Namma Metro: ಗೊರಗುಂಟೆ ಪಾಳ್ಯದಲ್ಲಿ ಬರಲಿದೆ ಇಂಟರ್ ಚೇಂಜ್ ನಿಲ್ದಾಣ
ಬೆಂಗಳೂರು, ಮಾರ್ಚ್ 01: ನಮ್ಮ ಮಟ್ರೋ ಬೆಂಗಳೂರು ನಗರದ ಜೀವನಾಡಿಯಾಗಿ ಬದಲಾಗುತ್ತಿದೆ. ನೇರಳೆ, ಹಸಿರು ಮಾರ್ಗದಲ್ಲಿ ರೈಲುಗಳ ಸಂಚಾರ ನಡೆಸುತ್ತಿವೆ. 'ಹಳದಿ' ಮಾರ್ಗದ ಕಾಮಗಾರಿ ಪೂರ್ಣಗೊಂಡು ರೈಲುಗಳ ಸಂಚಾರಕ್ಕೆ ಸಿದ್ಧತೆ ನಡೆದಿದೆ. ಕೆಂಪು, ಹಸಿರು, ಗುಲಾಬಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಬಿಎಂಆರ್ಸಿಎಲ್ ಕಿತ್ತಲೆ ಮಾರ್ಗದ ವಿನ್ಯಾಸದಲ್ಲಿ ಕೆಲವು ಬದಲಾವಣೆ ಮಾಡಲು ಮುಂದಾಗಿದೆ. ಕೆಂಪಾಪುರ- ಜೆ. ಪಿ. ನಗರ 4ನೇ ಹಂತದವನ್ನು ಸಂಪರ್ಕಿಸುವ ಮಾರ್ಗ ಇದಾಗಿದೆ.
ಬಿಎಂಆರ್ಸಿಎಲ್ ಕಿತ್ತಲೆ ಮಾರ್ಗದ ವಿಸ್ತೃತ ಯೋಜನಾ ವರದಿ (ಡಿಪಿಆರ್)ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಇದರಿಂದಾಗಿ ಪೀಣ್ಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ಚೇಂಜ್ ನಿಲ್ದಾಣ ಗೊರಗುಂಟೆ ಪಾಳ್ಯಕ್ಕೆ ಸ್ಥಳಾಂತರವಾಗಲಿದೆ.

ಗೊರಗುಂಟೆ ಪಾಳ್ಯಕ್ಕೆ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಜಂಕ್ಷನ್. ಕೆಂಪಾಪುರ-ಜೆ. ಪಿ. ನಗರ 32.15 ಕಿ. ಮೀ. ನಮ್ಮ ಮೆಟ್ರೋ ಕಿತ್ತಲೆ ಮಾರ್ಗದ ವಿನ್ಯಾಸ ಬದಲಿಸಿ, ಗೊರಗುಂಟೆ ಪಾಳ್ಯದಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣ ಮಾಡುವುದರಿಂದ ಸಂಚಾರ ದಟ್ಟಣೆಯೂ ಪರಿಹಾರವಾಗಲಿದೆ ಎಂಬ ನಿರೀಕ್ಷೆ ಇದೆ.
ಪ್ರಾಸ್ತಾವಿತ ಹಂತದ ಯೋಜನೆ: ಗೊರಗುಂಟೆ ಪಾಳ್ಯದಲ್ಲಿ ನಮ್ಮ ಮೆಟ್ರೋ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣ ಇನ್ನೂ ಪ್ರಸ್ತಾವಿತ ಯೋಜನೆಯಾಗಿದೆ. ಹೀಗೆ ಮಾಡಿದರೆ ಕೆಂಪಾಪುರ-ಜೆ. ಪಿ. ನಗರ ಮಾರ್ಗ 300 ಮೀಟರ್ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಸಹ ಇರಲಿದೆ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.
ಪೀಣ್ಯಕ್ಕಿಂತ ಗೊರಗುಂಟೆ ಪಾಳ್ಯಕ್ಕೆ ಇಂಟರ್ ಚೇಂಜ್ ನಿಲ್ದಾಣ ಸ್ಥಳಾಂತರ ಮಾಡಿದರೆ ತಿರುವು ಕಡಿಮೆಯಾಗಲಿದ್ದು, ನಮ್ಮ ಮೆಟ್ರೋ ರೈಲು ವೇಗವಾಗಿ ಸಾಗಲು ಅನುಕೂಲವಾಗಲಿದೆ. ಈ ಯೋಜನೆ ಇನ್ನೂ ಪ್ರಸ್ತಾವಿತ ಹಂತದಲ್ಲಿದ್ದು, ಅಂತಿಮ ಒಪ್ಪಿಗೆ ಬಾಕಿ ಇದೆ.
ಕಿತ್ತಲೆ ಮಾರ್ಗದಲ್ಲಿ ಮೊದಲು ಬಿಎಂಆರ್ಸಿಎಲ್ ಜೆ. ಪಿ. ನಗರ (ಹಸಿರು ಮಾರ್ಗ), ಮೈಸೂರು ರಸ್ತೆ (ನೇರಳೆ ಮಾರ್ಗ), ಸುಮನಹಳ್ಳಿ ಮತ್ತು ಪೀಣ್ಯದಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ರೂಪಿಸಿತ್ತು. ಆದರೆ ಈಗ ದೂರ ಕಡಿಮೆ ಮಾಡುವ ಗುರಿಯೊಂದಿಗೆ ಪೀಣ್ಯದ ಬದಲು ಗೊರಗುಂಟೆ ಪಾಳ್ಯ ಇಂಟರ್ ಚೇಂಜ್ ನಿಲ್ದಾಣ ಸ್ಥಳಾಂತರ ಮಾಡಲಾಗುತ್ತದೆ.
ಗೊರಗುಂಟೆ ಪಾಳ್ಯಕ್ಕೆ ಇಂಟರ್ಚೇಂಜ್ ನಿಲ್ದಾಣ ಸ್ಥಳಾಂತರ ಮಾಡಿ ಪೀಣ್ಯ, ಗೊರಗುಂಟೆ ಪಾಳ್ಯ ಮೆಟ್ರೋ ನಿಲ್ದಾಣಗಳಿಗೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಆದರೆ ಗೊರಗುಂಟೆ ಪಾಳ್ಯ ತುಮಕೂರು ರಸ್ತೆಯಲ್ಲಿದ್ದು, ಇಲ್ಲಿ ಭೂಮಿ ಯೋಜನೆಗೆ ಸಿಗಲಿದೆಯೇ? ಎಂಬುದು ಸದ್ಯದ ಪ್ರಶ್ನೆ.
ಅಧಿಕಾರಿಗಳ ಮಾಹಿತಿ ಪ್ರಕಾರ ರಕ್ಷಣಾ ಇಲಾಖೆಗೆ ಸೇರಿದ ಭೂಮಿ ಗೊರಗುಂಟೆ ಪಾಳ್ಯದಲ್ಲಿ ಲಭ್ಯವಿದೆ. ಆದರೆ ಅದನ್ನು ಪಡೆಯಲು ಸಾಕಷ್ಟು ಶ್ರಮ ಪಡಬೇಕಿದೆ. ಈಗಾಗಲೇ ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ ರಕ್ಷಣಾ ಇಲಾಖೆ ಭೂಮಿಯನ್ನು ನೀಡಿದೆ.
ನಮ್ಮ ಮೆಟ್ರೋ ಹಂತ-3ಕ್ಕೆ ಈಗಾಗಲೇ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ಕೆಂಪಾಪುರ-ಜೆ. ಪಿ. ನಗರ 4ನೇ ಹಂತ (ಕಾರಿಡಾರ್-1) ಮತ್ತು ಹೊಸಹಳ್ಳಿ-ಕಡಬಗೆರೆ (2ನೇ ಕಾರಿಡಾರ್) ನಿರ್ಮಾಣವಾಗಲಿದೆ. ಈ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಬಿಎಂಆರ್ಸಿಎಲ್ ಭೂ ಸ್ವಾಧೀನ ಆರಂಭಿಸಿದೆ.












Click it and Unblock the Notifications