಿ ಒಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಅವರು ಹೇಳಿದರು.
ಎಲ್ಲ ಪಕ್ಷದ ನಾಯಕರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರಕ್ಕೆ ಎಲ್ಲ ಸಮುದಾಯದಗಳ ಬಗ್ಗೆ ಸಹಾನುಭೂತಿ ಇದೆ. ಆಯಾ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗುವುದು. ಇದಕ್ಕೆ ನಾವು ಬದ್ಧವಾಗಿದ್ದೇವೆ. ಆದ್ದರಿಂದ ಕಳೆದ ಕೆಲವು ದಿನಗಳಿಂದ ಮೀಸಲಾತಿ ಪಟ್ಟು ಹಿಡಿದು ನಡೆಸುತ್ತಿರುವ ಪ್ರತಿಭಟನೆ ಕೈಬಿಡಬೇಕು ಎಂದು ಅವರು ಮನವಿ ಮಾಡಿದರು. ಇದನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.