ಸ್ಟಾರ್ ನಟರಿಗೆ ಐಟಿ ಗ್ರಹಣ, ರಾತ್ರಿಯಿಡಿ ಮಾಡಲಿದ್ದಾರೆ ಡ್ರಿಲ್
ಬೆಂಗಳೂರು, ಜನವರಿ 03 : ಹೊಸ ವರ್ಷದ ಆರಂಭದಲ್ಲಿಯೇ ಕನ್ನಡ ಚಿತ್ರರಂಗದ ಸ್ಟಾರ್ ನಟರಿಗೆ ಹಾಗೂ ಕೆಲವು ನಿರ್ಮಾಪಕರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಗುರುವಾರ ಬೆಳಿಗ್ಗೆಯೇ ನಟ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ಸುದೀಪ್, ನಟ ಯಶ್, ರಾಧಿಕಾ ಪಂಡಿತ್, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಸಿ.ಆರ್.ಮನೋಹರ್, ಜಯಣ್ಣ ಅವರುಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ರಾತ್ರಿ 11 ಗಂಟೆ ಆದರೂ ತಪಾಸಣೆ ನಡೆಸುತ್ತಿದ್ದಾರೆ.
200 ಜನ ಐಟಿ ಅಧಿಕಾರಿಗಳ 30 ತಂಡಗಳು ಕನ್ನಡ ಚಿತ್ರರಂಗವನ್ನೇ ಗುರಿ ಮಾಡಿಕೊಂಡು ಬೆಳಿಗ್ಗೆಯೇ ದಾಳಿ ನಡೆಸಿದೆ. ಪುನೀತ್ ರಾಜ್ಕುಮಾರ್ ಅವರ ಸದಾಶಿವನಗರ ಮನೆ, ಮಾನ್ಯತಾ ಟೆಕ್ ಪಾರ್ಕ್ನ ಶಿವರಾಜ್ಕುಮಾರ್ ಮನೆ, ಜೆ.ಇ.ನಗರದ ಸುದೀಪ್ ಮನೆ, ಕತ್ರಿಗುಪ್ಪೆಯ ಯಶ್ ಮನೆ ಅವರ ಪತ್ನಿ ರಾಧಿಕ ಪಂಡಿತ್ ಮನೆ ಮೇಲೆ ದಾಳಿ ನಡೆಸಲಾಯಿತು.
ಐಟಿ ಅಧಿಕಾರಿಗಳು ಬುಧವಾರವೇ ಕೋರ್ಟ್ನಿಂದ ವಾರೆಂಟ್ ಪಡೆದಿದ್ದರು. ನಿರ್ಮಾಪಕರು ಸಿನಿಮಾಗಳಿಗೆ ಹೂಡಿದ ಹಣ ಗಳಿಸಿದ ಲಾಭ, ನಟರ ಸಂಭಾವನೆ, ಹೂಡಿಕೆಗಳು, ತೆರಿಗೆ ಇನ್ನಿತರ ವಿಷಯಗಳ ಬಗ್ಗೆ ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ತಪಾಸಣೆಯು ಶುಕ್ರವಾರ ಬೆಳಿಗ್ಗೆ ಮುಗಿಯುವ ಸಾಧ್ಯತೆ ಇದೆ.

ಯಶ್ ಮಾವ ವಶಕ್ಕೆ
ಯಶ್ ಅವರ ಮಾವ, ರಾಧಿಕಾ ಪಂಡಿತ್ ಅವರ ಅಪ್ಪ ಅವರನ್ನು ವಿಚಾರಣೆ ನಡೆಸಲಾಯಿತು. ಅವರನ್ನು ವಶಕ್ಕೆ ಸಹ ಪಡೆಯಲಾಯಿತು. ಮುಂಬೈನಲ್ಲಿದ್ದ ಯಶ್ ಅವರು ಮಧ್ಯಾಹ್ನದ ವೇಳೆಗೆ ವಾಪಸ್ ಬಂದರು. ಹೈದರಾಬಾದ್ನಲ್ಲಿದ್ದ ಸುದೀಪ್ ಸಹ ಮನೆಗೆ ಹಿಂತಿರುಗಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜಕೀಯ ದ್ವೇಷ ಇಲ್ಲ: ಸುದೀಪ್
ಐಟಿ ದಾಳಿಯ ಹಿಂದೆ ರಾಜಕೀಯ ದ್ವೇಷ ಇದೆ ಎಂದು ಹೇಳಲಾಗದು, ಇದು ಸಾಮಾನ್ಯ ವಿಷಯವಷ್ಟೆ, ನಾವು ಯಾವುದೇ ತಪ್ಪು ಮಾಡಿಲ್ಲ, ನಾನು ನಟಿಸಿರುವ ಸಿನಿಮಾ, ಗಳಿಸಿರುವ ಲಾಭದ ಬಗ್ಗೆ ತನಿಖೆ ನಡೆಯುತ್ತಿದೆ ಅಷ್ಟೆ ಎಂದು ಸುದೀಪ್ ಹೇಳಿದರು.

'ಮೊದಲ ಅನುಭವ'
ಯಶ್ ಮಾತನಾಡಿ, ಇದು ನನಗೆ ಮೊದಲ ಅನುಭವ, ಈ ವರೆಗೂ ನನಗೆ ಯಾವುದೇ ಮಾಹಿತಿ ಇಲ್ಲ. ವಿಮಾನ ನಿಲ್ದಾಣದಿಂದ ನೇರವಾಗಿ ಮನೆಗೆ ಹೋಗಿ ಪರಿಸ್ಥಿತಿ ಅರಿಯುತ್ತೇನೆ, ಗೊತ್ತಿಲ್ಲದೆ ಮಾತನಾಡಲಾರೆ ಎಂದು ಯಶ್ ಹೇಳಿದರು. ಶಿವರಾಜ್ ಕುಮಾರ್ ಅವರು ಮನೆಯಲ್ಲಿಯೇ ಉಳಿದರು. ಪುನೀತ್ ರಾಜ್ಕುಮಾರ್ ಸಹ ಈ ವರೆಗೆ ಘಟನೆ ಸಂಬಂಧ ಮಾಧ್ಯಮದವರೊಡನೆ ಮಾತನಾಡಿಲ್ಲ.

ಶುಕ್ರವಾರ ಮುಂಜಾನೆವರೆಗೂ ದಾಳಿ
ಐಟಿ ದಾಳಿ ಹಿನ್ನಲೆಯಲ್ಲಿ ಎಲ್ಲ ನಟರ ಮನೆಗಳ ಮುಂದೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶುಕ್ರವಾರ ಬೆಳಿಗಿನ ವರೆಗೂ ತಪಾಸಣೆ ನಡೆಯಲಿದ್ದು, ಆ ನಂತರ ಮುಂದಿನ ಕ್ರಮಗಳು ನಡೆಯಲಿವೆ.












Click it and Unblock the Notifications