ಬೆಂಗಳೂರು ಉತ್ತರದಲ್ಲಿ ಇಂದು ಕೈ ಚುನಾವಣೆ
ಬೆಂಗಳೂರು, ಮಾ.13 : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಗುರುವಾರ ಆಂತರಿಕ ಚುನಾವಣೆ ನಡೆಯಲಿದೆ. 467 ಮಂದಿ ಮತದಾರರು ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡ ಅವರ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಿದ್ದಾರೆ. ಬೆಳಗ್ಗೆ 11ಗಂಟೆಗೆ ಮತದಾನ ಆರಂಭವಾಗಲಿದೆ.
ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಸಿ. ನಾರಾಯಣಸ್ವಾಮಿ, ಪ್ರೊ.ರಾಜೀವ್ ಗೌಡ, ಸಿ.ಜೆ. ಚಂದ್ರಶೇಖರ್ ಹಾಗೂ ನೆ.ಲ. ನರೇಂದ್ರ ಬಾಬು ಅವರು ಕಣದಲ್ಲಿದ್ದು, ಮತದಾನದ ಹಕ್ಕು ಪಡೆದಿರುವ 467 ಮಂದಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಗುರುವಾರ ಸಂಜೆಯೇ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. [ಆಂತರಿಕ ಚುನಾವಣೆಯಲ್ಲಿ ಗೆದ್ದ ಪೂಜಾರಿ]

ಬೆಂಗಳೂರು ನಗರದ ಪಟೇಲ್ಸ್ ಇನ್ ನಲ್ಲಿ ಆಂತರಿಕ ಚುನಾವಣೆ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಮತದಾನಕ್ಕೂ ಮೊದಲು ಪ್ರತಿ ಅಭ್ಯರ್ಥಿಗಳಿಗೂ ಮತದಾರರನ್ನು ಉದ್ದೇಶಿಸಿ 10 ನಿಮಿಷ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತದೆ. ನಂತರ ಮತದಾನ ನಡೆಯಲಿದ್ದು, ಆಯ್ಕೆ ಯಾದ ಅಭ್ಯರ್ಥಿ ಮಾಜಿ ಸಿಎಂ ಡಿವಿ ಸದಾನಂದ ಗೌಡರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಈಗಾಗಲೇ ಯಶಸ್ವಿಯಾಗಿ ಆಂತರಿಕ ಚುನಾವಣೆಯನ್ನು ಮಾಡಿ ಮುಗಿಸಿದ್ದು, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರನ್ನು ಅಭ್ಯರ್ಥಿಯಾಗಿ ಮತದಾರರು ಆಯ್ಕೆ ಮಾಡಿದ್ದಾರೆ. ಗುರುವಾರ ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣೆ ನಡೆಯಲಿದೆ. ಕರ್ನಾಟಕದ ಈ ಎರಡು ಕ್ಷೇತ್ರಗಳಲ್ಲಿ ಮಾತ್ರ ಆಂತರಿಕ ಚುನಾವಣೆ ನಡೆಸುವಂತೆ ಎಐಸಿಸಿ ಸೂಚನೆ ನೀಡಿತ್ತು. [ಭರ್ಜರಿ ಪ್ರಚಾರ ಆರಂಭಿಸಿದ ಡಿವಿಎಸ್]
ಯಾರಿಗೆ ಯಾವ ಚಿಹ್ನೆ : ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿರುವ ನೆ.ಲ. ನರೇಂದ್ರಬಾಬು ಅವರಿಗೆ ಬಕೆಟ್, ಚಂದ್ರಶೇಖರ್ ಅವರಿಗೆ ಕ್ರಿಕೆಟ್ ಬ್ಯಾಟ್, ಪ್ರೊ.ರಾಜೀವ್ಗೌಡಗೆ ಟೇಬಲ್ ಮತ್ತು ಸಿ.ನಾರಾಯಣಸ್ವಾಮಿ ಅವರಿಗೆ ವಿಮಾನದ ಚಿಹ್ನೆ ನೀಡಲಾಗಿದೆ. 467 ಮಂದಿ ಮತದಾರರು ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ.












Click it and Unblock the Notifications