ರಾಜ್ಯ ಪ್ರವಾಸ ಮಾಡುವಂತೆ ಜೆಡಿಎಸ್ ನಾಯಕರಿಗೆ ದೇವೇಗೌಡ ಸೂಚನೆ
Recommended Video
ಬೆಂಗಳೂರು, ಜುಲೈ 31: ರಾಜ್ಯದಾದ್ಯಂತ ಪ್ರವಾಸ ನಡೆಸುವ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವಂತೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.
ಜೆಪಿ ಭವನದಲ್ಲಿ ಬುಧವಾರ ಪಕ್ಷದ ಮುಖಂಡರ ಜತೆ ಅವರು ಸಭೆ ನಡೆಸಿದರು. ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಕೆ, ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವುದು, ಉಪ ಚುನಾವಣೆಯ ಸಿದ್ಧತೆ, ಜೆಡಿಎಸ್ ಸಮಾವೇಶ ಆಯೋಜನೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ದೇವೇಗೌಡ ಅವರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆ ಇಂದು ಮಾಡಿದ್ದೇವೆ. ಪಕ್ಷ ಬಿಟ್ಟು ಹೊರಹೋಗಿರುವ ಮೂರು ಜನ ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದೇವೆ ಎಂದು ತಿಳಿಸಿದರು.

ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯಾವುದೇ ಹೊಂದಾಣಿಕೆ ಬೇಡಾ ಎಂದು ಅನೇಕ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವು ರಾಜ್ಯ ಮಟ್ಟದಲ್ಲಿ ಒಂದಾಗಿ ಅಧಿಕಾರ ಅನುಭವಿಸಿದ್ದೀರಿ. ಆದರೆ ಸ್ಥಳೀಯ ಮಟ್ಟದಲ್ಲಿ ಆ ರೀತಿ ಇಲ್ಲ. ಹೀಗಾಗಿ ಹೊಂದಾಣಿಕೆ ಬೇಡಾ ಅಂತಾ ಎಲ್ಲರ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು ಎಂದು ಹೇಳಿದರು.
ಈ ಹಿಂದಿನ ಸ್ಪೀಕರ್ ಅನರ್ಹ ಮಾಡಿರುವ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನ ತೀರ್ಮಾನ ನೋಡಿಕೊಂಡು ಮುಂದಿನ ಹೆಜ್ಜೆ ಇರಿಸಲಿದ್ದೇವೆ. ಈ ಬಗ್ಗೆ ನಿಮ್ಮ ತೀರ್ಮಾನವೇ ಅಂತಿಮ ಎಂದು ನಮ್ಮ ಸದಸ್ಯರು ತಿಳಿಸಿದ್ದಾರೆ ಎಂದರು.
ಚುನಾವಣೆ ಮೂರು ತಿಂಗಳಿಗೆ ಬರುತ್ತದೆಯೋ, ಆರು ತಿಂಗಳಿಗೆ ಬರುತ್ತದೆಯೋ ಗೊತ್ತಿಲ್ಲ. ಆದರೆ ನಾವು ಮಾತ್ರ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯ ಪ್ರವಾಸ ಮಾಡಲು ಎಲ್ಲ ನಾಯಕರಿಗೆ ಸೂಚನೆ ಕೊಟ್ಟಿದ್ದೇನೆ. ಜೊತೆಗೆ ಕುಮಾರಸ್ವಾಮಿ ಅವರ ಹದಿನಾಲ್ಕು ತಿಂಗಳ ಸಾಧನೆಗಳನ್ನು ಮನೆಮನೆಗೆ ಮುಟ್ಟಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ಆಗಸ್ಟ್ ಏಳನೇ ತಾರೀಕು ಬೆಂಗಳೂರಿನಲ್ಲಿ ಜೆಡಿಎಸ್ ಸಮಾವೇಶ ನಡೆಸುತ್ತೇವೆ. ಅಲ್ಲಿ ನೂತನ ಜಿಲ್ಲಾ ಅಧ್ಯಕ್ಷರುಗಳನ್ನು ನೇಮಕ ಮಾಡುತ್ತೇವೆ. ನಿಷ್ಕ್ರಿಯಗೊಂಡಿರುವ ಇತರ ಘಟಕಗಳನ್ನೂ ಪುನಶ್ಚೇತನ ಮಾಡುತ್ತೇವೆ. ಹಾಗೆಯೇ ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಜೆಡಿಎಸ್ ಸಕ್ರಿಯಗೊಳ್ಳಲಿದೆ ಎಂದು ತಿಳಿಸಿದರು.
ಗೌರವಾನ್ವಿತ ಹೊಸ ಸ್ಪೀಕರ್ಗೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದೆ ಅವರು ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಪಕ್ಷಾತೀತವಾಗಿ ಅವರು ಕೆಲಸ ಮಾಡುತ್ತಾರೆ ಎಂಬ ಭರವಸೆ ಇದೆ. ಮತ್ತೊಮ್ಮೆ ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.












Click it and Unblock the Notifications