'ರಾಜಕೀಯ ಗುರು' ಮಾತಿಗೆ ಬೆಲೆ, ಎಚ್ಡಿಡಿ ಅವರಲ್ಲಿ ಪ್ರಜ್ವಲ್ ಕ್ಷಮೆ
ಬೆಂಗಳೂರು, ಜುಲೈ 09: ಜೆಡಿಎಸ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಯುವ ಮುಖಂಡ ಪ್ರಜ್ವಲ್ ರೇವಣ್ಣ ಅವರು ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರಲ್ಲಿ ಕ್ಷಮೆಯಾಚಿಸಿದ್ದಾರೆ. 'ಮಗನಾಗಲಿ, ಮೊಮ್ಮಗನಾಗಲಿ ತಪ್ಪು ಮಾಡಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದು ದೇವೇಗೌಡರು ಹೇಳಿದ್ದರು.
ತನ್ನ ರಾಜಕೀಯ ಗುರು, ಚಿಕ್ಕಪ್ಪ ಎಚ್ ಡಿ ಕುಮಾರಸ್ವಾಮಿ ಅವರ ಜತೆ ಫೋನ್ ಕರೆ ಮಾಡಿ ಮಾತನಾಡಿದ ಬಳಿಕ, ಕ್ಷಮೆಯಾಚಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಅಲ್ಲದೆ, ಜೆಡಿಎಸ್ ನಿಂದ ಅಮಾನತಾಗಿರುವ ಶಾಸಕರು ನಾನಾ ರೀತಿಯಲ್ಲಿ ಜೆಡಿಎಸ್ ನಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ.
ಪಕ್ಷದ ಸಂಘಟನೆಗಾಗಿ ನಾನು ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಬಲ ತುಂಬುವ ಕೆಲಸ ಮಾಡುತ್ತಿದ್ದೇನೆ. ಇಂಥ ಸಂದರ್ಭದಲ್ಲಿ ನನ್ನನ್ನೇ ಟಾರ್ಗೆಟ್ ಮಾಡಿದಂತೆ ನಮ್ಮ ಮನೆಯವರೇ ಹೇಳಿಕೆ ನೀಡಿದರೆ ಹೇಗೆ ಸಹಿಸಲು ಸಾಧ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
'ಪಕ್ಷ ಕಟ್ಟಿ ಅಂದರೆ ಕಟ್ಟುತ್ತೇನೆ. ಇಲ್ಲ ಬಿಟ್ಟು ಬಿಡಿ ಅಂದ್ರೆ ನನ್ನಷ್ಟಕ್ಕೆ ಸುಮ್ಮನಾಗುತ್ತೇನೆ. ನಮ್ಮ ಕುಟುಂಬದಲ್ಲೇ ಗೊಂದಲ ಸೃಷ್ಟಿಸುವ ಕೆಲಸ ಬೇಡ. ನನಗೆ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವ ಆಸೆಯಿಲ್ಲ. ಪಕ್ಷವನ್ನು ಯಾರೇ ಮುನ್ನಡೆಸಿದರೂ ಅವರಿಗೆ ಹೆಗಲಿಗೆ ಹೆಗಲು ಕೊಡಲು ಸಿದ್ದನಿದ್ದೇನೆ. ಎಂದು ನಿಷ್ಠುರವಾಗಿಯೇ ಹೇಳಿದ್ದಾರೆ' ಎಂದು ತಿಳಿದು ಬಂದಿದೆ.
ಇದಾದ ಬಳಿಕ, ಪ್ರಜ್ವಲ್ ರೇವಣ್ಣ ಜತೆ ದೂರವಾಣಿ ಮುಖಾಂತರ ಮಾತನಾಡಿರುವ ಕುಮಾರಸ್ವಾಮಿ, ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಮಾಧ್ಯಮಗಳ ಮುಂದೆ ಬರಬೇಡ. ಏನೂ ಮಾತನಾಡಬೇಡ ಎಂದು ತಾಕೀತು ಮಾಡಿದ್ದಾರೆ ಎಂಬ ಸುದ್ದಿಯಿದೆ.
ಪ್ರಜ್ವಲ್ ಅವರು ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಕೊಟ್ಟು, ದೇವೇಗೌಡರಲ್ಲಿ ಕ್ಷಮೆಯಾಚಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಹುದ್ದೆ ಹೊಂದಿರುವ ಪ್ರಾಥಮಿಕ ಸದಸ್ಯ ಮಾತ್ರ ಆಗಿರುವ ಪ್ರಜ್ವಲ್ ವಿರುದ್ಧ ಶಿಸ್ತುಕ್ರಮ ಸದ್ಯಕ್ಕೆ ಅಗತ್ಯವಿಲ್ಲ ಎಂದು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ.












Click it and Unblock the Notifications