ಬೆಂಗಳೂರು ಕೆರೆಗಳಿಗೆ ಸ್ಲೂಯೀಸ್ ಗೇಟ್ ಅಳವಡಿಕೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಸೆ.02: ''ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಬೊಮ್ಮನಹಳ್ಳಿ, ಮಹದೇವಪುರ, ಕೆ.ಆರ್.ಪುರಂ ಅಥವಾ ಎತ್ತರದ ಪ್ರದೇಶದಲ್ಲಿ ಅತೀ ಹೆಚ್ಚು ಕೆರೆಗಳಿವೆ. ಒಂದಕ್ಕೊಂದು ಹೊಂದಿಕೊಂಡಿರುವ ಕೆರೆಗಳಿಗೆ ಸ್ಲೂಯೀಸ್ ಗೇಟ್ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ರಾತ್ರಿವರೆಗೆ ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೆರೆಗಳ ಒತ್ತುವರಿ ತೆರವು ಗೊಳಿಸುವ ಕಾರ್ಯ ನಿರಂತರವಾಗಿ ಆಗಬೇಕು. ತಗ್ಗು ಪ್ರದೇಶದಲ್ಲಿ ನೀರು ಹೋಗಲು ದಾರಿ ಇಲ್ಲ. ಮನೆಗಳನ್ನು ಕಟ್ಟಲು ಅವಕಾಶ ನೀಡಿದವರು ಯಾರು?. ಇದಕ್ಕೆಲ್ಲಾ ಯಾರು ಕಾರಣ? ಎಂದು ಪ್ರಶ್ನಿಸಿದರು.
ಬೆಂಗಳೂರು ಮಳೆ ವರದಿ: ಸೆ.6ರವರೆಗೂ ಇದೆ ವರ್ಷಧಾರೆ
ಒತ್ತುವರಿ ತೆರೆವುಗೊಳಿಸುವುದಲ್ಲದೆ ಅಂದಾಜು ಪಟ್ಟಿ ಸಿದ್ಧಪಡಿಸಿ. ಎಲ್ಲವನ್ನೂ ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ ಮಾಡಿ. ನೀರು ಸರಳವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಬೇಕು. ಒತ್ತುವರಿ ಆಗಿರುವುದನ್ನು ಗುರುತಿಸಿ, ಖಾಸಗಿ ಜಮೀನು ನಕ್ಷೆಯಲ್ಲಿದ್ದರೆ ಪರಿಹಾರವನ್ನು ನೀಡಬೇಕಾದರೆ ಅದಕ್ಕೂ ಸರ್ಕಾರ ಸಿದ್ಧವಿರುವುದಾಗಿ ಎಂದು ತಿಳಿಸಿದರು.
ಸಂಪೂರ್ಣವಾಗಿ ಆರ್ಸಿಸಿ ಕಟ್ಟಡವನ್ನು ಕಟ್ಟಿದ್ದರಿಂದ 30.ಮೀಟರ್ ಚರಂಡಿ ಮೂರು ಮೀಟರ್ಗೆ ಇಳಿದಿದೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಎತ್ತರದ ಗೋಡೆ ಕಟ್ಟಿ ಎಂದು ಕೆರೆ ಕೋಡಿ ಒಡೆತ ಸಮಸ್ಯೆಗೆ ಪರಿಹಾರ ಕುರಿತು ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.
ಚರಂಡಿ ನಿರ್ವಹಣೆಗೆ ಕೈಪಿಡಿ
ಬೆಂಗಳೂರಿನ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಇಂತದ್ದೇ ಸಮಸ್ಯೆ ಇದೆ. ಕೆರೆಯಿಂದ ಮತ್ತೊಂದು ಕೆರೆಗೆ ಬರುವುದರಿಂದ ಹಿಡಿದು ವರ್ತೂರು ಕೆರೆ, ಅಲ್ಲಿಂದ ದಕ್ಷಿಣ ಪಿನಾಕಿನಿಗೆ ಸೇರುವ ಎಲ್ಲ ಕಾಲುವೆಗಳ ಶಾಶ್ವತ ಕಟ್ಟಡಗಳನ್ನು ಮಾಡಬೇಕು. ಸ್ಲೂಯಿಸ್ ಗೇಟ್ ಹಾಕಿದ ಮೇಲೆ ಬೇಸಿಗೆ ಕಾಲದಲ್ಲಿ ಎಲ್ಲಾ ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬೇಕು. ವಲಯವಾರು ಮಳೆ ನೀರು ಚರಂಡಿಗಳ ನಿರ್ವಹಣೆಗೆ ಕೈಪಿಡಿ ಸಿದ್ಧಪಡಿಸಿ. ಈಗಾಗಲೇ ಈ ಉದ್ದೇಶಕ್ಕಾಗಿ 1,500 ಕೋಟಿ ರು ಅನುದಾನ ನೀಡಲಾಗಿದೆ. ಟೆಂಡರ್ ಆಗಿದೆ, ಅವಶ್ಯಕತೆ ಇದ್ದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕಾಮಗಾರಿಗಳ ತನಿಖೆಗೆ ಆದೇಶ
ಮಳೆ ನೀರು ಚರಂಡಿಯ ನಿರ್ವಹಣೆಗೆ ಮಾಡುವ ಅಂದಾಜು ಪಟ್ಟಿಯಂತೆ ಅನುದಾನವನ್ನು ಇದೇ ವರ್ಷವೇ ರಾಜ್ಯ ಸರ್ಕಾರ ಒದಗಿಸಲಿದೆ. ಇದು ನಮ್ಮ ಆದ್ಯತೆ. ಆದರೆ ಉತ್ತರದಾಯಿತ್ವ ಬಹಳ ಮುಖ್ಯ. ಇದರಲ್ಲಿ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದರು. ಹಿಂದಿನ ಎಲ್ಲಾ ಕಾಮಗಾರಿಗಳ ಸಂಪೂರ್ಣ ತನಿಖೆಗೆ ಆದೇಶ ಮಾಡುತ್ತೇನೆ. ಸತ್ಯ ಹೊರಗೆ ಬರಲಿ. ತಪ್ಪು ಯಾರದ್ದು ಎಂದು ತಿಳಿಯಲಿ ಎಂದರು.
ಇಲಾಖೆಗಳ ಮಧ್ಯೆ ಸಮನ್ವಯತೆ ಅಗತ್ಯ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆಲವೆಡೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂಗಳ) ಮಧ್ಯೆ ಸಮನ್ವಯದ ಅವಶ್ಯಕತೆ ಇದೆ. ಬೇಜವಾಬ್ದಾರಿ ಯಿಂದ ನಾಲ್ಕು ಸಂಸ್ಥೆಗಳು ನಡೆದುಕೊಳ್ಳಬಾರದು. ಬೆಂಗಳೂರು ಜಲ ಮಂಡಳಿ ಒಳಚರಂಡಿ ಘಟಕಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವ ಜತೆಗೆ ಅದಕ್ಕಾಗಿ ಕಾಲಮಿತಿ ಹಾಕಿಕೊಳ್ಳಬೇಕು ಎಂದು ತಿಳಿಸಿದರು.
ಒಳಚರಂಡಿ, ರಸ್ತೆ ಸರಿಪಡಿಸಲು ತಾಕೀತು
2015- 16ರಲ್ಲಿ ಸ್ಥಾಪಿಸಿದ ಘಟಕಗಳು ಕೆಲಸ ಮಾಡುತ್ತಿಲ್ಲ. ಪೂರ್ಣ ಸಾಮರ್ಥ್ಯದಲ್ಲಿ ಅವು ಕೆಲಸ ಮಾಡುತ್ತಿಲ್ಲ. ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕು. ಬೆಸ್ಕಾಂ ನವರು ಯಾವುದೇ ಕೆಲಸ ಮಾಡಿದರೂ ಅದನ್ನು ಪೂರ್ಣಗೊಳಿಸಬೇಕು. ಮಳೆ ನೀರು ಚರಂಡಿ ಸಮಸ್ಯೆ ಪೂರ್ಣ ನಿಲ್ಲಬೇಕು. ಬೆಂಳೂರಿನಾದ್ಯಂತ ಐಟಿ ಬಿಟಿ ಸಂಸ್ಥೆಗಳು ಸಾಕಷ್ಟಿವೆ. ಬೆಂಗಳೂರಿನ ವರ್ಚಸ್ಸು ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಕೆ.ಆರ್.ಪುರಂ, ಎಚ್ಎಸ್ಆರ್ ಬಡಾವಣೆ, ಮಾರತ್ತಹಳ್ಳಿ, ವೈಟ್ಫಿಲ್ಡ್, ಕೋರಮಂಗಲ ಈ ಎಲ್ಲ ಪ್ರದೇಶಗಳಲ್ಲಿ ಮಳೆ ನೀರು ಚರಂಡಿ ಹಾಗೂ ರಸ್ತೆಗಳನ್ನು ಸರಿಪಡಿಸಬೇಕು ಎಂದು ಕಟ್ಟಿನಿಟ್ಟಿನ ತಾಕೀತು ಮಾಡಿದರು.
ಬೆಂಗಳೂರಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ಪ್ರದೇಶಗಳು ಹಾನಿಗೀಡಾಗಿದ್ದವು. ಕೆಲವು ಬಡಾವಣೆಗಳು ಮುಳಗಡೆ ಆಗಿದ್ದವು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಮಧ್ಯಾಹ್ನ 3 ಗಂಟೆ ನಂತರ ಹಾನೀಗೀಡಾದ ಪ್ರದೇಶಗಳಿಗೆ ಅಧಿಕಾರಿಗಳ ಸಹಿ ಭೇಟಿ ನೀಡಿದರು. ಈ ವೇಳೆ ಮಾರತ್ತಹಳ್ಳಿ ಮುಖ್ಯರಸ್ತೆಯ ಡಿಎನ್ಎ ಅಪಾರ್ಟ್ಮೆಂಟ್, ವೈಟ್ಫಿಲ್ಡ್, ವರ್ತೂರು ಕೆರೆ ಕೋಡಿ ಒಡೆದಿರುವುದು ಸೇರಿದಂತೆ ಹಲವು ಪ್ರದೇಶ ವೀಕ್ಷಿಸಿದರು. ನಂತರ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ್, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ, ಶಾಸಕ ಅರವಿಂದ ಲಿಂಬಾವಳಿ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.