18 ಕೋಟಿ ರುಪಾಯಿ ಚಿನ್ನ ದಾನ ಮಾಡಿದನಂತೆ ರೆಡ್ಡಿ ಆಪ್ತ ಖಾನ್
ಬೆಂಗಳೂರು, ನವೆಂಬರ್ 14 : 600 ಕೋಟಿ ರುಪಾಯಿಗಳ ಆಂಬಿಡೆಂಟ್ ಹೂಡಿಕೆ ಹಗರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರೂ ಒಂದು ಚಿನ್ನದ ಗಟ್ಟಿ ಪ್ರಕರಣ ಜತೆಯಾಗಿರುವುದು ಈಗಾಗಲೇ ಜಾಹೀರಾಗಿದೆ. ಇದೀಗ ರೆಡ್ಡಿ ಸಹಾಯಕ ಕೆ.ಮೆಹ್ ಫೂಜ್ ಅಲಿ ಖಾನ್ ತಾನು ಆಂಬಿಡೆಂಟ್ ನಿಂದ 18 ಕೋಟಿ ರುಪಾಯಿ ಪಡೆದಿದ್ದು ನಿಜ ಎಂದು ಒಪ್ಪಿಕೊಂಡಾಗಿದೆ.
ಅಂದರೆ, ಅಲ್ಲಿಗೆ ಇನ್ನೇನು ಕೇಸು ಮುಗಿಯಿತಲ್ಲ, ಅಂದುಕೊಳ್ಳುವಂತಿಲ್ಲ. ಏಕೆಂದರೆ ಈ ಮೆಹ್ ಫೂಜ್ ಅಲಿ ಖಾನ್ ಆಂಬಿಡೆಂಟ್ ನ ಕಾರ್ಯನಿರ್ವಾಹಕ ನಿರ್ದೇಶಕ ಸೈಯದ್ ಅಹ್ಮದ್ ಫರೀದ್ ನಿಂದ ಕೋಟಿಗಟ್ಟಲೆ ಹಣ ಪಡೆದಿದ್ದು, ಕುಟುಂಬದಿಂದ ಪುಣ್ಯಕ್ಷೇತ್ರ ದರ್ಶನ ಮಾಡುವ ವೇಳೆ ವಿವಿಧ ಕ್ಷೇತ್ರಗಳಲ್ಲಿ ಚಿನ್ನವನ್ನು ದಾನ ಮಾಡುವ ಸಲುವಾಗಿ ಎಂದು ಹೇಳಿದ್ದಾನೆ.
ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು
ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಿರುವ ಖಾನ್, ಆಂಬಿಡೆಂಟ್ ಜತೆಗಿನ ವ್ಯವಹಾರ ಸಂಪೂರ್ಣ ವಯಕ್ತಿಕವಾದದ್ದು. ಫರೀದ್ ನಿಂದ ಪಡೆದುಕೊಂಡ ಸಂಪೂರ್ಣ ಹಣವನ್ನು ವಾಪಸ್ ನೀಡುವ ಸಲುವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾನೆ.
ದೇಶದಾದ್ಯಂತ ಇರುವ ನಾನಾ ಪುಣ್ಯ ಕ್ಷೇತ್ರಗಳಲ್ಲಿ ಚಿನ್ನ ದಾನ
ಇಡೀ ದೇಶದಾದ್ಯಂತ ಇರುವ ನಾನಾ ಪುಣ್ಯ ಕ್ಷೇತ್ರಗಳಿಗೆ ತೆರಳಿ ಚಿನ್ನ ದಾನ ಮಾಡಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಈ ಹೇಳಿಕೆ ಮೂಲಕ ಸಿಸಿಬಿ ವಶದಲ್ಲಿರುವ ಜನಾರ್ದನ ರೆಡ್ಡಿಗೆ ನಿರಾಳ ಆದಂತಾಗಿದೆ. 2007ರಲ್ಲಿ ಜನಾರ್ದನ ರೆಡ್ಡಿ ಬ್ರಹ್ಮಣಿ ಸ್ಟೀಲ್ಸ್ ಆರಂಭಿಸುವ ಮುಂಚಿನಿಂದ ಖಾನ್ ಜತೆಗೆ ಇದ್ದು, ಓಬಳಾಪುರಂ ಮೈನಿಂಗ್ ಹಗರಣದಲ್ಲಿ ಆತ ಜೈಲು ಸೇರಿದ್ದ. ಸಿಸಿಬಿಯಿಂದ ವಿಚಾರಣೆಗಾಗಿ ರೆಡ್ಡಿಗೆ ನೋಟಿಸ್ ನೀಡಿದ ಮೇಲೆ, ಶನಿವಾರ ರೆಡ್ಡಿ ಜತೆಗೆ ಖಾನ್ ಕೂಡ ಬಂದಿದ್ದಾನೆ.
2011ರಿಂದ ಕಷ್ಟ ಎದುರಾಗುತ್ತಿತ್ತು
ತನ್ನ ಅಫಿಡವಿಟ್ ನಲ್ಲಿ ಮೆಹ್ ಫೂಜ್ ಅಲಿ ಖಾನ್, ನನ್ನ ಕುಟುಂಬದವರು ಹಾಗೂ ನಾನು 2011ರಿಂದ ಬಹಳ ಕಷ್ಟ ಎದುರಿಸುತ್ತಿದ್ದೆವು. ನಮಗೆ ದೇವರ ಮೇಲೆ ಅಪಾರ ಭಕ್ತಿ. ದಾನ ಮಾಡುವುದರಿಂದ ಮಾತ್ರ ದೇವರ ಆಶೀರ್ವಾದ ಪಡೆಯಲು ಸಾಧ್ಯ ಎಂದು ನಂಬುತ್ತೇವೆ. ಆದ್ದರಿಂದ ನಮ್ಮೆಲ್ಲ ಕಷ್ಟ ನಿವಾರಣೆಯಾದರೆ ದೇವರ ಹೆಸರಲ್ಲಿ ಚಿನ್ನ ದಾನ ಮಾಡುವುದಾಗಿ ಹರಕೆ ಹೊತ್ತುಕೊಂಡೆವು ಎಂದಿದ್ದಾನೆ.
ಆಂಬಿಡೆಂಟ್ ಕಂಪನಿಯಿಂದ ಹದಿನೆಂಟು ಕೋಟಿ ಸಾಲ ಕೊಡಿಸಿದರು
ಆ ನಂತರ ನಾನು ಹಾಗೂ ನನ್ನ ಕುಟುಂಬದವರು ಒಂದೊಂದಾಗಿ ಸಮಸ್ಯೆಗಳಿಂದ ಆಚೆ ಬಂದೆವು. ಆ ಮೇಲೆ ನೀಡಿದ ಮಾತಿನಂತೆ ದಾನ ಮಾಡುವ ಸಲುವಾಗಿ ಚಿನ್ನವನ್ನು ಒಟ್ಟುಗೂಡಿಸುತ್ತಾ ಬಂದೆ. ನನ್ನ ಉದ್ದೇಶವನ್ನು ಫರೀದ್ ಮೆಚ್ಚಿಕೊಂಡರು. ಚಿನ್ನ ಖರೀದಿಗೆ ಹಣ ನೀಡುವುದಾಗಿ ಹೇಳಿದರು. ಮಾರ್ಚ್ ನಲ್ಲಿ ನನ್ನ ಬಗ್ಗೆ ಎಲ್ಲ ವಿವರ ತಿಳಿದುಕೊಂಡು, ಅವರ ಆಂಬಿಡೆಂಟ್ ಕಂಪನಿಯಿಂದ ಹದಿನೆಂಟು ಕೋಟಿ ಸಾಲ ಪಡೆಯಲು ಸಹಾಯ ಮಾಡಿದರು ಎಂದು ಖಾನ್ ತಿಳಿಸಿದ್ದಾನೆ.
ದುಡ್ಡು ಹಿಂತಿರುಗಿಸಲು ಸಿದ್ಧತೆ ನಡೆಸಿದ್ದೇನೆ
ಚಿನ್ನವನ್ನು ದಾನ ನೀಡುವ ಸಲುವಾಗಿ ದೇಶದ ನಾನಾ ಪುಣ್ಯಕ್ಷೇತ್ರಗಳಿಗೆ ತೆರಳಿದ್ದೇನೆ. ಆಂಬಿಡೆಂಟ್ ಕಂಪನಿ ವಿರುದ್ಧ ವಂಚನೆ ಪ್ರಕರಣಗಳಿವೆ ಎಂಬ ಸಂಗತಿ ನನಗೆ ಈಗ ಗೊತ್ತಾಗುತ್ತಿದೆ. ನನಗೂ ಹಾಗೂ ಆ ಕಂಪನಿಗೂ ಯಾವ ಸಂಬಂಧವೂ ಇಲ್ಲ. ಮತ್ತು ಆಗ ನಡೆದ ವ್ಯವಹಾರ ವಯಕ್ತಿಕವಾದದ್ದು. ಆಂಬಿಡೆಂಟ್ ಕಂಪನಿ ಜತೆಗೆ ನನ್ನ ವ್ಯವಹಾರದಲ್ಲಿ ಯಾವುದೇ ಮೋಸವಿಲ್ಲ. ಆಗ ಸಾಲ ಪಡೆದ ಸಂಪೂರ್ಣ ಹಣವನ್ನು ವಾಪಸ್ ಮಾಡಲು ಸಿದ್ಧತೆ ನಡೆಸುತ್ತಿದ್ದೇನೆ.