ಅಯ್ಯಪ್ಪ ದರ್ಶನ ಮಾಡಿ ಹರಕೆ ಪೂರೈಸಿದ ಜನಾರ್ದನ ರೆಡ್ಡಿ
ಬೆಂಗಳೂರು, ಏ.17 : ಸುಮಾರು ಮೂರುವರೆ ವರ್ಷಗಳ ಜೈಲುವಾಸದ ನಂತರ ಜ.23ರಂದು ಜಾಮೀನಿನ ಮೇಲೆ ಹೊರಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು, ಬಳ್ಳಾರಿ ಸಂಸದ ಶ್ರೀರಾಮುಲು, ಕಂಪ್ಲಿ ಶಾಸಕ ಸುರೇಶ್ ಬಾಬು ಮತ್ತಿತರ ಆತ್ಮೀಯರೊಂದಿಗೆ ಗುರುವಾರ ಶಬರಿಮಲೆ ಯಾತ್ರೆ ಕೈಗೊಂಡರು.
ಬೆಂಗಳೂರಿನ ರವೀಂದ್ರ ಟ್ಯಾಗೋರ್ ನಗರದಲ್ಲಿರುವ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಗುರುವಾರ ಬೆಳಿಗ್ಗೆ ವಿಶೇಷ ಪೂಜೆ ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮಗಳನ್ನು ಪೂರೈಸಿದ ನಂತರ ಸಾಯಂಕಾಲ ವಿಶೇಷ ವಿಮಾನದ ಮೂಲಕ ಮೂವತ್ತಕ್ಕೂ ಹೆಚ್ಚು ಭಕ್ತರು ಕೇರಳದ ಕೊಚ್ಚಿಗೆ ಪ್ರಯಾಣ ಬೆಳೆಸಿದರು. [ಜೈಲಿನಿಂದ ಬೇಲ್ ತನಕ : ರೆಡ್ಡಿ ಟೈಮ್ ಲೈನ್]

ಜನಾರ್ದನ ರೆಡ್ಡಿ ಜೈಲಿಂದ ಬಿಡುಗಡೆಯಾದರೆ ಅಯ್ಯಪ್ಪನ ಭೇಟಿಗೆ ಬರುವುದಾಗಿ ಹರಕೆ ಹೊತ್ತಿದ್ದ ಸಂಸದ ಬಿ. ಶ್ರೀರಾಮುಲು ಅವರು ಮಣಿಕಂಠನ ಮಾಲೆ ಧರಿಸಿದ್ದರು. ಬೆಲೇಕೇರಿ ಪ್ರಕರಣದಲ್ಲಿ ಜಾಮೀನು ಪಡೆದಿರುವ ಟಿಎಚ್ ಸುರೇಶ್ ಬಾಬು ಮತ್ತು ಜನಾರ್ದನ ರೆಡ್ಡಿ ಮತ್ತಿತರೊಂದಿಗೆ ಹದಿನೆಂಟು ಮೆಟ್ಟಿಲು ಏರಿ ಇರುಮುಡಿ ಹೊತ್ತಿದ್ದ ಶ್ರೀರಾಮುಲು ಹರಕೆ ಸಲ್ಲಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ಆಂಧ್ರದಲ್ಲಿರುವ ಚಂಚಲಗೂಡ ಮತ್ತು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂರುವರೆ ವರ್ಷ ಕಳೆದು ಹೊರಬಂದಿರುವ ಜನಾರ್ದನ ರೆಡ್ಡಿ ಅವರು, ಮಹಾವಿಪ್ಪತ್ತು ಬಂದೊದಗಿದಾಗ, ಅವನ್ನು ನಾಶ ಮಾಡಿ ಧರ್ಮ ಪುನರ್ಸ್ಥಾಪಿಸಲು ಮಾನವ ದೇಹ ಧರಿಸಿ ಬಂದೇ ಬರುತ್ತಾನೆ ಎಂದು ಭಾವುಕರಾದರು. [ಸುರೇಶ್ ಬಾಬುಗೆ ಜಾಮೀನು]

"ನಾನೂ ಕೂಡ ಅಯ್ಯಪ್ಪಸ್ವಾಮಿಯನ್ನು ನಂಬಿದ್ದೇನೆ. ಶ್ರೀರಾಮಸೂಕ್ತಿಯಲ್ಲಿ ಹೇಳಿರುವಂತೆ 'ಪ್ರವಾಹದಿಂದ ಒಯ್ಯಲ್ಪಟ್ಟವನಂತೆ ನಿನ್ನ ಕರ್ಮವನ್ನು ನೀನು ಮಾಡಿದರೆ ಅದು ನಿನ್ನನ್ನು ಬಂಧಿಸುವುದಿಲ್ಲ. ಹೊರಗೆ ನೀನು ಯಾವ ಕೆಲಸವನ್ನೇ ಮಾಡುತ್ತಿರು, ನಿನ್ನ ಮನಸ್ಸು ಹಾಗೂ ಚಾರಿತ್ರ್ಯ ಶುದ್ಧವಾಗಿರಲಿ' ಎಂದು ಹೇಳಿರುವಂತೆ ಹೃದಯಕಮಲದಲ್ಲಿರುವ ಆತ್ಮವನ್ನು ಧ್ಯಾನಿಸುತ್ತಿರುತ್ತೇನೆ" ಎಂದು ನುಡಿದರು.

ಶ್ರೀರಾಮುಲು ಅವರು, "ಕಳೆದ ವರ್ಷ ಶಬರಿಮಲೆಗೆ ಹೋದಾಗ ಹರಕೆ ಹೊತ್ತಿದ್ದೆ. ಇಂದು ಭಗವಂತನ ಕೃಪೆಯಿಂದ ಈಡೇರಿದೆ. ಒಂದು ರೀತಿ ಧನ್ಯತಾಭಾವ ಮೂಡಿದೆ" ಎಂದರು. ಗುರುವಾರ ರಾತ್ರಿ ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿಯೇ ವಾಸ್ತವ್ಯ ಮಾಡಿದ್ದು, ಪ್ರಾತಃಕಾಲದಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಶುಕ್ರವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪಿದ್ದಾರೆ.












Click it and Unblock the Notifications