ಜಯಾ ವಿರುದ್ಧ ಆರೋಪ ಸಾಬೀತು : ಮುಂದೇನಾಗಲಿದೆ?
ಬೆಂಗಳೂರು, ಸೆ. 27 : ಪರಪ್ಪನ ಅಗ್ರಹಾರದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕಲ್ ಡಿ ಕನ್ಹಾ ಅವರು ಶನಿವಾರ ಮಧ್ಯಾಹ್ನ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಕುಮಾರಿ ಜೆ ಜಯಲಲಿತಾ ಅಪರಾಧಿ ಎಂದು ಐತಿಹಾಸಿಕ ತೀರ್ಪು ನೀಡಿದ್ದಾರೆ. ಹಾಗಾದರೆ ಮುಂದೇನಾಗಲಿದೆ?
ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತ್ತು ಜಯಲಲಿತಾ ಅವರ ರಾಜಕೀಯ ಜೀವನದ ದೃಷ್ಟಿಯಿಂದ ಈ ತೀರ್ಪು ಭಾರೀ ಪ್ರಾಮುಖ್ಯತೆ ಪಡೆಯಲಿದೆ. 66 ವರ್ಷದ 'ಪುರಚ್ಚಿ ತಲೈವಿ' 66 ಕೋಟಿ 66 ಲಕ್ಷ ರು. ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿರುವುದು ಎಐಎಡಿಎಂಕೆ ಪಕ್ಷಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಭಾರೀ ಹೊಡೆತ ನೀಡಿದೆ.

ಅವರ ಅಪರಾಧವೇನೋ ಸಾಬೀತಾಗಿದೆ, ಆದರೆ ಮುಂದೇನಾಗಲಿದೆ? ಎಷ್ಟು ವರ್ಷ ಜೈಲು ಶಿಕ್ಷೆಯಾಗಲಿದೆ? ಜಯಲಲಿತಾ ಜೈಲು ಪಾಲಾದರೆ ಯಾರು ಪಕ್ಷವನ್ನು ಮುನ್ನಡೆಸಲಿದ್ದಾರೆ? ಯಾರು ಮುಖ್ಯಮಂತ್ರಿ ಸ್ಥಾನಕ್ಕೆ ಏರಲಿದ್ದಾರೆ? ಯಾವ ರಾಜ್ಯದ ಜೈಲಿಗೆ ಜಯಲಲಿತಾ ಸೇರಲಿದ್ದಾರೆ? ಮುಂತಾದ ಪ್ರಶ್ನೆಗಳು ಉದ್ಭವವಾಗಿವೆ.
* ಜೈಲು ಶಿಕ್ಷೆ 3 ವರ್ಷಕ್ಕಿಂತ ಕಡಿಮೆ ನೀಡಿದರೆ, ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಆದರೆ, 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಪ್ರಕಟವಾದರೆ ಕೂಡಲೆ ಅವರನ್ನು ಬಂಧಿಸಬೇಕಾಗುತ್ತದೆ.
* ಅಪರಾಧ ಸಾಬೀತಾಗಿರುವುದರಿಂದ ಜಯಲಲಿತಾ ಅವರು ಇನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವಹಾಗಿಲ್ಲ. ಹಾಗಾಗಿ, ತಾತ್ಕಾಲಿಕವಾಗಿ ಪರ್ಯಾಯ ನಾಯಕನನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕೂರಿಸಬೇಕಾಗುತ್ತದೆ.
* ಶಿಕ್ಷೆಗೆ ಹೈಕೋರ್ಟಿನಿಂದ ತಡೆ ತಂದರೆ ಮಾತ್ರ ಜಯಲಲಿತಾ ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ಅನರ್ಹಗೊಳ್ಳುತ್ತಾರೆ.
* ಕಳೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಡಿಎಂಕೆ ಪಕ್ಷ ಈ ಬೆಳವಣಿಗೆಯಿಂದ ಸಹಜವಾಗಿ ಉತ್ತೇಜಿತಗೊಂಡಿದ್ದು, ಇದರ ಲಾಭ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಡೆಯಲು ಪ್ರಯತ್ನ ನಡೆಸಲಿದೆ.












Click it and Unblock the Notifications