ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮಕ್ಕಳಲ್ಲಿ ಬಾಲಕಿಯರೇ ಹೆಚ್ಚು, ಕಳವಳ ವ್ಯಕ್ತಪಡಿಸಿದ ಜೆಡಿಎಸ್
ಕಾಣೆಯಾದವರಲ್ಲಿ ಬಾಲಕಿಯರ ಪ್ರಮಾಣವೆ ಹೆಚ್ಚಿದೆ. 69% ಬಾಲಕಿಯರು, 30.25% ಬಾಲಕರು ಕಾಣೆಯಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ.
ಬೆಂಗಳೂರು, ಫೆಬ್ರವರಿ. 24: ರಾಜ್ಯದಲ್ಲಿ ಮಕ್ಕಳು ಅಪಹರಣವಾಗುತ್ತಿರುವುದು ಮತ್ತು ಕಾಣೆಯಾಗುತ್ತಿರುವುದು ಹೆಚ್ಚಾಗುತ್ತಿದೆ ಎಂದು ಜೆಡಿಎಸ್ ಕಳವಳ ವ್ಯಕ್ತಪಡಿಸಿದೆ. ಕಾಣೆಯಾಗುತ್ತಿರುವ ಮಕ್ಕಳಲ್ಲಿ ಬಾಲಕಿಯರ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ಬೊಟ್ಟು ಮಾಡಿರುವ ಜಾತ್ಯಾತೀತ ಜನತಾದಳ, ಈ ರಾಜ್ಯ ಕಂಡ ಅತ್ಯಂತ ದುರ್ಬಲ ಗೃಹ ಸಚಿವ ಆರಗ ಜ್ಞಾನೇಂದ್ರ ಎಂದು ಕಿಡಿಕಾರಿದೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, "ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮತ್ತು ಅಪಹರಣವಾಗುತ್ತಿರುವ ಮಕ್ಕಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ. ನಮ್ಮ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಂಡಿರುವ ಕುಸಿತದ ಸಂಕೇತವಿದಲ್ಲವೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ..?" ಎಂದು ಆಕ್ರೋಶ ಹೊರಹಾಕಿದೆ.

"2018 ರಿಂದ 2022ರ ಅಂತ್ಯದವರೆಗೆ 9,223 ಮಕ್ಕಳು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಗೃಹ ಸಚಿವರೇ ವಿಧಾನ ಪರಿಷತ್ತಿಗೆ ನೀಡಿರುವ ಮಾಹಿತಿಯಲ್ಲಿ ಬಹಿರಂಗಪಡಿಸಿದ್ದಾರೆ. ನಾಪತ್ತು ತಡೆಗೆ ಹಲವು ಕ್ರಮಗಳಿದ್ದರೂ, ಈ ಪ್ರಮಾಣದಲ್ಲಿ ಮಕ್ಕಳು ನಾಪತ್ತೆಯಾಗಿರುವುದು ನಮ್ಮ ಇಡೀ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿ" ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಮಾಹಿತಿಯನ್ನೇ ಹೇಳಿ ಅವರ ವಿರುದ್ಧ ಜಾತ್ಯಾತೀತ ಜನತಾದಳ ಕಿಡಿ ಕಾರಿದೆ.
ಕಾಣೆಯಾದವರಲ್ಲಿ ಬಾಲಕಿಯರ ಪ್ರಮಾಣವೆ ಹೆಚ್ಚಿದೆ. 69% ಬಾಲಕಿಯರು, 30.25% ಬಾಲಕರು ಕಾಣೆಯಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಕಾಣೆಯಾದವರಲ್ಲಿ ಇನ್ನೂ 11.5 ರಷ್ಟು ಪ್ರಮಾಣದ ಮಕ್ಕಳು ಪತ್ತೆಯಾಗಿಲ್ಲ. ಈ ಪ್ರಕರಣಗಳ ಸ್ಥಿತಿ-ಗತಿ ಏನು? ಕಳ್ಳಸಾಗಣೆ ತಡೆ ಘಟಕಗಳು ಮಂಪರಿನಲ್ಲಿವೆಯೆ?4/5
— Janata Dal Secular (@JanataDal_S) February 24, 2023
"ಆರಗ ಜ್ಞಾನೇಂದ್ರ ಅವರೆ, ನೀವು ಈ ರಾಜ್ಯ ಕಂಡ ಅತ್ಯಂತ ದುರ್ಬಲ ಗೃಹ ಸಚಿವ ಎಂಬ ಕುಖ್ಯಾತಿಗೆ ಸಾಕ್ಷಿಯಾಗಿ ಈ ಬೆಳವಣಿಗೆಯು ಗಣನೆಗೆ ಬರುತ್ತದೆ. ಇದೇ ವರ್ಷದ ಜನವರಿ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 249 ಮಕ್ಕಳು ಕಾಣೆಯಾಗಿದ್ದಾರೆ. ತಿಂಗಳೊಂದರಲ್ಲೆ ಈ ಮಟ್ಟಿಗೆ ಮಕ್ಕಳು ಕಾಣೆಯಾಗುತ್ತಿರುವುದಕ್ಕೆ ಗೃಹ ಇಲಾಖೆಯ ನಿಷ್ಕ್ರಿಯತೆಯೇ ಕಾರಣ" ಎಂದು ಜೆಡಿಎಸ್ ಪಕ್ಷ ಆರೋಪಿಸಿದೆ.

ಮುಂದುವರಿದು, "ಕಾಣೆಯಾದವರಲ್ಲಿ ಬಾಲಕಿಯರ ಪ್ರಮಾಣವೆ ಹೆಚ್ಚಿದೆ. 69% ಬಾಲಕಿಯರು, 30.25% ಬಾಲಕರು ಕಾಣೆಯಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಕಾಣೆಯಾದವರಲ್ಲಿ ಇನ್ನೂ 11.5 ರಷ್ಟು ಪ್ರಮಾಣದ ಮಕ್ಕಳು ಪತ್ತೆಯಾಗಿಲ್ಲ. ಈ ಪ್ರಕರಣಗಳ ಸ್ಥಿತಿ - ಗತಿ ಏನು..? ಕಳ್ಳಸಾಗಣೆ ತಡೆ ಘಟಕಗಳು ಮಂಪರಿನಲ್ಲಿವೆಯೆ..?" ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪ್ರಶ್ನಿಸಿದೆ.
"ರಾಜಧಾನಿ ಬೆಂಗಳೂರಿನಲ್ಲಿ 4,180 ಮಕ್ಕಳು ನಾಪತ್ತೆಯಾಗಿದ್ದಾರೆ ಇಲ್ಲವೇ ಅಪಹರಣಕ್ಕೆ ಒಳಗಾಗಿದ್ದಾರೆ. ಇದು ಒಟ್ಟು ಪ್ರಕರಣಗಳ 45.3 ರಷ್ಟಾಗುತ್ತದೆ. ವಿಶ್ವದ ಸಿಲಿಕಾನ್ ನಗರದಲ್ಲೇ ಈ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ವಿಷಯ. ರಾಜ್ಯ ಬಿಜೆಪಿಗೆ ಸರ್ಕಾರದಲ್ಲಿ ಆಡಳಿತದ ಮೇಲೆ ಹಿಡಿತವಿಲ್ಲದಿರುವುದು ಎದ್ದು ಕಾಣುತ್ತಿದೆ." ಎಂದು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ.












Click it and Unblock the Notifications