ಕಾವೇರಿ ನೀರು ಹಂಚಿಕೆ: ಮಂಗಳವಾರ ತಜ್ಞರ ಜತೆ ಮಹತ್ವದ ಸಭೆ
ಬೆಂಗಳೂರು, ಆಗಸ್ಟ್ 28: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕನ್ನಡಿಗರ ಮತ್ತು ಕರ್ನಾಟಕದ ರೈತರ ರಕ್ಷಣೆ ನಿಟ್ಟಿನಲ್ಲಿ ನೀರಾವರಿ ತಜ್ಞರು, ರೈತ ಮುಖಂಡರು, ಕಾನೂನು ತಜ್ಞರು, ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳನ್ನು ಒಳಗೊಂಡ ಮಹತ್ವದ ಸಭೆ ನಾಳೆ ಆಗಸ್ಟ್ 29ರಂದು ಮಂಗಳವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಕರೆಯಲಾಗಿದೆ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿಯಿಂದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ 'ನಮ್ಮ ಜಲ - ನಮ್ಮದು' ಘೋಷವಾಕ್ಯದಡಿ ಸಭೆ ನಡೆಯಲಿದೆ. ಈ ವೇಳೆ ಮಹತ್ವದ ವಿಚಾರಗಳು ಕುರಿತು ಚರ್ಚೆ, ಸಮಾಲೋಚನೆ ನಡೆಯಲಿದೆ.

ಎಷ್ಟು ವರ್ಷಗಳ ಕಾಲ ಕಾವೇರಿ ನೀರಿಗಾಗಿ ಸಾಕಷ್ಟು ಹೋರಾಟ ಮಾಡಿರುವ ಕರ್ನಾಟಕದ ಅನೇಕ ಪ್ರಮುಖರನ್ನು ಬಿಟ್ಟು ಕೇವಲ ಮೂರು ಪಕ್ಷಗಳು ನಡೆಸಿದ ಸಭೆಯನ್ನು ಸರ್ವಪಕ್ಷ ಸಭೆಯೆಂದು ಕರೆಯಲಾಗದು ಎಂದು ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದಿಂದ ತಾತ್ಸಾರ ಧೋರಣೆ
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ ಸಹ ಮುಂಜಾಗ್ರತೆಯಿಂದ ಮೊದಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಸಂಕಷ್ಟ ಕಾಲದಲ್ಲಿ ನೀರನ್ನು ಬಿಡಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಲು ರಾಜ್ಯ ಸರ್ಕಾರ ವೈಫಲ್ಯಗೊಂಡಿದೆ. ರಾಜ್ಯದ ರೈತರ ನೆಲ, ಜಲ ವಿಚಾರದಲ್ಲಿ ಸರ್ಕಾರವು ತಾತ್ಸಾರ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ.

ತಜ್ಞರು ಮತ್ತು ರೈತರನ್ನು ಒಳಗೊಂಡ ಸಭೆಯನ್ನು ನಡೆಸುವ ಮೂಲಕ ವಾಸ್ತವವನ್ನು ಅರಿತು ಹೋರಾಟದ ಮುಂದಿನ ಹೆಜ್ಜೆ ಇರಿಸಲಿದ್ದೇವೆ ಎಂದು ಪಕ್ಷದ ಸದಸ್ಯರು ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಕುರಿತು ನಡೆದ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಮಾತನಾಡಿಲ್ಲ. ಅಲ್ಲದೇ ಸರ್ಕಾರ ಸಹ ತಮಿಳುನಾಡಿಗೆ ನೀರನ್ನು ಹರಿಸಿದೆ. ಬಳಿಕ ಎಚ್ಚೆತ್ತು ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ. ಇದೆಲ್ಲ ಬೆಳವಣಿಗೆಗೆ ಬಿಜೆಪಿ ನಾಯಕರು, ರೈತ ಮುಖಂಡರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ನಮ್ಮ ಹಕ್ಕನ್ನು ಬಿಟ್ಟುಕೊಡಬಾರದು
ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯಬೇಕು. ನಮ್ಮ ನೀರಿನ ಹಕ್ಕನ್ನು ಬೇರೆ ರಾಜ್ಯದವರಿಗೆ ಬಿಟ್ಟು ಕೊಡಬಾರದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಈ ಕುರಿತು ಇತ್ತೀಚೆಗೆ ರಾಜ್ಯ ಸರ್ಕಾರ ಸರ್ವಪಕ್ಷದ ಸಭೆ ಕರೆದಿತ್ತು. ಆದರೆ ಇದಕ್ಕೆ ಎಎಪಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಕಾರಣಕ್ಕಾಗಿ ಕಾವೇರಿ ನೀರು ಹಂಚಿಕೆ ಕುರಿತು ನಾಳೆ ಮಂಗಳವಾರ ನೀರಾವರಿ ತಜ್ಞರು, ರೈತ ಮುಖಂಡರು, ಕಾನೂನು ತಜ್ಞರು, ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳ ನೇತೃತ್ವದಲ್ಲಿ ಮಹತ್ವದ ಸಭೆ ಹಮ್ಮಿಕೊಳ್ಳಲಾಗಿದೆ.












Click it and Unblock the Notifications