ಬಿಬಿಎಂಪಿ ಸದಸ್ಯರಿಗೆ ಇಂದಿರಾ ಕ್ಯಾಂಟೀನ್ ಊಟವಿಲ್ಲ!
ಬೆಂಗಳೂರು, ಜನವರಿ 06 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರು ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ಊಟ ಸವಿಯುವಂತಿಲ್ಲ. ಜನಪ್ರತಿನಿಧಿಗಳಿಗೆ ಊಟ ಸರಬರಾಜು ಮಾಡುವುದಿಲ್ಲ ಎಂದು ಮೇ. ರಿವಾರ್ಡ್ಸ್ ಸಂಸ್ಥೆ ಹೇಳಿದೆ.
ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿಗೆ ಪತ್ರ ಬರೆದಿರುವ ಮೇ. ರಿವಾರ್ಡ್ಸ್ ಸಂಸ್ಥೆ ತಕ್ಷಣದಿಂದಲೇ ಜನಪ್ರತಿನಿಧಿಗಳಿಗೆ ಊಟ ಒದಗಿಸುವ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದೆ. ಊಟ ಸರಬರಾಜು ಮಾಡಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದೆ.
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಗಂಗಾಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿದ್ದರು. ಆಗ ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಪೂರೈಸುವ ಮೇ. ರಿವಾರ್ಡ್ಸ್ ಸಂಸ್ಥೆ ಪಾಲಿಕೆ ಕೌನ್ಸಿಲ್ ಸಭೆ, ಪಾಲಿಕೆಯಲ್ಲಿ ನಡೆಯುವ ಸಭೆಗಳಿಗೆ ಊಟ, ಉಪಹಾರ ಒದಗಿಸಬೇಕು ಎಂದು ಆದೇಶ ನೀಡಿದ್ದರು.

ಇಂದಿರಾ ಕ್ಯಾಂಟೀನ್ ಊಟ ಮಾಡಲು ಬಿಬಿಎಂಪಿ ಸದಸ್ಯರು ಹಿಂದೇಟು ಹಾಕುತ್ತಿದ್ದರು. ಆದರೆ, ಖಾಸಗಿ ಹೋಟೆಲ್ನಿಂದ ಊಟ ತರಿಸುವ ವೆಚ್ಚ ಬಿಬಿಎಂಪಿಗೆ ಕಡಿಮೆ ಆಗುತ್ತಿತ್ತು. ಈಗ ಪಾಲಿಕೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇಂದಿರಾ ಕ್ಯಾಂಟೀನ್ ಊಟ ಸ್ಥಗಿತಗೊಂಡಿದೆ.
ಬಿಜೆಪಿ ನಾಯಕರ ಲಾಬಿ ಮತ್ತು ಒತ್ತಡಕ್ಕೆ ಮಣಿದು ಮೆ. ರಿವಾರ್ಡ್ಸ್ ಸಂಸ್ಥೆ ಊಟ ಸರಬರಾಜು ನಿಲ್ಲಿಸಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪ ಮಾಡುತ್ತಿದ್ದಾರೆ. ಪ್ರತಿದಿನ ಸಾವಿರಾರು ಜನರು ಸೇವಿಸುವ ಪಾಲಿಕೆಯೇ ನಿರ್ವಹಣೆ ಮಾಡುವ ಇಂದಿರಾ ಕ್ಯಾಂಟೀನ್ ಊಟ ಪಾಲಿಕೆ ಸದಸ್ಯರಿಗೆ ಬೇಡವಾಗಿದೆ.
ಪಾಲಿಕೆಗೆ ಉಳಿತಾಯ : ಮೇ. ರಿವಾರ್ಡ್ಸ್ ಪಾಲಿಕೆ ಸಭೆಗೆ ಊಟ, ಉಪಹಾರ ಪೂರೈಕೆ ಮಾಡುವುದರಿಂದ ವಾರ್ಷಿಕ 16 ರಿಂದ 17 ಲಕ್ಷ ಹಣ ಸಂದಾಯವಾಗುತ್ತಿತ್ತು. ಪಾಲಿಕೆ ಖಾಸಗಿ ಹೋಟೆಲ್ ಮೂಲಕ ಆಹಾರ ತರಿಸಿದರೆ ವಾರ್ಷಿಕ 70 ಲಕ್ಷ ಹಣ ಖರ್ಚಾಗುತ್ತದೆ.












Click it and Unblock the Notifications