ದೇಶದಲ್ಲಿ ಈಗಿರುವುದು ಹಿಟ್ಲರ್ ಆಡಳಿತ: ಸಿಎಂ ಗುಡುಗು
ಕೇಂದ್ರ ಸರ್ಕಾರ ಹಿಟ್ಲರ್ ಮಾದರಿಯ ಆಡಳಿತ ನಡೆಸುತ್ತಿದೆ ಎಂದ ಸಿಎಂ. ಮಾಧ್ಯಮಗಳೊಂದಿಗೆ ಶನಿವಾರ ಬೆಳಗ್ಗೆ ಮಾತನಾಡಿದ ಸಿದ್ದರಾಮಯ್ಯ. ಗುಜರಾತ್ ನಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ, ಡಿಕೆಶಿ ಮನೆ ಮೇಲೆ ಐಟಿ ರೈಡ್ ವಿರುದ್ಧ ಕಿಡಿ.
ಬೆಂಗಳೂರು, ಆಗಸ್ಟ್ 5: ''ಸದ್ಯದ ಮಟ್ಟಿಗೆ ದೇಶದಲ್ಲಿ ಹಿಟ್ಲರ್ ಆಡಳಿತವಿದ್ದು, ವಿರೋಧ ಪಕ್ಷದವರನ್ನು ಟಾರ್ಗೆಟ್ ಮಾಡುವ ಸಂಸ್ಕೃತಿ ಅನುಸರಿಸುತ್ತಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯ ಮೇಲೆ ಐಟಿ ದಾಳಿಯ ಕುರಿತಂತೆ, ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ದೇಶದಲ್ಲಿ ಹಿಟ್ಲರ್ ಆಡಳಿತವಿದೆ ಎಂದು ಗುಡುಗಿದ ಅವರು, ತಮ್ಮ ಮಾತಿಗೆ ಪೂರಕವಾಗಿ, ಶುಕ್ರವಾರ ಗುಜರಾತ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಕಾರಿನ ಮೇಲೆ ಕಲ್ಲೆಸೆತ ನಡೆಸಿರುವ ಘಟನೆಯನ್ನು ಸ್ಮರಿಸಿಕೊಂಡರು.
ಗುಜರಾತ್ ನಲ್ಲಿ ಪ್ರವಾಹ ಸಂದರ್ಭ ಎದುರಾಗಿದೆ. ಪ್ರವಾಹ ಪೀಡಿತರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ರಾಹುಲ್ ಗಾಂಧಿ ಗುಜರಾತ್ ಗೆ ಶುಕ್ರವಾರ ಭೇಟಿ ನೀಡಿದ್ದರು. ಇಂಥ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಕಲ್ಲು ಎಸೆದು ದಾಳಿ ನಡೆಸಲಾಗಿದೆ. ಇದು ಹಿಟ್ಲರ್ ಮಾದರಿ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಹರಿಹಾಯ್ದರು.
ಇನ್ನು, ಕೇಂದ್ರ ಸರ್ಕಾರವು ವಿರೋಧ ಪಕ್ಷದ ನಾಯಕರು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರಾದ ಅನಂತ ಕುಮಾರ್, ಯಡಿಯೂರಪ್ಪ, ಸದಾನಂದ ಗೌಡರ ಮೇಲೆಯೂ ಪ್ರಕರಣಗಳಿವೆ. ಅವುಗಳನ್ನು ಉಪಯೋಗಿಸಿ ಯಾಕೆ ದಾಳಿ ಅಥವಾ ತನಿಖೆ ನಡೆಸಬಾರದು? ಎಂದು ಸಿಎಂ ಪ್ರಶ್ನಿಸಿದರು.
ಹಾಗಾದರೆ, ಐಟಿ ದಾಳಿಯು ತಪ್ಪೇ ಎಂದು ಕೇಳಿದ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದ ಸಿದ್ದರಾಮಯ್ಯ, ''ಐಟಿ ಇಲಾಖೆ ದಾಳಿ ತಪ್ಪೆಂದು ಹೇಳುತ್ತಿಲ್ಲ. ಅವರ ಬಳಿ ಸೂಕ್ತ ದಾಖಲೆಯಿದ್ದರೆ ದಾಳಿ ನಡೆಸಲಿ. ಅಲ್ಲದೆ, ಐಟಿ ಇಲಾಖೆಗೆ ಯಾರ ಮನೆಯ ಮೇಲಾದರೂ ದಾಳಿ ನಡೆಸುವ ಅಧಿಕಾರವಿದೆ. ಆದರೆ, ಡಿಕೆಶಿ ವಿಚಾರದಲ್ಲಿ ಅವರು ಸಿಆರ್ ಪಿಎಫ್ ಕರೆಸಿಕೊಂಡು ದಾಳಿ ನಡೆಸಿದ ರೀತಿ ಸರಿಯಲ್ಲ ಎಂದೆನಿಸುತ್ತಿದೆ'' ಎಂದರು.












Click it and Unblock the Notifications