Infosys Company: ಇನ್ಫೋಸಿಸ್ ಗೆ 'ಕರ್ನಾಟಕದ ಐಟಿ ರತ್ನ' ಪುರಸ್ಕಾರ: ಸರ್ಕಾರ
ಬೆಂಗಳೂರು, ನವೆಂಬರ್ 20: ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳು ವಾಣಿಜ್ಯದ ದೃಷ್ಟಿ ಜೊತೆಗೆ ಸಮಾಜಕ್ಕೆ ತಮ್ಮದ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಹೀಗೆ ಐಟಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಂಪನಿಗಳಿಗೆ ಭಾರತೀಯ ಸಾಫ್ಟ್ವೇರ್ ಪಾರ್ಕುಗಳ ಕೂಟ (ಎಸ್.ಟಿ.ಪಿ.ಐ) ಪ್ರಶಸ್ತಿ ಪುರಸ್ಕಾರ ಮಾಡುತ್ತದೆ. ಈ ಬಾರಿ ದೇಶಿಯ ಐಟಿ ಕಂಪನಿ ಇನ್ಫೋಸಿಸ್ ಕಂಪನಿಗೆ 'ಕರ್ನಾಟಕ ಐಟಿ ರತ್ನ' ಪ್ರದಾನ ಮಾಡಲಾಯಿತು.
ಬೆಂಗಳೂರು ತಂತ್ರಜ್ಞಾನ ಸಮಾವೇಶ'ದಲ್ಲಿ ಅವರು ರಫ್ತು ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯದ ವಿವಿಧ ಐಟಿ ಕಂಪನಿಗಳಿಗೆ ಎಸ್.ಟಿ.ಪಿ.ಐ) ಪುರಸ್ಕಾರ ಪ್ರದಾನ ಮಾಡಲಾಯಿತು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಇನ್ಫೋಸಿಸ್ ಕಂಪನಿಗೆ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿ ಪ್ರಧಾನ ಮಾಡಿದರು.

ಈ ವೇಳೆ ಮಾತನಾಡಿದ ಸಚಿವರು ಉದ್ಯಮಿಗಳು ಕೇವಲ ವಾಣಿಜ್ಯ ದೃಷ್ಟಿಯ ಲಾಭವನ್ನು ಮಾತ್ರ ನೋಡುತ್ತಿರುವುದಿಲ್ಲ. ತಮ್ಮ ಪರಿಶ್ರಮ ಮತ್ತು ಬದ್ಧತೆಗಳ ಮೂಲಕ ತಂತ್ರಜ್ಞಾನದ ಭವಿಷ್ಯವನ್ನು ಕೂಡ ನಿರ್ಧರಿಸುತ್ತಾರೆ. ಇದರ ಲಾಭ ಕೊನೆಗೆ ಸಮಾಜಕ್ಕೆ ಸಿಗುತ್ತದೆ. ರಾಜ್ಯದಲ್ಲಿ ನೆಲೆಯೂರಿರುವ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ಅವರು ತಿಳಿಸಿದರು.
ಎಸ್ ಟಿ ಪಿ ಐ ಏಳು ವರ್ಷಗಳ ಹಿಂದೆಯೇ ರಾಜ್ಯ ಸರಕಾರದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ 'ಸ್ಮಾರ್ಟ್' (ಸೆಮಿಕಂಡಕ್ಟರ್ ಮೆಷರ್ಮೆಂಟ್ ಅನಾಲಿಸಿಸ್ & ರಿಲೈಯಬಿಲಿಟಿ ಟೆಸ್ಟ್) ತೆರೆದಿದೆ. ಇದರಿಂದ ದೇಶದ ಸೆಮಿಕಂಡಕ್ಟರ್ ಮತ್ತು ಇ ಎಸ್ ಡಿಎಂ ವಲಯಗಳ ಕಾರ್ಯ ಪರಿಸರ ಸುಧಾರಿಸಿತು. ಜೊತೆಗೆ ನವೋದ್ಯಮಗಳು ಮತ್ತು ಸೆಮಿಕಂಡಕ್ಟರ್ ಕಂಪನಿಗಳು ವಿನ್ಯಾಸವನ್ನು ರೂಪಿಸಲು ತೆಗೆದುಕೊಳ್ಳುತ್ತಿದ್ದ ದೀರ್ಘ ಸಮಯಕ್ಕೆ ತೆರೆಬಿತ್ತು ಎಂದು ವಿವರಿಸಿದರು.

ಇದಲ್ಲದೆ, ಎಸ್ ಟಿ ಪಿ ಐ ರಾಜ್ಯ ರಾಜಧಾನಿಯಲ್ಲಿ ಸಿಒಇ-ಐಒಟಿ ಓಪನ್-ಲ್ಯಾಬ್ ಕೂಡ ಆರಂಭಿಸಿದೆ. ಇದರಡಿಯಲ್ಲಿ 130 ನವೋದ್ಯಮಗಳು ಆಯ್ಕೆಯಾಗಿವೆ. ಈಗಾಗಲೇ 67 ಉದ್ಯಮಗಳು ಕಾರ್ಯ ಚಟುವಟಿಕೆ ಆರಂಭಿಸಿವೆ. ಇದು ದೇಶದ ಐಒಟಿ ವಲಯವನ್ನು ಹೊಸ ದಿಕ್ಕಿಗೆ ಕೊಂಡೊಯ್ಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಟಿಸಿಎಸ್, ಬಾಷ್, ಇಂಟೆಲ್ ಗೆ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಅತ್ಯುತ್ತಮ ಐಟಿ ರಫ್ತು ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಬಾಷ್, ಇಂಟೆಲ್ ಮುಂತಾದವುಗಳಿಗೆ ಎಸ್ ಟಿ ಪಿ ಐ-ಐಟಿ ಪುರಸ್ಕಾರವನ್ನು ಸಚಿವ ಎಂ ಬಿ ಪಾಟೀಲ ಪ್ರದಾನ ಮಾಡಿದರು. ಪ್ರಶಸ್ತಿಗೆ ಪಾತ್ರವಾದ ಕಂಪನಿಗಳಾದ ಅಮೆಜಾನ್ ಡೆವಲಪ್ಮೆಂಟ್ ಸೆಂಟರ್, ಜೆ ಪಿ ಮಾರ್ಗನ್ ಸರ್ವೀಸಸ್, ಗೋಲ್ಡನ್ ಸ್ಯಾಕ್ಸ್, ಸ್ಯಾಮ್ಸಂಗ್ ಆರ್ & ಡಿ, ಕ್ವಾಲ್ಕಾಂ ಇಂಡಿಯಾ, ಸ್ನೀಡರ್ ಎಲೆಕ್ಟ್ರಿಕ್, ಅಲ್ಟ್ರಾನ್ ಟೆಕ್ ಇಂಡಿಯಾ, ಸ್ಯಾಪ್ ಲ್ಯಾಬ್ಸ್, ವಿಎಂವೇರ್ ಸಾಫ್ಟ್ವೇರ್ಸ್, ಆ್ಯಕ್ಸೆಂಚರ್ ಸಲ್ಯೂಷನ್ಸ್ ಪರವಾಗಿ ಅವುಗಳ ಉನ್ನತಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಎಸ್ ಟಿ ಪಿ ಐ ಅಧ್ಯಕ್ಷ ಸಂಜಯ್ ತ್ಯಾಗಿ ಪಾಲ್ಗೊಂಡಿದ್ದರು.












Click it and Unblock the Notifications