ರೈತರ ಸಾಲ ವಸೂಲಿಗೆ ಸರ್ಕಾರದಿಂದ ಬ್ರೇಕ್
ಬೆಂಗಳೂರು, ಜು.12: ಬರದ ಭೀತಿ ಎದುರಿಸುತ್ತಿರುವ ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೈತರ ಸಂಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ರೈತರ ಸಾಲ ವಸೂಲಿ ಮುಂದೂಡಲಾಗಿದ್ದು ಅಲ್ಪಾವಧಿ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಸಕಾಲದಲ್ಲಿ ಮಳೆ ಬಾರದೆ ಹಲವು ಜಿಲ್ಲೆಗಳಲ್ಲಿ ಬರ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ಉತ್ತರಿಸಿದರು.[ಜೂನ್ ಮಳೆ: 113 ವರ್ಷದ ಇತಿಹಾಸದಲ್ಲಿ ಕಡಿಮೆ ಮಳೆ]
ಬರ ನಿರ್ವಹಣೆಗಾಗಿ ಎದುರಿಸಲು ಸರ್ಕಾರ ಸಜ್ಜಾಗಿದೆ. ಎಷ್ಟೇ ಖರ್ಚಾದರೂ ತೊಂದರೆ ಇಲ್ಲ. ಕುಡಿಯುವ ನೀರು ಕೊಡಬೇಕು. ಹೊಸದಾಗಿ ಬೋರ್ವೆಲ್ ಕೊರೆಯಬೇಕು. ನೀರು ಇಲ್ಲದ ಕಡೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕಾಗುತ್ತದೆ. ಈ ಎಲ್ಲಾ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ನೀಡಿದ್ದೇನೆ. ಪ್ರತಿಪಕ್ಷಗಳು ನೀಡುವ ಸಲಹೆಗಳನ್ನೂ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.[ಕರ್ನಾಟಕದಲ್ಲಿ 52 ವರ್ಷದಲ್ಲೇ ಅತಿ ಕಡಿಮೆ ಮಳೆ]

ಬಿಜೆಪಿ ಸದಸ್ಯರ ಸಲಹೆಯನ್ನು ಪರಿಗಣಿಸುತ್ತೇನೆ:
ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೂ ಬರ ಎದುರಿಸಲು ಸಜ್ಜಾಗಿರುವಂತೆ ಸೂಚಿಸಲಾಗಿದೆ. ಬಿಜೆಪಿ ಸದಸ್ಯರು ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಅದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೆ ಬೇಕಾದಾಗಲೆಲ್ಲ ಹಣ ಬಿಡುಗಡೆ ಮಾಡಲಾಗುತ್ತದೆ.
ಪಿಡಿ ಖಾತೆಯಲ್ಲಿ 564 ಕೋಟಿ ಹಣವಿದ್ದು, 176 ಕೋಟಿ ವೆಚ್ಚವಾಗಿದೆ. ಶಾಸಕರ ಕಾರ್ಯಪಡೆ ಸಮಿತಿ ನೀಡಿದ ಕಾಮಗಾರಿಗಳಿಗೆ ತಕ್ಷಣವೇ ಅನುಮೋದನೆ ನೀಡುತ್ತೇನೆ. ಅಧಿವೇಶನ ಮುಗಿದ ಕೂಡಲೇ ಜಿಲ್ಲಾಧಿಕಾರಿ-ಸಿಇಓಗಳ ಸಭೆ ಕರೆದು ಚರ್ಚಿಸುತ್ತೇನೆ.

125 ತಾಲೂಕುಗಳಲ್ಲಿ ಬರ:
ರಾಜ್ಯದ 125 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 1062 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಬರ ಪರಿಸ್ಥಿತಿ ಎದುರಿಸಲು ಸರ್ಕಾರದಿಂದ 400 ಕೋಟಿ ಬಿಡುಗಡೆ ಮಾಡಿದೆ. ಕುಡಿಯುವ ನೀರಿಗಾಗಿ ಈ ಸಾಲಿನಲ್ಲಿ ಕೇಂದ್ರ, ರಾಜ್ಯದಿಂದ 2000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.

ಬರ ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು
ತುರ್ತು ಕುಡಿಯುವ ನೀರು ಸರಬರಾಜಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ 187.70 ಕೋಟಿ ಹಣ ಬಿಡುಗಡೆ ಮಾಡಿದ್ದರೆ, ನಗರಾಭಿವೃದ್ಧಿ ಇಲಾಖೆ 97.40 ಕೋಟಿ ಹಣ ಬಿಡುಗಡೆ ಮಾಡಿದೆ.
6500 ಗ್ರಾಮೀಣ ನೀರು ಸರಬರಾಜು ತುರ್ತು ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. 5980 ಶಾಲೆಗಳು ಮತ್ತು 11500 ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡಿದೆ.

18.92ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ:
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್ನಲ್ಲಿ ಕೃಷಿ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಜೂನ್ ಅಂತ್ಯದ ವೇಳೆಗೆ 18.92 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ವಾಡಿಕೆ ಪ್ರಕಾರ 25.36 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಆಗಬೇಕಿತ್ತು.

8 ಕೆರೆ ಮಾತ್ರ ಭರ್ತಿ
ರಾಜ್ಯದಲ್ಲಿ ಈಗ ಭರ್ತಿಯಾಗಿರುವ ಕೆರೆಗಳ ಸಂಖ್ಯೆ 8. ರಾಜ್ಯದಲ್ಲಿರುವ 3554 ನೀರಾವರಿ ಕೆರೆಗಳಲ್ಲಿ 8 ತುಂಬಿದ್ದು, 45 ಕೆರೆಗಳು ಶೇ.50ರಿಂದ 90ರಷ್ಟು ತುಂಬಿವೆ. 114 ಕೆರೆಗಳು ಶೇ.30-50ರಷ್ಟು ತುಂಬಿದ್ದು, 1062 ಕೆರೆಗಳು ಶೇ.30ರಷ್ಟು ತುಂಬಿವೆ. 2328 ಕೆರೆಗಳಲ್ಲಿ ನೀರಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ 16 ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ವರ್ಷ ನೀರಿನ ಮಟ್ಟ ಕಡಿಮೆ ಇದೆ. ವಿದ್ಯುಚ್ಛಕ್ತಿ ಉತ್ಪಾದಿಸುವ ಜಲಾಶಯಗಳ ಗರಿಷ್ಠ ನೀರಿನ ಸಾಮರ್ಥ್ಯ 328 ಟಿಎಂಸಿ ಇದ್ದು, 50 ಟಿಎಂಸಿ ನೀರು ಮಾತ್ರ ಲಭ್ಯವಿದೆ.












Click it and Unblock the Notifications