ಚಿತ್ರಗಳಲ್ಲಿ: ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವ
ಬೆಂಗಳೂರು, ಸೆ.28: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವದ ಸಂಭ್ರಮ ಮನೆ ಮಾಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾ.ನಿ. (ಬಿಐಎಎಲ್) ಹಾಗೂ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಈ ಸಮಾರಂಭವನ್ನು ಆಯೋಜಿಸಿವೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಿ. ಮಹೇಂದ್ರ ಜೈನ್ ಭಾಗವಹಿಸಿದ್ದರು. ಇದೇ ಸಂದರ್ಭ ವಿಮಾನ ಪ್ರಯಾಣಿಕರಿಗಾಗಿ ವಿಶೇಷ ಮನರಂಜನೆ ಕೂಡ ಏರ್ಪಡಿಸಲಾಗಿತ್ತು.
ಶಾಸ್ತ್ರೀಯ ನೃತ್ಯ ಪ್ರದರ್ಶನ ಆಯೋಜಿಸಲಾಗಿತ್ತು. ಕುಮಾರಿ ಕೃಪಾ ರಾಮಚಂದ್ರನ್ ಹಾಗೂ ಅವರ ತಂಡವು ಎರಡು ಅಮೋಘ ನೃತ್ಯ ಪ್ರದರ್ಶನವನ್ನು ನೀಡಿತು. ಇದಲ್ಲದೇ ವೈಯಕ್ತಿಕ ನೃತ್ಯದ ಮೂಲಕ ಕುಮಾರಿ ದಿವಿಜಾ ಮೆಲಾಲಿ, ಶ್ರೀಮತಿ ನಾಗಲಕ್ಷ್ಮಿ ಕೆ ರಾವ್ ಹಾಗೂ ಅವರ ತಂಡ ಸಮೂಹ ಗಮನ ಸೆಳೆಯುವ ಪ್ರದರ್ಶನ ನೀಡಿತು. ಸಂಜೆಯ ಹದವಾದ ತಂಪು ವಾತಾವರಣದಲ್ಲಿ ಕೆಐಎನ ಆವರಣದಲ್ಲಿ ಅಪ್ಪಗೆರೆ ಸತೀಶ್ ಹಾಗೂ ತಂಡದ ಗಾಯನ ಕೂಡ ಅತ್ಯಂತ ಮುದ ನೀಡಿತು.
ಇಲ್ಲಿ ಒಟ್ಟು ಮೂರು ದಿನ ದಸರಾ ಉತ್ಸವ ನಡೆಯಲಿದ್ದು, ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.
ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವ
ಪ್ರವಾಸಿಗರು ಹಾಗೂ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದವರನ್ನು ಇದೇ ಸಂದರ್ಭ ಗೊಂಬೆ ಹಬ್ಬ ಅಪಾರವಾಗಿ ಗಮನ ಸೆಳೆಯಿತು. ಇದು ಕೆಐಎಎಲ್ನಲ್ಲಿ ದಸರಾ ಸಂದರ್ಭದ ಪ್ರಮುಖ ಆಕರ್ಷಣೆ ಕೂಡ. ದೇವರು, ಪುರಾಣಗಳು, ನಿತ್ಯ ಜೀವನ ಹಾಗೂ ಹಿಂದು ಪುರಾಣಗಳ ಸಮ್ಮಿಳನ ಇಲ್ಲಾಗಿತ್ತು. ಧಾರ್ಮಿಕತೆಯನ್ನು ಅತ್ಯಂತ ವಿಶಿಷ್ಟವಾಗಿ ಪ್ರತಿಬಿಂಬಿಸುವ ಪ್ರಯತ್ನ ಇಲ್ಲಿ ಯಶ ಕಂಡಿತು.
ಕರ್ನಾಟಕ- ಎ ಕಲ್ಚರಲ್ ಜರ್ನಿ
ಕಾಫಿ ಟೇಬಲ್ ಪುಸ್ತಕವಾದ "ಕರ್ನಾಟಕ- ಎ ಕಲ್ಚರಲ್ ಜರ್ನಿ' ಪುಸ್ತಕವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಸುಭಾಷ್ಚಂದ್ರ ಕುಂಟಿಯಾ ಬಿಡುಗಡೆ ಮಾಡಿದರು. ಇದು ಬಿಐಎಎಲ್ಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ ಹೊತ್ತಿಗೆಯಾಗಿದೆ. ಈ ಪುಸ್ತಕವು ರಾಜ್ಯದ ನೈಜ ಸಂಸ್ಕøತಿಯನ್ನು ಪ್ರದರ್ಶಿಸುವ ಜತೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಸರಾ ಆಚರಣೆಯ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಕೂಡ ಪ್ರಚುರಪಡಿಸಲಿದೆ.
ಮಕ್ಕಳ ಕಲ್ಯಾಣಕ್ಕೆ ಸಹಾಯ ನೀಡಿ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಸರಾ ಆಚರಣೆಯ ವಿಶೇಷವೆಂದರೆ ದೃಷ್ಟಿ ಹಾಗೂ ಶ್ರವಣ ವಿಕಲಚೇತರ ಶಾಲೆ ಮಾತೃ ಪ್ರೀಸ್ಕೂಲ್ನ "ಶ್ರವಣ ವಿಕಲಚೇತನ ಮಕ್ಕಳ' ಕೈಲಿ ಮೂಡಿದ ಕಲೆಯ ಪ್ರದರ್ಶನ ಇಲ್ಲಿದೆ. ವಿಮಾನ ನಿಲ್ದಾಣ ಮೂಲಕ ತೆರಳುವವರಿಗೆ ಇಲ್ಲಿನ ಟರ್ಮಿನಲ್ನಲ್ಲಿ ಅಪರೂಪದ ಪೋಸ್ಟ್ ಕಾರ್ಡ್ಗಳ ರೂಪದ ರಚನೆ ಲಭಿಸಲಿದೆ. ಇದರಿಂದ ಬರುವ ಹಣದಿಂದ ಮಕ್ಕಳಿಗೆ ಬ್ರೈಲ್ ಪುಸ್ತಕಗಳನ್ನು ಕೊಂಡು ನೀಡಲು ನಿರ್ಧರಿಸಲಾಗಿದೆ.
ಮೂರು ದಿನಗಳ ಸಾಂಸ್ಕೃತಿಕ ಉತ್ಸವ
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಬೆಂಬಲದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೂರು ದಿನಗಳ ಸಾಂಸ್ಕೃತಿಕ ಉತ್ಸವ ಆಯೋಜಿಸುವ ಮೂಲಕ ಸಂಬಂಧ ಗಟ್ಟಿಗೊಳಿಸುವುದಲ್ಲದೆ ಕಲಾವಿದರಿಗೆ ಅವರ ಪ್ರತಿಭೆಯ ಪ್ರದರ್ಶನ, ಸಂಸ್ಕೃತಿ ಮತ್ತು ಕಲೆಯನ್ನು ಜಾಗತಿಕ ಪ್ರೇಕ್ಷಕರಿಗೆ ಪ್ರದರ್ಶಿಸಲು ವೇದಿಕೆ ಒದಗಿಸಿದೆ. ಪ್ರತಿನಿತ್ಯ ಸರಾಸರಿ 69,000 ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಪ್ರತಿನಿತ್ಯ 70,000ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುವ ಸಾಧ್ಯತೆ ಇದೆ.
ಶಾಪಿಂಗ್ ಉತ್ಸವ
ವಿಮಾನ ನಿಲ್ದಾಣದಲ್ಲಿ ಹಬ್ಬದ ಉತ್ಸಾಹಕ್ಕೆ ಪೂರಕವಾಗಿ ಸೆಪ್ಟೆಂಬರ್ 22ರಿಂದ 30ರವರೆಗೆ ಶಾಪಿಂಗ್ ಉತ್ಸವವನ್ನೂ ಆಯೋಜಿಸಿದ್ದು ಪ್ರಯಾಣಿಕರು 999ರೂ.ಗಳ ಕೊಳ್ಳುವಿಕೆಗೆ ನಿಶ್ಚಿತ ಉಡುಗೊರೆ ಪಡೆಯಬಹುದು ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಡ್ಯೂಟಿ-ಫ್ರೀ ಮಳಿಗೆಗಳಲ್ಲಿ 99ಡಾಲರ್ ಕೊಳ್ಳುವಿಕೆಗೆ ನಿಶ್ಚಿತ ಉಡುಗೊರೆ ಪಡೆಯಬಹುದು.