ರಾಜಕೀಯ ಸಂಚಲನ ಮೂಡಿಸಿದ ಎಚ್ಡಿಕೆ ಸಿದ್ದರಾಮಯ್ಯ ಭೇಟಿ
Recommended Video

ಬೆಂಗಳೂರು, ಸೆ.21: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಶುಕ್ರವಾರ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸ ಕಾವೇರಿಗೆ ತೆರಳಿ ಮಾತುಕತೆ ನಡೆಸಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಗೃಹ ಕಚೇರಿ ಕೃಷ್ಣಾಕ್ಕೆ ನಿತ್ಯ ಭೇಟಿ ನೀಡಿದರೂ ಪಕ್ಕದಲ್ಲೇ ಇರುವ ಕಾವೇರಿ ನಿವಾಸಕ್ಕೆ ಈವರೆಗೂ ಭೇಟಿ ನೀಡಿರಲಿಲ್ಲ.
ಶುಕ್ರವಾರ ಮಧ್ಯಾಹ್ನ ಕಾವೇರಿ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಬೆಳವಣಿಗೆಗಳ ಕುರಿತು ಗಂಟೆಗಳ ಕಾಲ ಚರ್ಚೆ ಡೆಸಿದರು.
ಅಚ್ಚರಿಕೆ ಸಂಗತಿ ಎಂದರೆ ಕುಮಾರಸ್ವಾಮಿ ಕಾವೇರಿ ನಿವಾಸ ಭೇಟಿ ಈ ಮುಂಚೆ ನಿಗದಿಯಾಗಿರಲಿಲ್ಲ, ಡಿಸಿಎಂ ಡಾ. ಜಿ ಪರಮೇಶ್ವರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೆರಳಿದ ಕೆಲವೇ ನಿಮಿಷಗಳಲ್ಲಿ ಸಿಎಂ ಕುಮಾರಸ್ವಾಮಿ ಕೂಡ ಆಕಸ್ಮಿಕ ಎಂಬಂತೆ ಕಾವೇರಿಗೆ ತೆರಳಿದ್ದಾರೆ.

ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಕೂಡ ಅಲ್ಲಿಯೇ ಹಾಜರಿದ್ದರು, ಈ ವೇಳೆ ಸಿದ್ದರಾಮಯ್ಯ ಕುಮಾರಸ್ವಾಮಿಯವರಿಗೆ ಸಂಯಮದ ಪಾಠ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಹಾಸನದಲ್ಲಿ ಬಿಜೆಪಿ ವಿರುದ್ಧ ರಾಜಕೀಯ ದಂಗೆ ಎಬ್ಬಿಸಲು ಕರೆ ನೀಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಮಾತಿಗೆ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಒಬ್ಬ ಮುಖ್ಯಮಂತ್ರಿಯಾಗಿ ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು, ನೀವು ಹೇಳುವ ಉದ್ದೇಶ ಒಳ್ಳೆಯದೇ ಆದರೂ ಅದಕ್ಕೆ ಸಕಾರಣವೂ ಇರಬಹುದು ಆದರೆ ಮುಖ್ಯಮಂತ್ರಿಯಾಗಿ ಮಾತನಾಡುವಾಗ, ಸಂವಿಧಾನಾತ್ಮಕ ಹಾಗೂ ಕಾನೂನು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಮಾತನಾಡಬೇಕಾಗುತ್ತದೆ. ನಿಮಗೂ ಸಾಕಷ್ಟು ಅನುಭವ ಇದೆ ಎಂದರು.
ಕೇವಲ ಹೇಳಿಕೆಗಳಿಂದಲೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಹೀಗಾಗಿ ನಿಮಗೆ ಎರಡು ಹಿತವಚನ ಹೇಳಬೇಕೆನಿಸಿತು, ಅದಕ್ಕಾಗಿ ಹೇಳಿದ್ದೇನೆ ಇನ್ನುಮುಂದೆ ಸರ್ಕಾರ, ಪಕ್ಷಕ್ಕೆ ಮುಜುಗರವಾಗದಂತೆ ಮಾತನಾಡಿದರೆ ಒಳತು ಎಂದು ಸಲಹೆ ನೀಡಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.
ಅಷ್ಟೇ ಅಲ್ಲ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ದೌರ್ಜನ್ಯವನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರತಿತಂತ್ರ ಹೋರಾಟ ರೂಪಿಸಬೇಕು.ಇಲ್ಲದಿದ್ದರೆ ಬಿಜೆಪಿಯನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications