ಬೆಂಗಳೂರಿನಿಂದ ಶ್ರೀಹರಿಕೋಟಾಕ್ಕೆ ತೆರಳಿದ ಚಂದ್ರಯಾನದ ಲ್ಯಾಂಡರ್, ರೋವರ್
ಬೆಂಗಳೂರು, ಜೂನ್ 18: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ಈಡೇರುವ ದಿನ ಸಮೀಪಿಸುತ್ತಿದೆ. ಚಂದ್ರನ ಅಂಗಳಕ್ಕೆ ಎರಡನೆಯ ಬಾರಿಗೆ ತಲುಪುವ ಭಾರತದ ಪ್ರಯಾಣಕ್ಕೆ ಮೊದಲ ಹಂತದ ಚಾಲನೆ ದೊರಕಿದೆ.
ಚಂದ್ರಯಾನ-2 ಯೋಜನೆಯ ಆರ್ಬಿಟರ್ ಜೂನ್ 15ರಂದು ಶ್ರೀಹರಿ ಕೋಟಾದಲ್ಲಿರುವ ಉಡಾವಣಾ ಕೇಂದ್ರಕ್ಕೆ ತಲುಪಿತ್ತು. ಈಗ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಿಂದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ಅನ್ನು ಸೋಮವಾರ ಸರ್ಕಾರಿ ಟ್ರಕ್ನಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲಾಯಿತು.
ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರದಲ್ಲಿ ಲ್ಯಾಂಡರ್ ಹಾಗೂ ರೋವರ್ಅನ್ನು ಸಿದ್ಧಪಡಿಸಲಾಗಿದೆ. ಈ ಚಂದ್ರಯಾನ-2 ಯೋಜನೆಯು ತನ್ನೊಂದಿಗೆ ನಾಸಾದ ಪ್ರಾಯೋಗಿಕ ಸಾಧನವೊಂದನ್ನು ಸಹ ಕೊಂಡೊಯ್ಯಲಿದೆ. ಚಂದ್ರ ಮತ್ತು ಭೂಮಿಯ ನಡುವೆ ಇರುವ ನಿಖರವಾದ ಅಂತರವನ್ನು ಅಳೆಯಲು ಈ ಸಾಧನವನ್ನು ಬಳಸಲಾಗುತ್ತಿದೆ.

ಜಿಎಸ್ಎಲ್ವಿ ಎಂಕೆ-III ರಾಕೆಟ್ ಮೂಲಕ ಜುಲೈ 15ರ ತಡರಾತ್ರಿ 2.51ರ ಸಮಯಕ್ಕೆ ದೇಶದ ಎರಡನೆಯ ಚಂದ್ರಯಾನ ಯೋಜನೆಯನ್ನು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ. 3.8 ಟನ್ ತೂಕದ ಬಾಹ್ಯಾಕಾಶ ನೌಕೆಯು ಸೆಪ್ಟೆಂಬರ್ 6 ಅಥವಾ 7ರಂದು ಚಂದ್ರನ ಅಂಗಳದಲ್ಲಿ ಇಳಿಯುವ ನಿರೀಕ್ಷೆಯಿದೆ.












Click it and Unblock the Notifications