ಚಿತ್ರಗಳು : ಬೆಂಗಳೂರು ಶಾಲೆಗೆ ಲಗ್ಗೆ ಹಾಕಿದ ಚಿರತೆ
ಬೆಂಗಳೂರು, ಫೆಬ್ರವರಿ 8 : ಸುಮಾರು 13 ಗಂಟೆಗಳ ಕಾರ್ಯಾಚರಣೆಯ ಬಳಿಕ ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ. ಚಿರತೆ ಹಿಡಿಯುವ ಕಾರ್ಯಾಚರಣೆ ವೇಳೆ ಇಬ್ಬರ ಮೇಲೆ ಅದು ದಾಳಿ ಮಾಡಿ, ಗಾಯಗೊಳಿಸಿದೆ.
ಭಾನುವಾರ ಮುಂಜಾನೆ 4.15ರ ಸುಮಾರಿಗೆ ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆಯನ್ನು ಸಂಜೆ 7.30ಕ್ಕೆ ಸೆರೆ ಹಿಡಿಯಲಾಯಿತು. ಬಂದೂಕಿನ ಮೂಲಕ ಅರವಳಿಕೆ ಚುಚ್ಚುಮದ್ದು ಹೊಡೆದು ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿದು, ಬನ್ನೇರುಘಟ್ಟ ಉದ್ಯಾನವನಕ್ಕೆ ತೆಗೆದುಕೊಂಡು ಹೋಗಲಾಗಿದೆ. [ಶಾಲೆಗೆ ನುಗ್ಗಿದ ಚಿರತೆ ಸೆರೆ ಸಿಕ್ಕಿತು]
'ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ 50 ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸರು, ವನ್ಯಜೀವಿ ತಜ್ಞರು ಸೇರಿದಂತೆ 250 ಮಂದಿ ಪಾಲ್ಗೊಂಡಿದ್ದರು' ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಅವರು ಹೇಳಿದ್ದಾರೆ. [ಚಿರತೆ ಶಾಲೆಯಲ್ಲಿ ಇಲ್ಲ ಎಂದ ಅಧಿಕಾರಿಗಳು]
'ಈ ಚಿರತೆಯ ವಯಸ್ಸು ಸುಮಾರು 10 ವರ್ಷಗಳಿರಬಹುದು. ಅದಕ್ಕೆ ಯಾವುದೇ ತೊಂದರೆ ಆಗದಂತೆ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಬನ್ನೇರುಘಟ್ಟದಲ್ಲಿ ಕೆಲವು ದಿನಗಳ ಕಾಲ ಅದರ ಮೇಲೆ ನಿಗಾ ವಹಿಸಿ, ವರ್ತನೆಯನ್ನು ಅವಲೋಕಿಸಿ ನಂತರ ಕಾಡಿಗೆ ಬಿಡುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಅರಣ್ಯಾಧಿಕಾರಿ ನರೇಂದ್ರ ಬಾಬು ತಿಳಿಸಿದ್ದಾರೆ. ಚಿರತೆ ಹಿಡಿಯುವ ಕಾರ್ಯಾಚರಣೆ ಚಿತ್ರಗಳು......

ಜೀವಂತವಾಗಿ ಸೆರೆ ಸಿಕ್ಕ ಚಿರತೆ
ವರ್ತೂರು ಸಮೀಪದ ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಸುಮಾರು 13 ಗಂಟೆಗಳ ಚಿರತೆ ಹಿಡಿಯುವ ಕಾರ್ಯಾಚರಣೆ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಬಂದೂಕಿನ ಮೂಲಕ ಅರವಳಿಕೆ ಚುಚ್ಚುಮದ್ದನ್ನು ಹೊಡೆದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿಯಲಾಯಿತು.

ಚಿರತೆ ಘರ್ಜನೆ ಕೇಳಿದ ಭದ್ರತಾ ಸಿಬ್ಬಂದಿ
ಭಾನುವಾರ ಮುಂಜಾನೆ 5.15ರ ಸುಮಾರಿಗೆ ಮೂತ್ರ ವಿಸರ್ಜನೆಗೆ ತೆರಳಿದ್ದ ಶಾಲೆಯ ಭದ್ರತಾ ಸಿಬ್ಬಂದಿ ಬಾಬು ಅವರು ಮೊದಲು ಚಿರತೆಯ ಘರ್ಜನೆಯನ್ನು ಕೇಳಿದ್ದಾರೆ. ತಕ್ಷಣ ಅವರು ಭದ್ರತಾ ವಿಭಾಗದ ಇತರ ಸಿಬ್ಬಂದಿಗೆ ವಿಷಯ ತಿಳಿಸಿದರು. ನಂತರ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಮುಂಜಾನೆ 4.15ರ ಸುಮಾರಿಗೆ ಶಾಲೆಯ ಪಕ್ಕದ ನೀಲಗಿರಿ ತೋಪಿನಿಂದ ಚಿರತೆ ಶಾಲೆಯ ಆವರಣ ಪ್ರವೇಶಿಸಿರುವುದು ತಿಳಿದುಬಂದಿತು. ತಕ್ಷಣ ವರ್ತೂರು ಠಾಣೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಾಚಣೆ ಅಂತ್ಯಗೊಳಿಸಲು ನಿರ್ಧಾರ
ಚಿರತೆ ಬಂದಿರುವ ಬಗ್ಗೆ ಮಾಹಿತಿ ಪಡೆದು ಶಾಲೆಗೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸರು ಮಧ್ಯಾಹ್ನ 1 ಗಂಟೆಯ ತನಕ ಹುಡುಕಾಟ ನಡೆಸಿದರೂ ಚಿರತೆ ಪತ್ತೆಯಾಗಲಿಲ್ಲ. ಚಿರತೆ ಹೊರ ಹೋಗಿರಬಹುದು ಎಂದು ಕಾರ್ಯಾಚರಣೆಯನ್ನು ನಿಲ್ಲಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಅಷ್ಟರಲ್ಲೇ ಚಿರತೆ ಪ್ರತ್ಯಕ್ಷವಾಯಿತು.

ಶಾಲೆಯ ಆವಣಕ್ಕೆ ನುಗ್ಗಿದ ಚಿರತೆ
ಶಾಲೆಯ ಪಕ್ಕದಲ್ಲಿದ್ದ ಪೊದೆಯಲ್ಲಿ ಅಡಗಿದ್ದ ಚಿರತೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಮತ್ತೆ ಶಾಲೆಯ ಆವರಣಕ್ಕೆ ನುಗ್ಗಿತು. ಸುಮಾರು 8 ಅಡಿ ಎತ್ತರದ ಶಾಲೆಯ ಕಾಪೌಂಡ್ ಮೇಲೆ ಹತ್ತಿ ಕಟ್ಟಡದ ಒಳಕ್ಕೆ ನುಗ್ಗಲು ಪ್ರಯತ್ನ ನಡೆಸಿತು. ಆವಣರದಲ್ಲಿಯೇ ಕೆಲಹೊತ್ತು ಓಡಾಡಿದ ಚಿರತೆ ಶಾಲೆಯ ಶೌಚಾಲಯದೊಳಗೆ ನುಗ್ಗಿತು. ಸಿಬ್ಬಂದಿಗಳು ಶೌಚಾಲಯದ ಬಾಗಿಲು ಮುಚ್ಚಿ ಅದಕ್ಕೆ ಬಲೆ ಅಳವಡಿಸಿ ಚಿರತೆ ಹಿಡಿಯಲು ಸಿದ್ಧವಾದರು.

ತಪ್ಪಿಸಿಕೊಂಡು ಬಂದ ಚಿರತೆ
ಸುಮಾರು 15 ನಿಮಿಷ ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆ ಮತ್ತೆ ಕಿಂಡಿಯೊಂದರಿಂದ ಹೊರ ಬಂದಿತು. ಶೌಚಾಲಯಕ್ಕೆ ಅಳವಡಿಸಿದ್ದ ಬಲೆಯೂ ಕಳಚಿದ ಕಾರಣ ಚಿರತೆ ಜೀವಂತವಾಗಿ ಸೆರೆ ಸಿಕ್ಕಲಿಲ್ಲ. ಹೊರಗೆ ಬಂದ ಚಿರತೆ ಜನರನ್ನು ನೋಡಿ ಗಾಬರಿಗೊಂಡು ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದಿತು. ಈಜುಕೊಳದ ಬಳಿ ನಿಂತಿದ್ದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರ ಮೇಲೆ ಮೊದಲು ದಾಳಿ ಮಾಡಿತು. ನಂತರ ಅರಣ್ಯ ಇಲಾಖೆ ಕಾರು ಚಾಲಕ ಬೆನ್ನಿಸ್ ಅವರ ಮೇಲೆ ದಾಳಿ ಮಾಡಿತು. ಈ ಸಮಯದಲ್ಲಿ ಸಿಬ್ಬಂದಿ ಅದಕ್ಕೆ ಅರವಳಿಕೆ ಚುಚ್ಚು ಮದ್ದು ಹೊಡೆದರು.

ಮತ್ತೆ ಶೌಚಾಲಯಕ್ಕೆ ನುಗ್ಗಿತು
ಅರವಳಿಕೆ ಚುಚ್ಚುಮದ್ದು ಬೀಳುತ್ತಿದ್ದಂತೆ ಗಾಬರಿಗೊಂಡ ಚಿರತೆ ಮತ್ತೆ ಶೌಚಾಲಯದೊಳಗೆ ನುಗ್ಗಿತು. ಕೆಲವು ನಿಮಿಷಗಳ ಬಳಿಕ ಅದರ ಪ್ರಜ್ಞೆ ತಪ್ಪಿತು. ರಾತ್ರಿ 7.30ಕ್ಕೆ ಚಿರತೆಯನ್ನು ಹಿಡಿದ ಸಿಬ್ಬಂದಿ ಬೋನಿಗೆ ಹಾಕಿಕೊಂಡು ಬನ್ನೇರುಘಟ್ಟ ಉದ್ಯಾನಕ್ಕೆ ತೆಗೆದುಕೊಂಡು ಹೋದರು.

ಸುಮಾರು 10 ವರ್ಷದ ಚಿರತೆ
ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಅರಣ್ಯಾಧಿಕಾರಿ ನರೇಂದ್ರ ಬಾಬು ಅವರು, 'ಈ ಚಿರತೆ ಸುಮಾರು 10 ವರ್ಷದ್ದಿರಬಹುದು. ಯಾವುದೇ ತೊಂದರೆ ಆಗದಂತೆ ಸುರಕ್ಷಿತವಾಗಿ ಅದನ್ನು ಸೆರೆ ಹಿಡಿಯಲಾಗಿದೆ. ಬನ್ನೇರುಘಟ್ಟ ಉದ್ಯಾನದಲ್ಲಿ ಕೆಲ ದಿನ ಅದರ ಮೇಲೆ ನಿಗಾ ವಹಿಸಿ, ವರ್ತನೆಯನ್ನು ಅವಲೋಕಿಸಿ ಕಾಡಿಗೆ ಬಿಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.












Click it and Unblock the Notifications