ಬಿಜೆಪಿ-ಜೆಡಿಎಸ್; ಉಪ ಚುನಾವಣೆಯಲ್ಲಿ ವಿರೋಧ, ನಗರಸಭೆಯಲ್ಲಿ ಮೈತ್ರಿ!
ಬೆಂಗಳೂರು, ಅಕ್ಟೋಬರ್ 26; ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವಿನ ಮಾತಿನ ಎಟು ಎದಿರೇಟು ಮುಂದುವರೆದಿದೆ. ಅತ್ತ ದೊಡ್ಡಬಳ್ಳಾಪುರ ನಗರಸಭೆಯನ್ನು ಬಿಜೆಪಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ.
ಮಂಗಳವಾರ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಬಿಜೆಪಿಯ ಎಸ್. ಸುಧಾರಾಣಿ ಅಧ್ಯಕ್ಷರಾಗಿ, ಜೆಡಿಎಸ್ನ ಫರ್ಹಾನಾ ತಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ಗೆ ಅಧಿಕಾರ ತಪ್ಪಿಸಿದವು. ಕಂದಾಯ ಸಚಿವ ಆರ್. ಅಶೋಕ ಜೆಡಿಎಸ್ ನಾಯಕರ ಜೊತೆ ಮಾತಕತೆ ನಡೆಸಿ ಮೈತ್ರಿಗೆ ಒಪ್ಪಿಸಿದ್ದರು. ಜೆಡಿಎಸ್ಗೆ ಉಪಾಧ್ಯಕ್ಷ ಪಟ್ಟ ನೀಡಲಾಯಿತು. ಇಬ್ಬರು ಪಕ್ಷೇತರರು, ಸಂಸದರ ಮತಗಳಿಂದ ಬಿಜೆಪಿಗೆ ಅಧ್ಯಕ್ಷ ಪಟ್ಟ ಸಿಕ್ಕಿತು.
ಈ ಕುರಿತು ಫೇಸ್ಬುಕ್ ಪೋಸ್ಟ್ ಹಾಕಿರುವ ಆರ್. ಅಶೋಕ, 'ಫಲಿತಾಂಶದ ದಿನದಿಂದಲೂ ದೊಡ್ಡಬಳ್ಳಾಪುರ ನಗರಸಭೆಯನ್ನು ಬಿಜೆಪಿ ತನ್ನ ವಶ ಮಾಡಿಕೊಳ್ಳಲಿದೆ ಎಂಬುದನ್ನು ಆತ್ಮವಿಶ್ವಾಸದಿಂದ ಹೇಳುತ್ತಾ ಬಂದಿದ್ದೆ. ಅದರಂತೆ ಕೊನೆಗೂ ಜೆಡಿಎಸ್ ಪಕ್ಷ ಹಾಗೂ ಸ್ವತಂತ್ರವಾಗಿ ಆಯ್ಕೆಯಾದವರನ್ನು ವಿಶ್ವಾಸಕ್ಕೆ ತೆಗದುಕೊಂಡು ಅವರ ಮನವೊಲಿಸಿ, ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ' ಎಂದು ಹೇಳಿದ್ದಾರೆ.

'ಸತತ ಪ್ರಯತ್ನದ ಫಲವಾಗಿ ಇಂದು ನಗರಸಭೆಯ ನೂತನ ಅಧ್ಯಕ್ಷರಾಗಿ ಸುಧಾ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ನ ಫರ್ಹಾನ್ ತಾಜ್ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಬರುವ ದಿನಗಳಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಆಗಲಿ ಎಂದು ಹಾರೈಸುತ್ತೇನೆ' ಎಂದು ಆರ್. ಅಶೋಕ ಪೋಸ್ಟ್ ಹಾಕಿದ್ದಾರೆ.
ಮ್ಯಾಜಿಕ್ ನಂಬರ್ ಲೆಕ್ಕಾಚಾರ; ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆದ್ದಿತ್ತು. ಅಧ್ಯಕ್ಷ ಸ್ಥಾನ ಪಡೆಯಲು ಬೇಕಿದ್ದ ಮ್ಯಾಜಿಕ್ ನಂಬರ್ 17 ಆಗಿತ್ತು. ಬಿಜೆಪಿ 12+ 2 ಪಕ್ಷೇತರ + 5 ಜೆಡಿಎಸ್ ಮತ್ತು ಒಬ್ಬರು ಸಂಸದರ ಮತಗಳಿಂದ ಬಿಜೆಪಿಗೆ ಅಧ್ಯಕ್ಷ ಪಟ್ಟ ಒಲಿಯಿತು.
ಅಧಿಕಾರ ಹಂಚಿಕೆ; ದೊಡ್ಡಬಳ್ಳಾಪುರ ನಗರ ಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಗೆ ಮೀಸಲಾಗಿತ್ತು. ಬಿಜೆಪಿ ಮತ್ತು ಜೆಡಿಎಸ್ ಅಧಿಕಾರ ಹಂಚಿಕೆ ಮಾಡಿಕೊಂಡಿವೆ. ಮೊದಲ ಎರಡೂ ವರೆ ವರ್ಷ ಬಿಜೆಪಿಗೆ ಅಧ್ಯಕ್ಷ ಸ್ಥಾನ, ಜೆಡಿಎಸ್ಗೆ ಉಪಾಧ್ಯಕ್ಷ ಸ್ಥಾನ ಎಂದು ಒಪ್ಪಂದವಾಗಿದೆ.
ಅಧಿಕಾರ ಹಂಚಿಕೆ, ಜೆಡಿಎಸ್ ಜೊತೆಗಿನ ಮೈತ್ರಿ ಎಲ್ಲವೂ ಸುಸೂತ್ರವಾಗಿ ಸಾಗಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರ್. ಅಶೋಕ ದೊಡ್ಡಬಳ್ಳಾಪುರದಲ್ಲಿ ಬೀಡು ಬಿಟ್ಟಿದ್ದರು.
31 ಸದಸ್ಯ ಬಲದ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 9, ಜೆಡಿಎಸ್ 7, 3 ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು. ಅತಂತ್ರ ಫಲಿತಾಂಶ ಬಂದ ಹಿನ್ನಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.
ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ರಜನ ಎಂ. ಸುಬ್ರಮಣಿ ನಾಮಪತ್ರ ಸಲ್ಲಿಸಿದ್ದರು. 11 ಮತಗಳನ್ನು ಪಡೆದ ಅವರು 11 ಮತಗಳ ಅಂತರದಿಂದ ಬಿಜೆಪಿಯ ಎಸ್. ಸುಧಾರಾಣಿ ವಿರುದ್ಧ ಸೋಲು ಕಂಡರು.
ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಅಕ್ಟೋಬರ್ 30ರಂದು ನಡೆಯಲಿದೆ. ಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಮಲ್ಲಯುದ್ಧವೇ ನಡೆಯುತ್ತಿದೆ. ಮತ್ತೊಂದು ಕಡೆ ನಗರಸಭೆ ಅಧಿಕಾರ ಹಿಡಿಯಲು ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿದೆ.












Click it and Unblock the Notifications