ದೇವೇಗೌಡರಿಗೆ ಅವಮಾನ, ಮಂಗಳವಾರ ಜೆಡಿಎಸ್ ಪ್ರತಿಭಟನೆ
ಮಾಜಿ ಪ್ರಧಾನಿ ದೇವೇಗೌಡರನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಹೋಲಿಸಿ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಮಾಡಿದ ಟ್ವೀಟ್ ಖಂಡಿಸಿ ಜೆಡಿಎಸ್ ನಿಂದ ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಬೆಂಗಳೂರು, ಏಪ್ರಿಲ್ 17: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರುದ್ಧ ಏಪ್ರಿಲ್ 18ರ ಮಂಗಳವಾರ ಬೆಳಗ್ಗೆ 11.30ಕ್ಕೆ ಆನಂದರಾವ್ ವೃತ್ತದ ಮೌರ್ಯ ಹೋಟೆಲ್ ಎದುರು ಇರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಜೆಡಿಎಸ್ ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಹೋಲಿಕೆ ಮಾಡಿ, ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿರುವುದನ್ನು ಖಂಡಿಸಿ, ತಕ್ಷಣವೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.[ದೇವೇಗೌಡ ಬಗ್ಗೆ ಟ್ವೀಟ್ ಮಾಡಿದ ಒಮರ್, ಕೆರಳಿದ ಸಿಟಿ ರವಿ]

ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್, ಕೆ.ವಿ.ನಾರಾಯಣಸ್ವಾಮಿ, ಸಂಸದ ಕುಪೇಂದ್ರ ರೆಡ್ಡಿ, ಶಾಸಕರಾದ ಕೆ.ಗೋಪಾಲಯ್ಯ, ಟಿ.ಎ.ಶರವಣ, ಅಪ್ಪಾಜಿಗೌಡ, ಸಿ.ಆರ್.ಮನೋಹರ್, ರಮೇಶ್ ಬಾಬು ಹಾಗೂ ಪಕ್ಷದ ರಾಜ್ಯ ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಮೊಹಿದ್ ಅಲ್ತಾಫ್ ಮತ್ತಿತರರು ಭಾಗವಹಿಸಲಿದ್ದಾರೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಜತೆಗೆ ದೇವೇಗೌಡರನ್ನು ಹೋಲಿಸಿ ಅಬ್ದುಲ್ಲಾ ಮಾಡಿದ್ದ ಟ್ವೀಟ್ ಗೆ ಬಿಜೆಪಿಯ ಶಾಸಕ ಸಿಟಿ ರವಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.











Click it and Unblock the Notifications